ಸಾಂತ್ವನ ಕೇಂದ್ರ ಸೇರಿದ ಮಾನಸಿಕ ಅಸ್ವಸ್ಥ ಗರ್ಭಿಣಿ ಮಹಿಳೆ
ಮಾಗಡಿ, ಸೆಪ್ಟೆಂಬರ್ 29 : ಶಾಲೆಯಲ್ಲಿ ನೀಡುವ ಬಿಸಿಯೂಟ ಸೇರಿದಂತೆ ಅವರಿವರು ನೀಡಿದ ಆಹಾರವನ್ನು ತಿನ್ನುತ್ತಾ, ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದ ಮಾನಸಿಕ ಅಸ್ವಸ್ಥ ಗರ್ಭಿಣಿ ಮಹಿಳೆಯನ್ನು ರಾಮನಗರದ ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿದೆ.
ಮಾನಸಿಕ ಅಸ್ವಸ್ಥೆಯಾಗಿದ್ದ ಗರ್ಭಿಣಿ ಮಹಿಳೆಯನ್ನು ವಿಜಯಮ್ಮ ಎಂದು ಗುರತಿಸಲಾಗಿದೆ. ಈಕೆ ಸಾತನೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ವಾಸಿಸುತ್ತಾ, ಶಾಲೆಯಲ್ಲಿ ನೀಡುವ ಬಿಸಿಯೂಟ ಹಾಗೂ ಗ್ರಾಮಸ್ಥರಿಂದ ಊಟ ಕೇಳಿ ಪಡೆದು ತಿನ್ನುತ್ತಾ ಕಾಲಕಳೆಯುತ್ತಿದ್ದಳು.

ಈಕೆಯ ತಾಯಿಯ ತವರು ಸಾತನೂರು ಗ್ರಾಮವಾಗಿದ್ದು, ತಂದೆ ಮಾಡಬಾಳ್ ಹೋಬಳಿಯ ಚಲುವಯ್ಯನಪಾಳ್ಯ ಗ್ರಾಮದಲ್ಲಿ ವಾಸವಾಗಿದ್ದರು. ವಿಜಯಮ್ಮಳ ತಾಯಿಗೆ ತವರಿನ ಆಸ್ತಿ ನೀಡಿದ್ದರಿಂದ ವಿಜಯಮ್ಮ ಹಾಗೂ ಅವರ ತಾಯಿ ಸಾತನೂರು ಗ್ರಾಮದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಈ ಸಮಯದಲ್ಲಿ ವಿಜಯಮ್ಮ ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಅವನ ಜೊತೆ ಮನೆಬಿಟ್ಟು ಓಡಿ ಹೋಗಿದ್ದಳು. ಆ ನಂತರ ತನ್ನ ತಂದೆಯ ಮನೆಗೆ ಹಿಂತಿರುಗಿದ್ದಳು. ಅದಾದ ಬಳಿಕ ವಿಜಯಮ್ಮನ ಗಂಡನ ಹತ್ಯೆಯಾಗಿತ್ತು. ಈ ಆರೋಪದ ಮೇರೆಗೆ ಅಪ್ರಾಪ್ತ ವಯಸ್ಕಳಾದ ಆಕೆಯನ್ನು ರಿಮ್ಯಾಂಡ್ ಹೋಂನಲ್ಲಿರಿಸಲಾಗಿತ್ತು.
18 ವರ್ಷ ತುಂಬಿದ ನಂತರ ಬಿಡುಗಡೆಯಾದ ವಿಜಯಮ್ಮಳನ್ನು ಸಾತನೂರು ಗ್ರಾಮದ ವ್ಯಕ್ತಿಯೊಬ್ಬರು ಬೆಂಗಳೂರಿನ ರಾಜಗೋಪಾಲನಗರದ ಗಾರ್ಮೆಂಟ್ಸ್ಗೆ ಸೇರಿಸಿದ್ದರು. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಮತ್ತೊಂದು ಮದುವೆಯಾದ ವಿಜಯಮ್ಮಳಿಗೆ ಗಂಡು, ಹೆಣ್ಣು ಮಗುವಾಗಿತ್ತು. ಆಗಾಗ ತನ್ನ ತಾಯಿಯ ತವರೂರಾದ ಸಾತನೂರಿಗೆ ಆಕೆ ಬಂದು ಹೋಗುತ್ತಿದ್ದಳು.
ಇತ್ತೀಚೆಗೆ ಮಾನಸಿಕವಾಗಿ ಅಸ್ವಸ್ಥಳಾಗಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಬಂದ ಗರ್ಭಿಣಿ ವಿಜಯಮ್ಮನಿಗೆ ಮನೆಗಳಲ್ಲಿ ಯಾರೂ ಆಶ್ರಯ ನೀಡದ ಕಾರಣ ಸರಕಾರಿ ಶಾಲೆಯ ಆವರಣದಲ್ಲಿ ವಾಸ ಮಾಡುತ್ತಿದ್ದಳು. ಶಾಲೆಯಲ್ಲಿ ತಯಾರಿಸುವ ಬಿಸಿಯೂಟ ಹಾಗೂ ಗ್ರಾಮದ ಮನೆಗಳಲ್ಲಿ ಆಹಾರವನ್ನು ಪಡೆದು ಸೇವಿಸುತ್ತ ಕಾಲ ಕಳೆಯುತ್ತಿದ್ದಳು.
ಈಕೆಯ ಪರಿಸ್ಥಿತಿಯನ್ನು ಗಮನಿಸಿದ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸುರೇಂದ್ರ ಅವರು ಇದೀಗ ರಾಮನಗರದಲ್ಲಿರುವ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದ್ದಾರೆ.












Click it and Unblock the Notifications