'ನಾವು ಯಾರಪ್ಪನ ಹಣವನ್ನೂ ಕೇಳುತ್ತಿಲ್ಲ, ಕೇಂದ್ರ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ'
ಕೋಲಾರ, ಫೆಬ್ರವರಿ 06: ನಾವು ಯಾರಪ್ಪನ ಹಣವನ್ನೂ ಕೇಳುತ್ತಿಲ್ಲ, ನಾವು ಕಷ್ಟಪಟ್ಟು ತೆರಿಗೆ ಕಟ್ಟಿರುವ ಹಣವನ್ನು ನಾವು ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರದ ತಾರತಮ್ಯ ಖಂಡಿಸಿ ಫೆ.7 ರಂದು ದೆಹಲಿಯಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.
ಜಿಲ್ಲಾ ಪಂಚಾಯತ್ ನಲ್ಲಿ ಕೆಡಿಪಿ ಸಭೆಗೆ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬೈರತಿ ಬಸವರಾಜ್, ರಾಜ್ಯದ ಏಳಿಗೆಗಾಗಿ ನಾವು ಕಟ್ಟಿದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ನಮಗೆ ಕೊಡುತ್ತಿಲ್ಲ. ನಮ್ಮ ತೆರಿಗೆ ಹಣದಲ್ಲಿ ನಮಗೆ ಬಿಡಿಗಾಸು ಸಹ ಕೊಟ್ಟಿಲ್ಲ. ನಾವು ಕೇಂದ್ರ ಸರ್ಕಾರವನ್ನು ಭಿಕ್ಷೆ ಬೇಡುತ್ತಿಲ್ಲ. ಕಷ್ಟಪಟ್ಟು ದುಡಿದು ಕಟ್ಟಿರುವ ಹಣವನ್ನು ನಮ್ಮ ಪಾಲನ್ನು ನಾವು ಕೇಳುತ್ತಿದ್ದೇವೆ. ಈ ಸಂಬಂಧ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮನ್ನು ನೋಡಿಕೊಂಡು ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಬೈರತಿ ಸುರೇಶ್, ನಾವು ಯಾರಪ್ಪನ ಹಣವನ್ನೂ ಕೇಳ್ತಿಲ್ಲ. ನಮ್ಮ ಹಣವನ್ನು ನಾವು ದಾನ ಬೇಕಾದ್ರು ಕೊಡ್ತೇವೆ, ಇಲ್ಲ ಪುಕ್ಸಟ್ಟೆಯಾಗಿ ಬೇಕಾದ್ರು ಕೊಡ್ತೇವೆ. ನಾವು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಆದ್ರೆ ಮುನಿರತ್ನ ಅವರಿಗೆ ಭಿಕ್ಷೆ ಬೇಡಿ ಅಭ್ಯಾಸ ಇರಬಹುದು. ಇನ್ನು ಮುನಿರತ್ನ ಅವರ ಮಾತಿಗೆ ಬೆಲೆ ಕೊಟ್ಟರೆ ನಮಗೆ ಮರ್ಯಾದೆ ಇರುವುದಿಲ್ಲ. ಟ್ಯಾಕ್ಸ್ ಹಣ ಕೇಳಿದ್ರೆ ಜನಗಳಿಗೆ ವಿರೋಧವಾಗಿ ನಡೆದುಕೊಂಡಂತೆನಾ? ನಮ್ಮ ಜನರ ದುಡ್ಡು ನಮಗೆ ಬರಬಾರದು ಅಂತ ಮುನಿರತ್ನ ಅವರ ಹೋರಾಟನಾ? ಎಂದು ಕಿಡಿಕಾರಿದರು.
ಸಂಸದ ಡಿಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರದ ಕೂಗಿನ ಹೇಳಿಕೆಯನ್ನು ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಮರ್ಥಿಸಿಕೊಂಡಿದ್ದಾರೆ. ನಾವು ಪ್ರತ್ಯೇಕ ದೇಶ ಕೇಳುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇರುವಂತಹ ರಾಜ್ಯಗಳಿಗೆ ದುಡ್ಡು ಕೊಡದೆ ಕೇಂದ್ರ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಹಾಗಾಗಿ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಇದೇ ರೀತಿ ತಾರತಮ್ಯ ಮುಂದುವರಿದ್ರೆ ಪ್ರತ್ಯೇಕ ರಾಜ್ಯ ಕೇಳಬೇಕಾಗುತ್ತದೆ ಅಂತ ಹೇಳಿದ್ದಾರೆಯೇ ಹೊರತು ಪ್ರತ್ಯೇಕ ರಾಷ್ಟ್ರ ಬೇಕೇಬೇಕು ಅಂತ ಕೇಳಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಐದು ವರ್ಷದ ಅವಧಿಗೆ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ನಾವು ಜನರ ಆಶೀರ್ವಾದವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಬಿಜೆಪಿ ಪಕ್ಷದವರ ಮಾತುಗಳನ್ನು ನೀವು ಕೇಳಬೇಡಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಐದು ಯೋಜನೆಗಳು ರದ್ದು ಮಾಡುವುದಿಲ್ಲ ಎಂದರು. ಇದೇ ವೇಳೆ ಮಾತನಾಡಿದ ಉಸ್ತುವಾರಿ ಸಚಿವರು, ಕಾಂಗ್ರೆಸ್ ಪಕ್ಷ ಸಮುದ್ರು ಇದ್ದ ಹಾಗೆ. ಲೋಕಸಭಾ ಚುನಾವಣೆಗೆ ಹಲವಾರು ಮಂದಿ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಯಾರಿಗೆ ಸೀಟ್ ಕೊಡುತ್ತೋ ಅವರನ್ನು ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications