ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ : ಮುಖ್ಯಮಂತ್ರಿಗೆ ಮಾಂಗ್ಯಲ ಸರ ರವಾನಿಸಿದ ಮಹಿಳೆ ಅಭಿಯಾನ
ಹುಬ್ಬಳ್ಳಿ, ಜನವರಿ 23: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಪ್ರಾಣ ಕಳೆದುಕೊಳ್ಳವವರ ಸಂಖ್ಯೆಯು ಹೆಚ್ಚಾಗಿದೆ. ರಾಮನಗರ ಆಯ್ತು ಇದೀಗ ಬೆಳಗಾವಿಯಲ್ಲಿ ಮಹಿಳೆಯೊಬ್ಬರು ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ, ಅತೀ ಸಣ್ಣ ರೈತರು, ಕೂಲಿ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ಸಾಲ ನೀಡುವ ಈ ಕಂಪನಿಗಳು, ಬಡ್ಡಿ ಮೇಲೆ ಬಡ್ಡಿ ಹಾಕಿ ವಸೂಲಿ ವೇಳೆ ಇನ್ನಿಲ್ಲದಂತೆ ಸಾಲಗಾರರನ್ನು ಕಾಡುತ್ತಿವೆ. ಇದರಿಂದ ಮನೆಗಳನ್ನು ತೊರೆಯುತ್ತಿರುವವ ಬಾಗಿಲುಗಳಿಗೆ ಸಾಲದ ನೋಟಿಸ್ ಅಂಟಿಸಲಾಗುತ್ತಿದೆ.
ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಹೆಣ್ಣು ಮಕ್ಕಳ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿದೆ. ಬಹಳಷ್ಟು ಕುಟುಂಬಗಳು ಮನೆ ಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಸದ್ಯದ ಪರಿಸ್ಥಿತಿ ಕಂಡು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾನೂನು ಇದ್ದರೂ ಕೂಡ ಸರ್ಕಾರ ಕಾನೂನಿನ ಪ್ರಯೋಗ ಮಾಡುತ್ತಿಲ್ಲ. ಯಾರಿಗೂ ಭಯ ಇಲ್ಲ. ವಸೂಲಿಗೆ ರೌಡಿಗಳನ್ನು ಬಿಟ್ಟಿದ್ದಾರೆ. ಸರ್ಕಾರ ಒಂದು ಕಡೆ ಮಹಿಳೆಯರಿಗೆ ಕಾರ್ಯಕ್ರಮ ಮಾಡುತ್ತೇನೆ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿರುವಂತಹ ಮೈಕ್ರೊ ಫೈನಾನ್ಸ್ ನಿಯಂತ್ರಣ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಹೆಚ್ಚು ಬಡ್ಡಿ ವಸೂಲಿ ಮಾಡುವವರ ನಿಯಂತ್ರಣಕ್ಕೆ ಕಾನೂನು ತಂದಿದ್ದರು. ಅದಕ್ಕೆ ನ್ಯಾಯಾಲಯದಿಂದ ತಡೆ ತರಲಾಗಿದೆ. ಸದರಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಅದನ್ನು ತೆರವುಗೊಳಿಸಿ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಪಡೆಯಬೇಕು. ಕೂಡಲೇ ಮೈಕ್ರೊ ಫೈನಾನ್ಸ್ ಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಸಾಲಗಾರರ ಆತ್ಮಹತ್ಯೆ: ರಾಜ್ಯದಲ್ಲಿ ಶೋಚನೀಯ ಸ್ಥಿತಿ
