'ಹೆಚ್ ಡಿ ಕುಮಾರಸ್ವಾಮಿ ಅವರೇ ದಾರಿ ತಪ್ಪಿರುವವರು ನೀವು'
ಬೆಂಗಳೂರು, ಏಪ್ರಿಲ್ 15: ಕ್ಲಬ್ಬಿಗೆ ಹೋಗುವ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ. ದುಡಿಯುವ ಮಹಿಳೆಯರಿಗೆ ನೀಡುತ್ತಿದ್ದೇವೆ. ದುಡಿಯುವ ವರ್ಗದ ಮಹಿಳೆಯರನ್ನು ದಾರಿ ತಪ್ಪಿದ್ದಾರೆ ಎಂದು ಹೇಳಿರುವುದು ಖಂಡನೀಯ. ಕುಮಾರಸ್ವಾಮಿ ಅವರೇ ದಾರಿ ತಪ್ಪಿರುವವರು ನೀವು ಎಂದು ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿವಾದಿತ ಹೇಳಿಕೆ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ಮಾತನಾಡಿ, ಒಂದು ಕಡೆ ಮಾನವತಾವಾದ ಇನ್ನೊಂದು ಕಡೆ ಮನುವಾದದ ಅಸಮಾನತೆಗಳು ನಮ್ಮ ಮನಸ್ಸಿನಿಂದ ಹೊರಗೆ ಹೋಗಿಲ್ಲ ಎನ್ನುವುದಕ್ಕೆ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಯೇ ಸಾಕ್ಷಿ. ಹಿರಿಯರಾದ ಅವರಿಗೆ ಬುದ್ದಿ ಹೇಳುವಷ್ಟು ದೊಡ್ಡವನು ನಾನನಲ್ಲ ಎಂದರು.

ಮಹಿಳೆಯನ್ನು ಪಕ್ಷದ ಗುರುತು ಮಾಡಿಕೊಂಡು ಅವರನ್ನೇ ಅವಮಾನಿಸುವ ಏಕೈಕ ಪಕ್ಷ ಎಂದರೆ ಜೆಡಿಎಸ್. ಮಹಿಳೆಯಿಂದ ಕೇವಲ ದುಡಿಸಿಕೊಂಡು ಏನೂ ಕೊಡದ ಪಕ್ಷ. ಜಾತ್ಯಾತೀತ ಪಕ್ಷವಾಗಿ ಬಿಜೆಪಿ ಜೊತೆ ಸೇರಿ ಅನ್ಯಾಯ ಮಾಡುತ್ತಿರುವುದು ಇವರ ಆತ್ಮವಂಚನೆಯ ಹೇಳಿಕೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಉದ್ಯಮಿಗಳ 20 ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ. 10 ಲಕ್ಷ ಕೋಟಿಯಷ್ಟು ಶ್ರೀಮಂತರ ತೆರಿಗೆ ಕಡಿಮೆ ಮಾಡಲಾಗಿದೆ. ಇದರಿಂದ ಅಸಮಾನತೆ ಹೆಚ್ಚಾಗಿದೆ. ಈ ಭಾರವನ್ನು ಜನರ ಮೇಲೆ ಹಾಕಲಾಗಿದೆ. ಉದ್ಯೋಗ ಸಿಗದೆ ಯುವ ಜನತೆ ಪರದಾಡುತ್ತಿದೆ. ಶೇ 70 ರಷ್ಟು ಬಡವರು, ರೈತರು, ಜನ ಸಾಮಾನ್ಯರ ಜನರ ಜೀವನ ಬೆಲೆ ಏರಿಕೆ ಸೇರಿದಂತೆ ಅನೇಕ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ಕೊಂಡಿದೆ.
