ಸರ್ಕಾರ ಶಿಕ್ಷಕರಿಗೆ 50 ರಿಂದ 70 ಸಾವಿರ ಸಂಬಳ ಕೊಡುತ್ತೆ; ಶಿಕ್ಷಣಾಧಿಕಾರಿಗಳ ವಿರುದ್ದ ಕೃಷ್ಣ ಬೈರೇಗೌಡ ಗರಂ ಆಗಿದ್ಯಾಕೆ?
ಹಾಸನ, ಸೆಪ್ಟೆಂಬರ್ 23: ಖಾಸಗಿ ಶಾಲೆಯವ್ರು ಕೊಡೋದು 15,000 ಸಂಬಳ. ಆದರೆ ಸರ್ಕಾರ ಶಿಕ್ಷಕರಿಗೆ 50 ರಿಂದ 70 ಸಾವಿರ ಸಂಬಳ ಕೊಡುತ್ತೆ. ಮಕ್ಕಳಿಗೆ ಊಟ, ಹಾಲು ಮೊಟ್ಟೆ, ಬ್ಯಾಗು, ಬಟ್ಚೆ, ಬುಕ್ ಕೊಟ್ರೂ ಶಾಲೆಗೆ ಮಕ್ಕಳು ಬರಲ್ಲ ಅಂದ್ರೆ ಹೇಗೆ? ಶಿಕ್ಷಣಾಧಿಕಾರಿಗಳು ಏನ್ ಮಾಡ್ತಾ ಇದೀರಾ? ಎಂದು ಹಾಸನ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಗರಂ ಆಗಿದ್ದಾರೆ. ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತೆ.. ಸರ್ಕಾರ ಹಣದ ಪ್ರಿಂಟಿಂಗ್ ಮೆಷಿನ್ ಇಟ್ಟಿಲ್ಲ. ಬಡ ಜನರ ತೆರಿಗೆ ಹಣ ಹೋದ್ರೆ ಹೋಗ್ಲಿ ಮಜಾ ಮಾಡೋಣ ಎಂಬ ಭಾವನೆ ಬಿಡಿ ಎಂದರು.
ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಮತ್ತು ಹಿಮ್ಸ್ (HIMS) ನಿರ್ದೇಶಕರೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ, ಅವರು ಆಧುನಿಕ ಜೀವನಶೈಲಿಯಿಂದ ಬರುವ ರೋಗಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಸಚಿವರು ಹೃದಯಾಘಾತ (ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ - MI) ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ (mortality rate) ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಳೆದ ವರ್ಷ ಒಟ್ಟು ದಾಖಲಾದ ರೋಗಿಗಳಲ್ಲಿ ಮರಣ ಪ್ರಮಾಣ 6.6% ಇದ್ದರೆ, ಈ ವರ್ಷ ಅದು 5.6% ಕ್ಕೆ ಇಳಿದಿದೆ. ವಿಶೇಷವಾಗಿ, ಹೃದಯಾಘಾತದಿಂದಾಗಿ ದಾಖಲಾದ 315 ಪ್ರಕರಣಗಳಲ್ಲಿ ಮರಣ ಪ್ರಮಾಣವು 6.03% ಇದೆ ಎಂದು ಸಚಿವರು ತಿಳಿದುಕೊಂಡರು.
ಮಾಹಿತಿ ಸಂಗ್ರಹಿಸಿದ ನಂತರ, ಸಚಿವ ಕೃಷ್ಣ ಬೈರೇಗೌಡರು ಮಹತ್ವದ ನಿರ್ದೇಶನ ನೀಡಿದರು. "ನಿಮ್ಮ ಗಮನವು ಕೇವಲ ಸಾಂಕ್ರಾಮಿಕ ರೋಗಗಳನ್ನು (communicable diseases) ತಡೆಗಟ್ಟುವ ಯೋಜನೆಗಳಿಗಷ್ಟೇ ಸೀಮಿತವಾಗಬಾರದು" ಎಂದು ಡಿಎಚ್ಒ ಅವರಿಗೆ ಸ್ಪಷ್ಟವಾಗಿ ಹೇಳಿದರು. ಇಂದು ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆಗಳಾದ ಕ್ಯಾನ್ಸರ್, ಯಕೃತ್ (liver) ಮತ್ತು ಹೃದ್ರೋಗಗಳ ಚಿಕಿತ್ಸೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದರು.
ಇಲ್ಲಿಯವರೆಗೆ ಸಾಂಪ್ರದಾಯಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮುಂತಾದವುಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಆದರೆ, ಈಗಿನ ಆಧುನಿಕ ಸವಾಲುಗಳಿಗೆ ಹೊಂದಿಕೊಳ್ಳುವಂತೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸಚಿವರು ತಿಳಿಸಿದರು. ತಮ್ಮ ನಿರ್ದೇಶನದಿಂದ ಆರೋಗ್ಯ ಇಲಾಖೆಯು ಹೊಸ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದರು.












Click it and Unblock the Notifications