ಸಾಲ ನೀಡಿ ಬಡ್ಡಿ ವಸೂಲಿಗೆ ಬರುವವ ಮೈಕ್ರೋ ಫೈನಾನ್ಸ್ ಕಂಪನಿಗಳು ಇನ್ನಿಲ್ಲದ ಕಿರುಕುಳ ನೀಡುತ್ತಿವೆ. ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಕಿರುಕುಳ ತಾಳಲಾರದೇ ಇತ್ತೀಚೆಗೆ ರಾಮನಗರದಲ್ಲಿ ಯಶೋಧಮ್ಮ ಮಹಿಳೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂದು ಜನವರಿ 23ರ ಗುರುವಾರದಂದು ಬೆಳಗಾವಿಯಲ್ಲಿ ಮಹಿಳೆಯೊಬ್ಬರು ಇದೇ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಹಣ ಕಟ್ಟಲಾಗದೇ, ಕಿರುಕುಳ ತಾಳಲಾರದೇ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಸರೋಜಾ ಕಿರಬಿ (52) ಗ್ರಾಮದ ಹೊರ ವಲಯದಲ್ಲಿನ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ ಮೈಕ್ರೋ ಫೈನಾನ್ಸ್ ಕಂಪನಿಯೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೈನಾನ್ಸ್ ಕಂಪನಿಯಲ್ಲಿ ಈ ಮೃತಹ ಮಹಿಳೆಯು ಸಬ್ಸಿಡಿ ಹೆಸರಿನಲ್ಲಿ 2.30 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲವನ್ನು ಹೊಳೆಪ್ಪ ದಡ್ಡಿ ಎಂಬುವವರು ಕೊಡಿಸಿದ್ದರು. ಸಾಲ ಕೊಡಿಸಿದ ಭೂಪ ಅರ್ಧದಷ್ಟು ತಾನೇ ಕಟ್ಟುವುದಾಗಿ ಹೇಳಿದ್ದ. ಹೀಗಾಗಿ ಮಹಿಳೆಯು ತಾನು ಪಡೆದ ಸಾಲದಲ್ಲಿ ಅರ್ಧ ಹಣವನ್ನು ಹೊಳೆಪ್ಪನಿಗೆ ಮಹಿಳೆ ಕಟ್ಟಿದ್ದರು.
ಈ ವೇಳೆ ಫೈನಾನ್ಸ್ನವರು ಸಾಲ ಪಡೆದವರು ನೀವು, ನೀವೇ ಪೂರ್ತಿ ಸಾಲದ ಬಡ್ಡಿ ಕಟ್ಟುವಂತೆ ಮಹಿಳೆಗೆ ದುಂಬಾಲು ಬಿದ್ದಿದ್ದರು. ಆಗಾಗ ಬಂದು ಕಿರುಕುಳ ನೀಡುತ್ತಿದ್ದರು. ಇತ್ತ ಅರ್ಧ ಸಾಲ ಪಡೆದ ಹೊಳೆಪ್ಪ, ತಾನು ಸಬ್ಸಿಡಿಗಾಗಿ ಹಣ ಪಡೆದಿದ್ದೇನೆ. ನಾನು ಹಣ ಕಟ್ಟುವುದಿಲ್ಲ ಎಂದಿದ್ದ. ಇತ್ತ ಫೈನಾನ್ಸ್ ಕಿರುಕುಳವು ಹೆಚ್ಚಾಗತೊಡಗಿತು. ವಿಧಿ ಇಲ್ಲದೇ ಸರೋಜಾ ಅವರು ಬಾವಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚನ್ನಪಟ್ಟಣದಲ್ಲೂ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ, ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಮೈಕ್ರೋ ಫೈನಾನ್ಸ್ ಕಾಟದಿಂದ ಮನೆಗಳು, ಊರುಗಳನ್ನು ಜನರ ತೊರೆಯುತ್ತಿದ್ದಾರೆ. ಇದು ಚನ್ನಪಟ್ಟಣ ಕೊಡಗು, ಬೆಳಗಾವಿ, ರಾಮನಗರದ ಕಥೆ ಮಾತ್ರವಲ್ಲ. ನಂಜನಗೂಡು, ಮೈಸೂರು, ಹಾವೇರಿ, ತಮಕೂರು, ಚಾಮರಾಜನಗರ ಹೀಗೆ ಅನೇಕ ಕಡೆಗಳಲ್ಲಿ ಫೈನಾನ್ಸ್ ಸಾಲ ನೀಡಿ ಜನರಿಗೆ ಕಂಪನಿಗಳು ತೊಂದರೆ ನೀಡುತ್ತಿವೆ.