ಈ ಅಸಮಾನತೆ ತೊಲಗಲು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು. ಇದರಿಂದ 5 ಕೋಟಿ ಕನ್ನಡಿಗರಿಗೆ ಇದರ ಪ್ರಯೋಜನ ತಲುಪಿದೆ. 1.40 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಿದೆ. ಕಾಂಗ್ರೆಸ್ ಗ್ಯಾರಂಟಿಗಳು ಬಡವರಿಗೆ, ಗಾರ್ಮೆಂಟ್ಸ್ ಕೆಲಸ ಮಾಡುವ, ಬೀದಿ ಬದಿ ತರಕಾರಿ ಮಾರುವ, ಮನೆಗೆಲಸ ಮಾಡುವ, ಹೊಲದಲ್ಲಿ ಕೆಲಸ ಮಾಡುವ ರೈತ ಮಹಿಳೆಗೆ ಪ್ರಯೋಜನ ಸಿಗುತ್ತಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಿಂದ ಧರ್ಮಸ್ಥಳ,ಕುಕ್ಕೆ ಸುಬ್ರಹ್ಮಣ್ಯ ಭೇಟಿ ಕೊಟ್ಟ ಮಹಿಳೆ ದಾರಿ ತಪ್ಪಿದ್ದಾರೆಯೇ? ತವರು ಮನೆಗೆ ಹೋಗಲು, ಮಗಳನ್ನು ನೋಡಲು ಹೋಗುವವರು ದಾರಿ ತಪ್ಪಿದ್ದಾರೆಯೇ? ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವೇದಾಂತನ ತಾಯಿ ಈತನ ಶಾಲಾ ಫೀಜು ಕಟ್ಟಿ ಓದಿಸಿದ್ದಾರೆ, ಇವರು ದಾರಿ ತಪ್ಪಿದ್ದಾರೆಯೇ? ಕೋವಿಡ್ ನಿಂದ ಕ್ಷೌರಿಕ ಸಮುದಾಯದ ತಂದೆ ಸಾವನ್ನಪ್ಪಿದರು. ಇವರಿಗೆ ನೆರವಾಗಿದ್ದು ಗ್ಯಾರಂಟಿ. ಇವನ ತಾಯಿ ದಾರಿ ತಪ್ಪಿದ್ದಾಳೆಯೇ?
ಮಾಡಬಾರದ್ದೆಲ್ಲಾ ಮಾಡಿ ಮೇಲಿನ ಸ್ಥಾನದಲ್ಲಿ ಕುಳಿತು ದುಡಿಯುವ ವರ್ಗದ ಮಹಿಳೆಯರನ್ನು ಅವಮಾನ ಮಾಡುವುದು ಯಾವ ಸಂಸ್ಕೃತಿ. ಮಹಿಳೆಯರ ದುಡಿಮೆಗೆ ಮೌಲ್ಯವಿಲ್ಲವೇ? ಮಹಿಳೆ ದುಡಿಯದೇ ಹೋದರೆ ನಾನು, ನೀವು ಯಾರೂ ಸಹ ಉನ್ನತಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಅಸಂಖ್ಯಾತ ಮಹಿಳೆಯರು ಎಲೆಮರೆಕಾಯಿಯಂತೆ ಗಂಡಸರು ಮುಂದೆ ಬರುತ್ತಿದ್ದಾರೆ. ಗಂಡಸರು ಮಾಡಬಾರದ ಕೆಲಸ ಮಾಡಿ ಹೆಂಗಸರನ್ನು ದಾರಿ ತಪ್ಪಿದ್ದಾರೆ ಎನ್ನುವುದು ಕೆಟ್ಟ ಮನಸ್ಥಿತಿ.
ಇದೇ ಕುಮಾರಸ್ವಾಮಿ ಅವರು ದಾರಿ ತಪ್ಪಿದ ಮಗ ಎಂದು ಸದನದಲ್ಲಿ ಹೇಳಿದ್ದರು. ಅವರು ಮಾಡಿರುವುದನ್ನು ಅವರೇ ಹೇಳಿಕೊಂಡು ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ.ಜೆಡಿಎಸ್ ಪಕ್ಷದ ಗುರುತು ಮಹಿಳೆ. ಆ ಮಹಿಳೆಗೆ ಈಗ ಕಮಲ ಎಂದು ಹೆಸರು ಕೊಟ್ಟಿದ್ದಾರೆ. ಜನತಾದಳದವರು ಮಹಿಳೆಯರ ಕೈಯಲ್ಲಿ ಕೇವಲ ದುಡಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಮಹಿಳೆಯ ಗ್ಯಾರಂಟಿಯನ್ನು ಗುರುತಿಸಿ ಸಂಬಳ ಕೊಡುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications