ಹಾಲು ಖರೀದಿ ದರ ಕಡಿತ; ಜೂನ್ 1ರಿಂದ ಜಾರಿಗೆ
ಬೆಂಗಳೂರು, ಮೇ 20; ಹಾಲು ಒಕ್ಕೂಟಗಳು ಆರ್ಥಿಕ ನಷ್ಟಕ್ಕೆ ಸಿಲುಕಿವೆ. ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತಗೊಳಿಸಲು ಒಕ್ಕೂಟಗಳು ಚಿಂತನೆ ನಡೆಸಿವೆ. ಇದರಿಂದಾಗಿ ರೈತರಿಗೆ ನಷ್ಟ ಉಂಟಾಗಲಿದೆ.
14 ಹಾಲು ಒಕ್ಕೂಟದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಆದರೆ ಲಾಕ್ಡೌನ್ ಪರಿಣಾಮ ಹೋಟೆಲ್ ತೆರೆದಿಲ್ಲ. ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದಾಗಿ ಹಾಲಿನ ಮಾರಾಟ ಕುಸಿತಕಂಡಿದೆ.
ಪ್ರತಿದಿನ 14 ಹಾಲು ಒಕ್ಕೂಟಗಳಲ್ಲಿ ಸುಮಾರು 82 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಆಗುತ್ತಿದೆ. ಬೇಡಿಕೆ ಇಲ್ಲದ ಕಾರಣ ಸುಮಾರು 30 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ. ಆದರೆ ಹಾಲಿನ ಪುಡಿಗೂ ಬೇಡಿಕೆ ಇಲ್ಲವಾಗಿದೆ.

ಬೆಂಗಳೂರು ಹಾಲು ಒಕ್ಕೂಟ ಒಂದರಲ್ಲೇ ದಿನಕ್ಕೆ ಸುಮಾರು 50 ಲಕ್ಷ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಹಾಲು ಒಕ್ಕೂಟದ ಪರಿಸ್ಥಿತಿ ಹಿನ್ನಲೆಯಲ್ಲಿ ಹಾಲು ಖರೀದಿ ದರವನ್ನು ಕಡಿಮೆ ಮಾಡುವುದು ಅನಿವಾರ್ಯ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ.
ಜೂನ್ 1ರಿಂದ ಅನ್ವಯವಾಗುವಂತೆ ಹಾಲು ಖರೀದಿ ದರವನ್ನು ಲೀಟರ್ಗೆ 1.50 ರೂ. ಕಡಿಮೆ ಮಾಡಲು ಚಿಂತನೆ ನಡೆದಿದೆ. ನಷ್ಟವನ್ನು ಎಷ್ಟು ದಿನ ತಡೆದುಕೊಳ್ಳಲು ಸಾಧ್ಯ. ಖರೀದಿ ದರವನ್ನು ಕಡಿತ ಮಾಡುವುದು ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಾಕ್ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದರು.
ಆದರೆ ಹಾಲು ಉತ್ಪಾದಕರಿಗೆ ಸಹಾಯಕವಾಗುವಂತೆ ಯಾವುದೇ ಘೋಷಣೆ ಮಾಡಿಲ್ಲ. ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದ್ದು, ಆಗುವ ನಷ್ಟದಿಂದ ಹೊರಬರಲು ಒಕ್ಕೂಟಗಳು ರೈತರಿಂದ ಖರೀದಿ ಮಾಡುವ ದರವನ್ನು ಕಡಿತಗೊಳಿಸಲು ಮುಂದಾಗಿವೆ.












Click it and Unblock the Notifications