ಮಂಡ್ಯಕ್ಕೆ ಬಂದ ಅಂಬರೀಷ್ ರಿಂದ ರಹಸ್ಯ ಸಭೆ!
ಮಂಡ್ಯ, ಏ.1: ಅನಾರೋಗ್ಯದಿಂದ ಬಳಲುತ್ತಿದ್ದ ವಸತಿ ಸಚಿವ ಅಂಬರೀಷ್ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಸಿಂಗಪುರದಿಂದ ನೇರವಾಗಿ ಮಂಡ್ಯಕ್ಕೆ ತೆರಳಿದ್ದಾರೆ.
ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ನಟ, ಸಚಿವ ಅಂಬರೀಷ್ ಆಸ್ಪತ್ರೆಯಿಂದ ಕಳೆದ ವಾರ ಬಿಡುಗಡೆಯಾಗಿದ್ದರು. ಸಿಂಗಾಪುರದಲ್ಲಿರುವ ತಮ್ಮ ಸ್ನೇಹಿತರೊಬ್ಬರ ಫ್ಲಾಟಿನಲ್ಲಿ ತಂಗಿದ್ದ ಅಂಬರೀಷ್ ಅವರು ವಿಶ್ರಾಂತಿ ಪಡೆಯಲು ಅಲ್ಲಿಂದ ಮಲೇಷಿಯಾಕ್ಕೆ ತೆರಳಲಿದ್ದರು.
ಮಾ.30ರಂದು ಅಂಬರೀಷ್ ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದಿನಿಂದ ಪಕ್ಷದ ಅಭ್ಯರ್ಥಿ(ರಮ್ಯಾ) ಪರ ಕೆಲಸ ಮಾಡಲು ಮುಂದಾಗೋಣ. ಅಂಬರೀಷ್ ನಾಯಕತ್ವದಲ್ಲೇ ಚುನಾವಣೆ ನಡೆಯಲಿ ಎಂದು ಅಂಬಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಸುನೀತಾ ರಾಜೇಶ್ ಅವರು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಅಂಬರೀಷ್ ರಹಸ್ಯ ಸಭೆ : ಮಲೇಷಿಯಾದಿಂದ ಬೆಂಗಳೂರಿನ ನಿವಾಸಕ್ಕೆ ತೆರಳದೆ ನೇರವಾಗಿ ಮಂಡ್ಯಕ್ಕೆ ಬಂದಿರುವ ಅಂಬರೀಷ್ ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಇತ್ತೀಚೆಗೆ ಭುಗಿಲೆದ್ದಿರುವ ಮಂಡ್ಯ ಜಿಲ್ಲಾ ಕಾರ್ಯಾಧ್ಯಕ್ಷ ಆಯ್ಕೆ ವಿವಾದ, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಹೇಳಿಕೆ ವಿವಾದ, ಅಮರಾವತಿ ಚಂದ್ರಶೇಖರ್ ಹಾಗೂ ಇನ್ನಿತರರಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಭೇಟಿ ಮುಂತಾದ ವಿಷಯಗಳ ಬಗ್ಗೆ ಅಂಬರೀಷ್ ಅವರು ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಚಾರ ನಡೆಸಬಹುದೇ?: ವೈದ್ಯರ ಪ್ರಕಾರ ಅಂಬರೀಷ್ ಅವರು ಗುಣಮುಖರಾಗಿ ಕರ್ನಾಟಕಕ್ಕೆ ವಾಪಸ್ ಬಂದರೂ ಬಹಿರಂಗ ಪ್ರಚಾರದಲ್ಲಿ ತಕ್ಷಣವೇ ತೊಡಗಿಕೊಳ್ಳುವುದು ಕಷ್ಟಸಾಧ್ಯ, ಅಗತ್ಯ ಬಿದ್ದರೆ ಒಂದೆರಡು ದಿನ ಮಾತ್ರ ಬಹಿರಂಗ ಪ್ರಚಾರದಲ್ಲಿ ತೊಡಗಿಕೊಳ್ಳಬಹುದು ಎಂದು ತಿಳಿದು ಬಂದಿದೆ.
ಸೂಚನೆ : ಕನ್ನಡದ ಖಾಸಗಿ ಸುದ್ದಿ ವಾಹಿನಿಗಳಾದ ಸುವರ್ಣ 24 X7, ಟಿವಿ 9 ಕನ್ನಡ ವಾಹಿನಿಗೆ ಅಂಬರೀಷ್ ಅವರ ಸಂಪರ್ಕ ಫೋನ್ ಕರೆ ಮೂಲಕ ಸಿಕ್ಕಿದ್ದು, ಮಂಡ್ಯಕ್ಕೆ ವಾಪಸ್ ಬಂದಿರುವ ದೃಶ್ಯ ಸಿಕ್ಕಿಲ್ಲದ ಕಾರಣ ಇದನ್ನು ಏಪ್ರಿಲ್ ಫೂಲ್ ದಿನದ ಕಲ್ಪಿತ ಸುದ್ದಿಯಂದು ತಿಳಿದುಕೊಳ್ಳಬೇಕಾಗಿ ವಿನಂತಿ.












Click it and Unblock the Notifications