ಕರ್ನಾಟಕ ಕಾಂಗ್ರೆಸ್ನಲ್ಲಿ ಮೂಲ v/s ವಲಸಿಗ ಫೈಟ್
ಬೆಂಗಳೂರು, ಆಗಸ್ಟ್ 04; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲವೇ?. ಸರ್ಕಾರ ರಚನೆ ಮಾಡಿದ 3 ತಿಂಗಳಿನಲ್ಲಿಯೇ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೆ. ಆದರೆ ಕರ್ನಾಟಕ ಬಿಜೆಪಿಯ ಪ್ರಕಾರ ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ. ಪ್ರತಿಪಕ್ಷ ಈ ಕುರಿತು ಟ್ವೀಟ್ ಮಾಡಿದೆ.

ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, 'ರಾಜ್ಯ ಕಾಂಗ್ರೆಸ್ನಲ್ಲಿ ಶುರುವಾಯ್ತು ಮೂಲ V/s ವಲಸೆ ಫೈಟ್..!. ಡಿ. ಕೆ. ಶಿವಕುಮಾರ್ ಅವರ 'ಕುರ್ಚಿಗಾಗಿ ಹೋರಾಟ' ಅಭಿಯಾನ ಸಿಂಗಾಪುರ್ ಬದಲು ಕರ್ನಾಟಕದಲ್ಲಿ ಇದೀಗ ಶುರುವಾಗಿದೆ' ಎಂದು ಆರೋಪ ಮಾಡಿದೆ.
ತನ್ನ ಟ್ವೀಟ್ಗೆ ಸಮರ್ಥನೆಯನ್ನು ಸಹ ಪ್ರತಿಪಕ್ಷ ಬಿಬಿಪಿ ನೀಡಿದೆ. ಯಾವ-ಯಾವ ಕಾರಣಕ್ಕೆ ರಾಜ್ಯ ಕಾಂಗ್ರೆಸ್ನಲ್ಲಿ ಮೂಲ V/s ವಲಸೆ ಫೈಟ್ ನಡೆಯುತ್ತಿದೆ ಎಂದು ಪಕ್ಷ ವಿವರಣೆಯನ್ನೂ ನೀಡಿದೆ.
ಬಿಜೆಪಿ ಟ್ವೀಟ್ ಹೀಗಿದೆ
* ಸಿಎಂ, ಡಿಸಿಎಂ ನಡುವಿನ ಕಿತ್ತಾಟದಿಂದ ಜೋರಾಯ್ತು ಬಣ ಬಡಿದಾಟ..!
* ಡಿಸಿಎಂ ಹೋಗುವ ಕಾರ್ಯಕ್ರಮಕ್ಕಿಲ್ಲ ಸಿಎಂಗೆ ಎಂಟ್ರಿ..!
* ಸಿಎಂ ಹೋಗುವ ಕಾರ್ಯಕ್ರಮಕ್ಕೆ ಹೋಗಲ್ಲ ಡಿಸಿಎಂ..!
* ಸಿದ್ದರಾಮಯ್ಯ ಬಣ ಹೋಗುವ ಮುನ್ನವೇ ಡಿಕೆ ಶಿವಕುಮಾರ್ ಬಣ ದಿಲ್ಲಿಗೆ ಶಿಫ್ಟ್..!
* ನಿಗಮ ಮಂಡಳಿ ಸ್ಥಾನಗಳಿಗಾಗಿ ನಡೆಯುತ್ತಿದೆ ಸಿಎಂ- ಡಿಸಿಎಂ ಫೈಟ್..!
* ಡಿಸಿಎಂಗೆ ದಿಲ್ಲಿಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ಬಣ ಉಲ್ಬಣ..!
* ಸಿಂಗಾಪೂರ್ ಎಂದ ಡಿಕೆ ಶಿವಕುಮಾರ್ ಅವರಿಂದ ಕರ್ನಾಟಕದಲ್ಲೇ ಚೆಸ್ ಆಟ..!
ಗ್ಯಾರಂಟಿ ವಿರುದ್ಧ ಟ್ವೀಟ್; ಕರ್ನಾಟಕ ಬಿಜೆಪಿ ಮತ್ತೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ವಿರುದ್ಧ ಧ್ವನಿ ಎತ್ತಿದೆ. 'ಮನೆ ಹತ್ತಿ ಉರಿಯುತ್ತಿದ್ದರೆ, ಆ ಮನೆಯ ಬೆಂಕಿ ನಂದಿಸುವ ಬದಲು, ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ದುರ್ಬುದ್ಧಿ ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಸಿದ್ಧಿಸಿದೆ' ಎಂದು ದೂರಿದೆ.
