ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದೆ ಬಿಜೆಪಿ ಸೇರ್ಪಡೆ: ಖಾರವಾಗಿ ಹೇಳಿಕೆ ನೀಡಿದ ಎಂ ಬಿ ಪಾಟೀಲ್
ವಿಜಯಪುರ, ಜನವರಿ 27: ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದೆ ಬಿಜೆಪಿ ಸೇರ್ಪಡೆಯಾಗುವ ಮೂಲಕ ತಮ್ಮ ವ್ಯಕ್ತಿತ್ವ ಮತ್ತು ಘನತೆಗೆ ಚ್ಯುತಿ ತಂದುಕೊಂಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಎಂ. ಬಿ. ಪಾಟೀಲ ಹೇಳಿದ್ದಾರೆ.
ಜಗದೀಶ ಶೆಟ್ಟರ ಘರವಾಪ್ಸಿ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಎಂ ಬಿ ಪಾಟೀಲ್,ಜಗದೀಶ್ ಶೆಟ್ಟರ್ ಅವರೇ ಹೇಳಿದಂತೆ ಅವರನ್ನು ಮನೆಯಿಂದ ಹೊರಗೆ ಹಾಕಿದಾಗ, ಅನ್ಯಾಯವಾದಾಗ, ಅಸಾಮಾಧಾನವಾದಾಗ ಅವರಿಗೆ ಕಾಂಗ್ರೆಸ್ ಬೇಕಾಗಿತ್ತು. ಮಾಜಿ ಮುಖ್ಯಮಂತ್ರಿಯಾಗಿದ್ದರೂ ಬಿಜೆಪಿಯವರು ಅವರಿಗೆ ಒಂದು ಟಿಕೆಟ್ ಕೂಡ ಕೊಡಲಿಲ್ಲ. ಆಗ ಅವರಿಗೆ ನಾವು ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದೇವು. ಸೋತರೂ ಅವರಿಗೆ ವಿಧಾನ ಪರಿಷತ ಶಾಸಕರನ್ನಾಗಿ ಮಾಡಿದೆವು. ಅವರು ಬಯಸಿದರೆ ಮುಂಬರುವ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಕುರಿತೂ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದೇವು ಎಂದು ಹೇಳಿದರು.

ಇಷ್ಟೆಲ್ಲ ಗೌರವ ನೀಡಿದರೂ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಅವರ ಘನತೆಗೆ ಗೌರವ ತರುವಂಥದ್ದಲ್ಲ. ಈ ವಿಚಾರದಲ್ಲಿ ಜಗದೀಶ ಶೆಟ್ಟರ ಸಣ್ಣವರಾಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರುತ್ತದೆ. ಇದರಿಂದ ನಮಗೇನೂ ಹಾನಿಯಾಗುವುದಿಲ್ಲ. ನಮಗೇನೂ ವ್ಯತ್ಯಾಸವಾಗುವುದಿಲ್ಲ. ಆದರೆ, ಅವರ ವ್ಯಕ್ತಿತ್ವಕ್ಕೆ ದೊಡ್ಡ ಪೆಟ್ಟು ಬೀದ್ದಿದೆ. ಅವರ ಘನತೆಗೆ ಈ ಕೆಲಸ ಮಾಡಬಾರದಿತ್ತು ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಅನ್ಯಾಯವಾಗಿದೆ. ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ಸಿಗೆ ಬಂದಿದ್ದೇ ಎಂದು ಅವರೇ ಹೇಳಿದ್ದರು. ಆದರೆ, ಈಗ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ಸಾಗಲು ಕಾರಣವೇನು ಎಂದು ವ್ಯಂಗ್ಯವಾಡಿದ ಅವರು, ಶೆಟ್ಟರ್ ಅವರು ಬಿಜೆಪಿ ಸೇರ್ಪಡೆಗೆ ನೀಡುತ್ತಿರುವ ಕಾರಣವೂ ಸಮಂಜಸವಾಗಿಲ್ಲ. ಅಲ್ಲದೇ, ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಮುಂಬರುವ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಜಗದೀಶ ಶೆಟ್ಟರ್ ಅವರ ವ್ಯಕ್ತಿತ್ವಕ್ಕೆ ಇದರಿಂದ ಕಳಂಕ, ಚ್ಯುತಿ ಬಂದಿದೆ ಎಂದು ಅವರು ಹೇಳಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಬಿಜೆಪಿ ಸೇರ್ಪಡೆ ನಂತರ ಅಥಣಿ ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆಯುತ್ತಾರಾ ಎಂಬ ಪ್ರಶ್ನೆ ಉತ್ತರಿಸಿದ ಅವರು, ಮತ್ತೆ ಬೇರೆಯವರು ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಲಕ್ಷ್ಮಣ ಸವದಿ ಅವರು ಹಿರಿಯರಿದ್ದಾರೆ. ಅವರು ಆ ರೀತಿ ಮಾಡುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಶೆಟ್ಟರ್ ಸೇರ್ಪಡೆಯಾದ ನಂತರ ಸವದಿ ಅವರ ಹೆಸರು ಹೇಳುವುದು ಬೇಡ ಎಂದು ಹೇಳಿದರು.

