ಸಿದ್ದರಾಮಯ್ಯನವರೇ ನೀವು ಮನುಷ್ಯರೋ? ಕಾಡು ಪ್ರಾಣಿಯೋ?: ಶ್ರೀರಾಮುಲು
ಬೆಂಗಳೂರು, ಸೆಪ್ಟಂಬರ್ 12: ನನ್ನನ್ನು ಕಂಡರೆ ಬಿಜೆಪಿ ನಾಯಕರಿಗೆ ಭಯ ಎಂದು ಹೇಳಿದ್ದ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಅವರಿಗೆ ರಾಜ್ಯ ಸಾರಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಸಿದ್ಧರಾಮಯ್ಯ ವಿರುದ್ಧ ಸರಣಿ ಟ್ವಿಟ್ ಮಾಡಿರುವ ಸಚಿವ ಶ್ರೀರಾಮುಲು ಬಿಜೆಪಿಯವರು ನಿಮ್ಮನ್ನು ನೋಡಿ ಹೆದರಿಕೊಳ್ಳಲು ಸಿದ್ದರಾಮಯ್ಯನವರೇ ನೀವು ಕಾಡುಪ್ರಾಣಿಯೋ ಅಥವಾ ಮನುಷ್ಯರೋ? ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ನಾಗರಿಕ ಸಮಾಜದಲ್ಲಿ ಜನರು ಕಾಡುಮೃಗಗಳನ್ನು ಮಾತ್ರ ನೋಡಿ ಹೆದರುತ್ತಾರೆ ಹೊರತು ಮನುಷ್ಯರನ್ನು ನೋಡಿ ಹೆದರಲ್ಲ. ಇಷ್ಟು ನಿಮಗೆ ತಿಳಿಯದಿರುವುದು ದುರ್ದೈವವೇ ಸರಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ನನ್ನನ್ನು ನೋಡಿದರೆ ಬಿಜೆಪಿಯವರಿಗೆ ಭಯ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರೇ ನಿಮಗೆ ನಾಚಿಕೆಯಾಗಬೇಕು. 5 ವರ್ಷ ಮುಖ್ಯಮಂತ್ರಿಯಾಗಿದ್ದ ನಿಮಗೆ ಈಗ ಹೇಳಿಕೊಳ್ಳಲು ಒಂದೇ ಒಂದು ಕ್ಷೇತ್ರವಿಲ್ಲ. ಹೈಕಮಾಂಡ್ ಎದುರು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವೀರಾವೇಷದ ಮಾತುಗಳನ್ನು ಆಡುತ್ತಿದ್ದೀರಿ ಎಂದು ಅವರು ಕುಹುಕವಾಡಿದರು.
|
ಪಕ್ಷಕ್ಕೆ ಚೂರಿ ಹಾಕಿದವರು ಬಿಜೆಪಿಗೆ ಲೆಕ್ಕಕ್ಕಿಲ್ಲ
ನಿಮ್ಮನ್ನು ನೋಡಿ ಹೆದರುವ ಅಥವಾ ಬೆದರುವ ದುಸ್ಥಿತಿ ಖಂಡಿತವಾಗಿಯೂ ಬಿಜೆಪಿಗೆ ಬಂದಿಲ್ಲ. ಎಂತೆಂಥವರನ್ನೇ ಎದುರಿಸಿರುವಾಗ ಅಧಿಕಾರದ ಆಸೆಗಾಗಿ ಬೆಳೆಸಿದ ಪಕ್ಷಕ್ಕೆ ಚೂರಿ ಹಾಕಿ ಬಂದ ನೀವು ನಮಗೆ ಲೆಕ್ಕಕ್ಕೂ ಇಲ್ಲ. ಎರಡು ಸ್ಥಾನದಿಂದ ಆರಂಭವಾದ ಬಿಜೆಪಿ ಜೈತ್ರಯಾತ್ರೆ ಇಂದು 303 ಸ್ಥಾನಗಳವರೆಗೆ ಬಂದಿದೆ. ನಿಮ್ಮಂತಹ ಪಾಳೆಗಾರರನ್ನು ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗೆ ಇದೆ. ಬಿಜೆಪಿ ಕೆಣಕಿದವರು ಎಂತಹ ಹೀನಾಯ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
132 ಸ್ಥಾನದಿಂದ 78 ಸ್ಥಾನಕ್ಕೆ ಕಾಂಗ್ರೆಸ್ ಇಳಿಕೆ
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ 132 ಸ್ಥಾನದಿಂದ 78 ಸ್ಥಾನಕ್ಕೆ ಕಾಂಗ್ರೆಸ್ ಪಕ್ಷವನ್ನು ಕುಸಿಯುವಂತೆ ಮಾಡಿದ್ದು ನಿಮ್ಮ ಸಾಧನೆ. ಚಾಮುಂಡೇಶ್ವರಿಯಲ್ಲಿ 38 ಸಾವಿರ ಮತಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದೀರಿ. ಬಾದಾಮಿಯಲ್ಲಿ ನನ್ನೆದುರು 1,600 ಮತಗಳ ಅಂತರದಲ್ಲಿ ತಿಣಕಾಡಿ ಗೆದ್ದಿದ್ದು ನಿಮ್ಮ ತಾಕತ್ತು ಎಂದರು.
ದಾವಣಗೆರೆಯ ಸಿದ್ದರಾಮೋತ್ಸವ ಜಯಂತಿಗೆ ಬಿಜೆಪಿಯವರು ಹೆದರಿದ್ದಾರೆ ಎಂಬ ನಿಮ್ಮ ಹೇಳಿಕೆ ಬಾಲಿಷತನದಿಂದ ಕೂಡಿದೆ. ಇಂಥ ಹತ್ತು ಪಟ್ಟು ಜನರನ್ನು ಸೇರಿಸಿ ಸಮಾವೇಶ ನಡೆಸುವ ತಾಕತ್ತು ಬಿಜೆಪಿಗೆ ಇದೆ. ನಮ್ಮ ಕಾರ್ಯಕರ್ತರು ಬಿರಿಯಾನಿ, ಎಣ್ಣೆ, 500 ರೂ.ಗೆ ಬಂದು ಜೈ ಹುಲಿಯಾ ಎನ್ನುವವರಲ್ಲ ಎಂದು ಶ್ರೀರಾಮುಲು ಟೀಕಿಸಿದರು.
ಕಾಂಗ್ರೆಸ್ ಪರ ಅಲೆ ಎಂಬುದು ಭ್ರಮೆ
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಶುರುವಾಗಿದೆ ಎಂಬುದು ನಿಮ್ಮ ಭ್ರಮೆಯಷ್ಟೆ. ವಾಸ್ತವ ಚಿತ್ರಣವೇ ಬೇರೆ ಇದೆ. ನಿಜವಾಗಿ ಆರಂಭವಾಗಿರುವುದು ಕಾಂಗ್ರೆಸ್ ಅವಸಾನದ ದಿನಗಳು. ಹಾಸಿಗೆ, ದಿಂಬು, ತಟ್ಟೆ-ಲೋಟ, ಅನ್ನಭಾಗ್ಯ, ಲ್ಯಾಪ್ ಟಾಪ್ ಯೊಜನೆ ಹಾಗೂ ಕಾಮಗಾರಿ ನಡೆಸದೇ ಬಿಲ್ ಮಂಜೂರಾತಿ ಮಾಡಿಕೊಳ್ಳುವ ಬಿಲ್ವಿದ್ಯೆ ನಿಮಗಲ್ಲದೆ ಬೇರೆಯವರಿಗೆ ಬರಲು ಸಾಧ್ಯವೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದವರೆ ನಿಮ್ಮನ್ನು ಮುಗಿಸುತ್ತಾರೆ
ಮನೆಯೊಂದು ಮೂರು ಬಾಗಿಲು ಎಂಬತಾಗಿದ್ದರೂ ಬಿಜೆಪಿ ವಿರುದ್ಧ ನೀವು ಆರೋಪ ಮಾಡಿದಾಗ ನಾವು ಬಾಯಿ ಮಚ್ಚಿಕೊಂಡು ಸುಮ್ಮನಿರಲು ಸಾಧ್ಯವೆ?. ಭಾರತ್ ಜೋಡೊ ಯಾತ್ರೆಯಲ್ಲಿ ನಿಮ್ಮ ನಾಯಕ ರಾಹುಲ್ ಗಾಂಧಿ ಅವರು ಖಾಲಿ ಕುರ್ಚಿಗೆ ಒಣ ಭಾಷಣ ಬಿಗಿಯುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಸಿದ್ದರಾಮಯ್ಯ ಅವರಿಗೆ ರಾಮುಲು ಕುಟುಕಿದ್ದಾರೆ.
ಹೆಚ್ಚು ದಿನ ಏನು ಬೇಡ, ಕೆಲವೇ ದಿನಗಳಲ್ಲಿ ನಿಮ್ಮನ್ನು ಹಾಗೂ ನಿಮ್ಮ ಪಟಲಾಂ ಅನ್ನು ಹೇಗೆ ಕಾಂಗ್ರೆಸ್ ಒಳಗಿರುವವರು ಮುಗಿಸುತ್ತಾರೆ ಕಾದು ನೋಡಿ. ನಿಮ್ಮ ಹೋರಾಟ, ಚೀರಾಟ, ಒಣ ಪೌರುಷದ ಮಾತುಗಳು 2023ರ ಮೇ ತಿಂಗಳವರೆಗೆ ಮಾತ್ರ. ನಂತರ ಸಿದ್ದರಾಮನ ಹುಂಡಿಯ ತೋಟದ ಮನೆಯೇ ಗತಿ ಎಂದು ಸಚಿವ ಅವರು ಲೇವಡಿ ಮಾಡಿದ್ದಾರೆ.