'2021ರಲ್ಲಿ ರಾಜ್ಯ ಸಾರಿಗೆ ಸಂಸ್ಥೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭೇಟಿ ನೀಡಿ, ನೌಕರರ ಮುಷ್ಕರಕ್ಕೆ ಬೆಂಬಲ ನೀಡಿ, ಮೊಸಳೆ ಕಣ್ಣೀರು ಸುರಿಸಿ, ಬೊಗಳೆ ಭಾಷಣ ಮಾಡಿದ್ದರು' ಎಂದು ಆರೋಪ ಮಾಡಿದೆ.
'ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಆಶ್ವಾಸನೆ ಸಹ ನೀಡಿದ್ದರು. ಆದರೆ ಈಗ ಸಾರಿಗೆ ನೌಕರರಿಗೆ ಸರಿಯಾಗಿ ತಿಂಗಳ ಸಂಬಳವನ್ನೂ ನೀಡುತ್ತಿಲ್ಲ. ಈ ಸಾಲಿನ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಬಿಡಿಗಾಸೂ ಒದಗಿಸಿಲ್ಲ' ಎಂದು ಟೀಕಿಸಿದೆ.
'ಅವರನ್ನು ಸಹ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ನೌಕರರ ಬಹುಮುಖ್ಯ ಬೇಡಿಕೆಗೆ ಈಗ ಕಿಮ್ಮತ್ತು ಕೊಡುತ್ತಿಲ್ಲ. ಆ ತರಹದ ಯಾವುದೇ ಪ್ರಸ್ತಾವನೆಗಳು ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸದನದಲ್ಲೇ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಾರಿಗೆ ನೌಕರರಿಗೂ ಸಹ #ATMSarkara ಕಿವಿ ಮೇಲೆ ಹೂವಿಟ್ಟು "ಕೈ" ಕೊಟ್ಟಿದೆ' ಎಂದು ಬಿಜೆಪಿ ಟ್ವೀಟ್ನಲ್ಲಿ ಹೇಳಿದೆ.
'ಇವಿಷ್ಟೂ ಸಾಲದೆಂಬಂತೆ ಈಗ ಶಕ್ತಿ ಯೋಜನೆಯನ್ನು ಅಸಮರ್ಪಕವಾಗಿ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರದ ತಪ್ಪನ್ನು ನೌಕರರ ತಲೆಗೆ ಕಟ್ಟಲು ಮುಂದಾಗಿದೆ. ಮಹಿಳಾ ಪ್ರಯಾಣಿಕರ ಸಂಚಾರದ ಬಗ್ಗೆ ಸಾರಿಗೆ ಸಿಬ್ಬಂದಿಗಳು ಅಕ್ರಮವೆಸಗುತ್ತಿದ್ದಾರೆಂದು ಅವರಿಗೆ ಎಚ್ಚರಿಕೆಯ ನೋಟಿಸ್ ನೀಡಿದೆ. ಅಂದು ಭರವಸೆಗಳನ್ನು ತೋರಿಸಿದ ಸಿದ್ದರಾಮಯ್ಯ ಅವರು ಕೊಟ್ಟ ಮಾತುಗಳನ್ನೇ ಮರೆತು ನೌಕರರಿಗೆ ಆಕಾಶ ತೋರಿಸುತ್ತಿದ್ದಾರೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
'ನಂಬಿಸಿ ವಂಚಿಸುವುದು ಕಾಂಗ್ರೆಸ್ ಪಕ್ಷದ ಪರಂಪರಾಗತ ಗುಣ. ಆದರೆ ಈ ನಯವಂಚನೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಲಿಯಾಗುತ್ತಿರುವುದು ಖೇದಕರ. ದೇಶದಲ್ಲೇ ಮಾದರಿ ಸಾರಿಗೆ ಸೇವೆಗೆ ಹೆಸರಾಗಿದ್ದ ಕರ್ನಾಟಕ ಸಾರಿಗೆಯನ್ನು ಗುಜರಿ ಸಾರಿಗೆ ಮಾಡುವ ಎಲ್ಲಾ ಕಾಯಕಕ್ಕೂ ಸಿದ್ದರಾಮಯ್ಯ ಅವರ ಸರ್ಕಾರ ಮುಂದಾಗಿದೆ. ಹೊಸ ಬಸ್ ಕೊಳ್ಳಬೇಕಾದಲ್ಲಿ ಹಳೇ ಬಸ್ಸನ್ನೇ ಹೊಸದು ಮಾಡುವ ಒಂದು ಯೋಜನೆಯನ್ನೇ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಷ್ಟದ ಬಾವಿ ಇನ್ನಷ್ಟು ಆಳವಾಗಿ ರಾಜ್ಯದ ಜನಸಾಮಾನ್ಯರ ಜೇಬಿನ ಮೇಲೆ ಬರೆ ಬೀಳುವುದು ನಿಶ್ಚಿತ, ಸಾರಿಗೆ ನೌಕರರಿಗೆ ನಿರುದ್ಯೋಗ ಉಚಿತ' ಎಂದು ಹೇಳಿದೆ.












Click it and Unblock the Notifications