ರಾಮಮಂದಿರ ಲೋಕಾರ್ಪಣೆಗೆ ಕಾಂಗ್ರೆಸ್ ಗೈರಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ರಾಮನ ವಿರೋಧ ಇದ್ದಾರೆ? ನಾವು ರಾಮನನ್ನೂ ಗೌರವಿಸುತ್ತೇವೆ. ಶಿವನನ್ನೂ ಗೌರವಿಸುತ್ತೇವೆ. ಬುದ್ಧನನ್ನೂ ಗೌರವಿಸುತ್ತೇವೆ. ಅಲ್ಲಾನನ್ನೂ ಗೌರವಿಸುತ್ತೇವೆ. ಗುರುನಾನಕರನ್ನೂ ಗೌರವಿಸುತ್ತೇವೆ. ಮಹಾವೀರನನ್ನೂ ಗೌರವಿಸುತ್ತೇವೆ. ಆದರೆ, ನಮಗೆ ಮತ್ತು ಬಿಜೆಪಿಯವರಿಗೆ ವ್ಯತ್ಯಾಸವಿದೆ.
ರಾಮ ಮಂದಿರ ಉದ್ಘಾಟನೆ ಸಮಾರಂಭ ಪಕ್ಷಾತೀತವಾಗಿ ಆಗಬೇಕಿತ್ತು. ಆದರೆ, ಅದು ಚುನಾವಣೆಗೋಸ್ಕರ ಪಕ್ಷದ ಕಾರ್ಯಕ್ರಮದಂತೆ ಮಾಡಿದರು. ರಾಜಕೀಯ ಕಾರ್ಯಕ್ರಮವಾಗಿತ್ತು. ಅದಕ್ಕೆ ನಮ್ಮ ವಿರೋಧವಿತ್ತು. ಹೀಗಾಗಿ ನಾವು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ನಾವು ಮನಸ್ಸಿಗೆ ಬಂದ ದಿನ ನಿಶ್ಚಿತವಾಗಿ ರಾಮ ಮಂದಿರಕ್ಕೆ ತೆರಳಿ ದರ್ಶನ ಪಡೆಯುತ್ತೇವೆ ಎಂದು ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ, ಸಚಿವರಿಗೆ ಟಾಸ್ಕ್ ವಿಚಾರವಾಗಿ ಮಾತನಾಡಿ, ಸಚಿವರಿಗೆ ಲೋಕಸಭೆವಾರು ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿ ನೀಡಲಾಗಿತ್ತು. ವಿಜಯಪುರ ಜಿಲ್ಲೆಗೂ ಸಚಿವರು ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅಲ್ಲದೇ, ಈ ಕುರಿತು ಕೆಪಿಸಿಸಿ ಮತ್ತು ಎಐಸಿಸಿಗೆ ವರದಿಯನ್ನೂ ನೀಡಿದ್ದಾರೆ. ಕೆಲವೇ ವಾರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ವಿಜಯಪುರ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಸ್ಥಳೀಯರಿರುತ್ತಾರೋ ಅಥವಾ ಹೊರಗಿನವರಿಗೆ ಅವಕಾಶ ನೀಡಲಾಗುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪ್ರಕಾರ ಸ್ಥಳೀಯರೇ ಇರುತ್ತಾರೆ. ಬೇರೆ ಜಿಲ್ಲೆಯವರು ಬಂದರೂ ಅಚ್ಚರಿಯಿಲ್ಲ. ಒಟ್ಟಾರೆ ನಮ್ಮ ಅಭ್ಯರ್ಥಿ ಗೆಲ್ಲಬೇಕು. ನನಗೆ ಗೊತ್ತಿರುವ ಪ್ರಕಾರ ಸ್ಥಳೀಯರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಪಕ್ಷ ಮತ್ತು ಹೈಕಮಾಂಡ ಬಯಸಿದರೆ ಹಾಲಿ ಸಚಿವರೂ ಸ್ಪರ್ಧಿಸಬೇಕಾಗುತ್ತದೆ. ಎಂ. ಬಿ. ಪಾಟೀಲರೇ ನೀವು ಪಾರ್ಲಿಮೆಂಟ್ ಗೆ ನಿಂತುಕೊಳ್ಳಿ ಎಂದರೆ ನಿಂತುಕೊಳ್ಳಬೇಕಾಗುತ್ತದೆ. ಆದರೆ, ನಮ್ಮ ಕ್ಷೇತ್ರ ಮೀಸಲಾತಿಗೆ ಒಳಪಟ್ಟಿದೆ. ಪಕ್ಷ ಬಯಸಿದರೆ ನಿಲ್ಲಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಉಪಮುಖ್ಯಮಂತ್ರಿ ಆಯ್ಕೆ ವಿಚಾರ ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸುವಂಥದ್ದು. ಈ ಹಿಂದೆಯೂ ಆಂತರಿಕವಾಗಿ ಚರ್ಚಿಸಿದಂತೆ ಮುಂದೆಯೂ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ನಡೆಯಲಿದೆ. ಯಾವುದನ್ನೂ ಬಹಿರಂವಾಗಿ ಚರ್ಚಿಸಲು ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪತ್ರಕರ್ತರು ಹೇಳಿದಂತೆ ಅವರು ಅವರು ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications