ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿ ಮಸೂದ್ ಹುಸೇನ್ ನೇಮಕ
ನವದೆಹಲಿ, ಜೂನ್ 6: ಕಾವೇರಿ ನದಿ ನೀರು ಹಂಚಿಕೊಳ್ಳಲು ಹೊಸ ಕ್ರಮವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಅದರಂತೆ ಕಳೆದ ತಿಂಗಳು ಕೇಂದ್ರ ಸರ್ಕಾರವು "ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ" ವನ್ನು ಸ್ಥಾಪಿಸಿತು.
ಈ ನೀರು ನಿರ್ವಹಣಾ ಪ್ರಧಿಕಾರಕ್ಕೆ ಅಧ್ಯಕ್ಷರನ್ನಾಗಿ ಕೇಂದ್ರ ಸರಕಾರ ಎಸ್. ಮಸೂದ್ ಹುಸೇನ್ ಅವರನ್ನು ನೇಮಿಸಿದೆ. ಅವರು ಸದ್ಯ ರಾಷ್ಟ್ರೀಯ ನೀರು ಅಭಿವೃದ್ಧಿ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿದ್ದಾರೆ.

ಕೇಂದ್ರ ಸರ್ಕಾರವು ನಿಗದಿಪಡಿಸಿದ ಯೋಜನೆಯ ಪ್ರಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಾವೇರಿ ನಿಯಂತ್ರಣ ಆಯೋಗದ ಕಚೇರಿ ಬೆಂಗಳೂರಿನಲ್ಲಿದೆ. ಕೇಂದ್ರ ಜಲಸಂಪನ್ಮೂಲ ಇಲಾಖೆ ಆದೇಶದ ಪ್ರಕಾರ ಅಧ್ಯಕ್ಷರು ಹಾಗೂ 8 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಎಂಟು ಸದಸ್ಯರ ಪೈಕಿ ನಾಲ್ವರು ಕಾಯಂ ಸದಸ್ಯರಾಗಿರುತ್ತಾರೆ. ಉಳಿದವರು ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿರುತ್ತಾರೆ. ಈ ಸದಸ್ಯರು ಜಲವಿವಾದ ವ್ಯಾಪ್ತಿಯಲ್ಲಿರುವ ನಾಲ್ಕು ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ.
ನೀರಿನ ಮೇಲ್ವಿಚಾರಣೆ ಮಾಡಲು, ಆಣೆಕಟ್ಟುಗಳಲ್ಲಿ ನೀರು ಸಂಗ್ರಹ ಅವುಗಳ ಬಿಡುಗಡೆ ಮಾಡುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ. ಬಿಡುಗಡೆಯಾದ ನೀರಿನ ಪ್ರಮಾಣ, ಬಿಡುಗಡೆಯಾದ ಬಳಿಕ ಶೇಖರಣೆಯಾದ ನೀರಿನ ಪ್ರಮಾಣವನ್ನು ಈ ಪ್ರಾಧಿಕಾರ ಮಾಪನ ಮಾಡಲಿದೆ.
ಇನ್ನು ಈ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆಯಲಿದೆ. ಈಗಾಗಲೇ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ಈ ಪ್ರಾಧಿಕಾರಕ್ಕೆ ಕರ್ನಾಟಕ ರಾಜ್ಯದ ಪ್ರತಿನಿಧಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.












Click it and Unblock the Notifications