ಜನರು ಹುಟ್ಟಿ ಬೆಳೆದ ಊರು ತೊರೆಯುತ್ತಿದ್ದಾರೆ. ಬದುಕು ಬೀದಿಗೆ ಬೀಳುತ್ತಿದೆ. ಮನೆಗೆ ಆಸರೆಯಾಗಿದ್ದ ತಾಯಂದಿರು, ಮಡದಿ ಕಳೆದುಕೊಂಡ ಕುಟುಂಬ ಅನಾಥವಾಗಿವೆ. ಜನರು ಈ ಕಂಪನಿಗಳಿಗೆ ಮೂಗುದಾರ ಹಾಕಬೇಕು, ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಿಎಂ ಸೂಚನೆಗೂ ಡೋಂಟ್ ಕೇರ್: ಹಾವೇರಿ ಮಹಿಳೆ ತಾಳಿ ಅಭಿಯಾನ
ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲಗಾರರಿಗೆ ಕಿರುಕುಳ ನೀಡುವ, ಅಧಿಕ ಬಡ್ಡಿ ಹಾಕು ಫೈನಾನ್ಸ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಜನರು ಪ್ರಾಣ ಕಳೆದುಕೊಳ್ಳಂತೆ ಎಚ್ಚರ ವಹಿಸಬೇಕು. ಜನರನ್ನು ಸಾಲದ ಹೆಸರಿನಲ್ಲಿ ಸುಲಿಗೆ ಮಾಡುವ ಕಂಪನಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ವಹಿಸುತ್ತೇವೆ ಎಂದಿದ್ದರು.
ಸಿಎಂ ಸಿದ್ದರಾಮಯ್ಯಗೆ ಮಾಂಗಲ್ಯ ರವಾನೆ
ಮುಖ್ಯಮಂತ್ರಿಗಳೇ ನೇರವಾಗಿ ಎಚ್ಚರಿಕೆ ಕೊಟ್ಟರು ತಲೆಕೆಡಿಸಿಕೊಳ್ಳದೇ ಹಾವೇರಿ ಮೈಕ್ರೋ ಫೈನಾನ್ಸ್ ಕಂಪನಿಯು ಮಹಿಳೆಗೆ ಬಡ್ಡಿ ಕಟ್ಟುವಂತೆ ಕಿರುಕುಳ ನೀಡಿವೆ. ಇದರಿಂದ ಬೇಸತ್ತ ಮಹಿಳೆ ನನ್ನ ಮಾಂಗ್ಯ ಸರ ಉಳಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ಮಾಂಗಲ್ಯ ಸರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೋಸ್ಟ್ ಮೂಲಕ ರವಾನಿಸಿದ್ದಾರೆ.
ಬಡ್ಡಿಗಾಗಿ ಈ ಫೈನಾನ್ಸ್ ಕಂಪನಿಯವರು ಮನೆಗೆ ಬಂದು ತೊಂದರೆ ಕೊಡುತ್ತಿದ್ದಾರೆ. ನೆಮ್ಮದಿಯೇ ಇಲ್ಲದಾಗಿದೆ. ಊರಲ್ಲಿ ಗೌರವವು ಇಲ್ಲದಾಗಿದೆ. ಈ ಕಿರುಕುಳ ತಪ್ಪಿಸಬೇಕು. ನನ್ನ ಮಾಂಗಲ್ಯ ಉಳಿಸಬೇಕು ಹಾವೇರಿ ಮಹಿಳೆ ಬೇಡಿಕೊಂಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳಿಗೂ ಮಹಿಳೆಯರು ರಕ್ಷಣೆ ಒದಗಿಸಬೇಕು. ಈ ಕಿರಿಕುಳಕ್ಕೆ ಅಂತ್ಯ ಹಾಡುವಂತೆ ಒತ್ತಾಯಿಸಿದ್ದರೆ.












Click it and Unblock the Notifications