ನಾಳೆ SSLC ರಿಸಲ್ಟ್: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು, ಆ. 06: ಬಹುದೊಡ್ಡ ಸವಾಲನ್ನು ಎಳೆದುಕೊಂಡು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮಾಡಿ ಮುಗಿಸಿದ್ದಾರೆ. ಕೊರೊನಾ ವೈರಸ್ ಹರಡುವ ಭಯದಲ್ಲಿ ಸುರಕ್ಷಿತವಾಗಿ ಪರೀಕ್ಷೆಗಳು ಮುಗಿದಿದ್ದವು. ಜೊತೆಗೆ ಪರೀಕ್ಷಾ ಮೌಲ್ಯಮಾಪನ ಕೂಡ ಶುರುವಾಗಿತ್ತು. ಇದೀಗ ನಾಳೆ ಎಸ್ಎಸ್ಎಲ್ ಪರೀಕ್ಷಾ ಫಲಿತಾಂಶ ಬರಲಿದೆ ಎಂಬ ಸುದ್ದಿ ಬಂದಿದೆ.
Recommended Video
ನಾಳೆ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂಬ ಸುದ್ದಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಾರಿ ಕೊರೊನಾ ವೈರಸ್ನಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಇನ್ನೇನು 10ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಬೇಕು ಎಂಬ ಸಮಯದಲ್ಲಿ ಕೋವಿಡ್-19 ದಿಢೀರ್ ಹಾವಳಿ ಶುರುಮಾಡಿತ್ತು. ಮುಂದುವರೆದ ಅಮೆರಿಕ, ಇಟಲಿ, ಚೀನಾ ಹಾಗೂ ಇಂಗ್ಲಂಡ್ ನಂತಹ ದೇಶಗಳೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿ ಹೋಗಿದ್ದವು. ಆತಂಕದ ಮಧ್ಯೆ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮುಗಿಸಿದ್ದಾರೆ.

ಪರೀಕ್ಷಾ ಸವಾಲು
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿತ್ತು. ಎಸ್ಎಸ್ಎಲ್ಸಿ ಪರೀಕ್ಷೆ ಪ್ರತಿಷ್ಠೆಯ ಪ್ರಶ್ನೆಯಾಗಿರದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಮುಖ್ಯವಾಗಿತ್ತು. ಅದೆಲ್ಲದರ ಮಧ್ಯೆ ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು. ಅದಾದ ಬಳಿಕ ಮೌಲ್ಯಮಾಪನ ಶುರುವಾಗಿತ್ತು. ರಾಜ್ಯಾದ್ಯಂತ ಒಟ್ಟು 7.5 ಲಕ್ಷ ವಿದ್ಯಾಥಿಗಳು ಪರೀಕ್ಷೆಯನ್ನು ಬರೆದಿದ್ದರು.
ಪರೀಕ್ಷಾ ಸಂದರ್ಭದಲ್ಲಿ 33 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಅವರಿಗೆ ಪರೀಕ್ಷೆಯನ್ನು ನಿರಾಕರಿಸಿ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಅವಕಾಶವನ್ನ ಕಲ್ಪಿಸಲಾಗುತ್ತಿದೆ.

ನಾಳೆ ಫಲಿತಾಂಶ?
ಇದೀಗ ನಾಳೆ (ಆ. 07) ರಂದು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂಬ ಸುದ್ದಿ ಬಂದಿದೆ. ಅದಕ್ಕೆ ಸ್ಪಷ್ಟನೆ ಕೊಟ್ಟಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ನಾಳೆ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಾಳೆ SSLC ಫಲಿತಾಂಶ ಪ್ರಕಟ ಎಂಬ ಸುದ್ದಿ ಸತ್ಯವಲ್ಲ. ಫಲಿತಾಂಶ ಪ್ರಕಟ ಮಾಡಲು ಇನ್ನೂ ದಿನಾಂಕ ನಿಶ್ಚಯವಾಗಿಲ್ಲ. ಅಧಿಕೃತವಾಗಿ ಶಿಕ್ಷಣ ಇಲಾಖೆ ಸಮಗ್ರ ಮಾಹಿತಿಯನ್ನು ಕೊಡಲಿದೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾಳೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟದ ಸುದ್ದಿ ಸುಳ್ಳು ಎಂದಿದ್ದಾರೆ.

ಪರೀಕ್ಷೆ ಬರೆದವರು
ಈ ಬಾರಿ 7,43,477 ಸಾಮಾನ್ಯ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಂಟೈನ್ಮೆಂಟ್ ಪ್ರದೇಶಗಳ 3911 ವಿದ್ಯಾರ್ಥಿಗಳು, ಕೋವಿಡ್-19 ಹೊರತು ಪಡಿಸಿ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಸರ್ಕಾರಿ, ಖಾಸಗಿ ವಸತಿ ನಿಲಯಗಳಲ್ಲಿ ಇದ್ದು 1446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ನೆರೆ ರಾಜ್ಯದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 41 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 590 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದರು, 12,535 ವಿದ್ಯಾರ್ಥಿಗಳು ಪರೀಕ್ಷೆ ಬರೆದು 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಕಳೆದ ಬಾರಿ ಫಲಿತಾಂಶ
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶವನ್ನು ಏಪ್ರಿಲ್ 30, 2019ರಂದು ಪ್ರಕಟಿಸಲಾಗಿತ್ತು. ಈ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪರೀಕ್ಷೆ ಮೂರು ತಿಂಗಳು ತಡವಾಗಿ ನಡೆಸಲಾಗಿತ್ತು.
ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಎಲ್ಸಿ ಪ್ರಕಟ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದರು. ಇದೀಗ ಪರೀಕ್ಷಾ ಫಲಿತಾಂಶ ಪ್ರಕಟ ಮಾಡುವುದು ಇನ್ನಷ್ಟು ತಡವಾಗಲಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications