ಇಂತಹ ಬರ್ಬರ ದಾಳಿ ಬಗ್ಗೆ ಕೇಳಿರಲಿಲ್ಲ, ಪರಿಸ್ಥಿತಿ ಗಂಭೀರವಾಗಿದೆ: ಇಸ್ರೇಲ್ನಲ್ಲಿ ಸಿಲುಕಿರುವ ಮಂಗಳೂರಿಗರು ಹಂಚಿಕೊಂಡ ಸಂಕಟವಿದು
ಬೆಂಗಳೂರು, ಅಕ್ಟೋಬರ್ 09: ಇಸ್ರೇಲ್ನಲ್ಲಿ ಹಮಾಸ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ನಾಗರಿಕರನ್ನು ಗುರಿಯಾಗಿಸಿಕೊಂಡು ಕಂಡಲ್ಲಿ ಗುಂಡಿಕ್ಕುತ್ತಿದ್ದಾರೆ. ಇಸ್ರೇಲ್ ದೇಶವು ಅಕ್ಷರಶಃ ನರಕವಾಗಿ ಪರಿಣಮಿಸಿದೆ. ಗಾಜಾ ಪಟ್ಟಿಯುದ್ದಕ್ಕೂ ಇಸ್ರೇಲ್ ನಾಗರಿಕರನ್ನು ಒತ್ತೆಯಾಳಾಗಿ ಹಮಾಸ್ ಉಗ್ರರು ಇರಿಸಿಕೊಂಡಿದ್ದಾರೆ. ಈ ಕುರಿತು ಇಸ್ರೇಲ್ನಲ್ಲಿ ಸಿಲುಕಿರುವ ಮಂಗಳೂರಿಗರು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆ ಸಂಕಟ ಹಂಚಿಕೊಂಡಿದ್ದಾರೆ.
'ನಾನು ಕಳೆದ 14 ವರ್ಷಗಳಿಂದ ಇಸ್ರೇಲ್ನಲ್ಲಿ ಕೇರ್ಟೇಕರ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ನಾಗರಿಕರನ್ನು ನಿರ್ದಯವಾಗಿ ಕೊಲ್ಲುವ ಮತ್ತು ಅಪಹರಣ ಮಾಡುವಂತಹ ಪರಿಸ್ಥಿತಿಯನ್ನು ಎಂದಿಗೂ ಅನುಭವಿಸಿಲ್ಲ. ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ ಮತ್ತು ಚಿಂತಾಜನಕವಾಗಿದೆ. ಆದರೆ, ನಾವು ಇಸ್ರೇಲ್ ಪಡೆಯ ಮೇಲೆ ನಾವು ಭರವಸೆ ಹೊಂದಿದ್ದೇವೆ. ಅವರು ನಮ್ಮನ್ನು ಬಲವಾಗಿ ರಕ್ಷಿಸುತ್ತಾರೆಂದು ನಂಬಿದ್ದೇವೆ' ಎಂದು ಮಂಗಳೂರು ಸಮೀಪದ ವಾಮಂಜೂರಿನ ಲೆನಾರ್ಡ್ 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಗೆ ತಿಳಿಸಿದ್ದಾರೆ.

ಇಸ್ರೇಲ್ನ ಮಧ್ಯ ಕರಾವಳಿಯ ನಗರವಾದ ಹೆರ್ಜ್ಲಿಯಾದಲ್ಲಿ ವಾಮಂಜೂರಿನ ಲೆನಾರ್ಡ್ ನೆಲೆಸಿದ್ದಾರೆ.
ಇಸ್ರೇಲ್ ನಗರಗಳಾದ ಟೆಲ್ ಅವಿವ್, ಜೆರುಸಲೆಮ್, ರಮತ್ ಹಶರೋನ್, ಗಾಶ್ ಕಿಬ್ಬುಟ್ಜ್ ಮತ್ತು ಇಸ್ರೇಲ್ನ ಇತರ ಭಾಗಗಳಲ್ಲಿ ಕೆಲಸ ಮಾಡುವ ಅನೇಕ ಮಂಗಳೂರಿಗರು ಇದೇ ರೀತಿಯ ಸಂಕಟವನ್ನು ಹೊರಹಾಕಿದ್ದಾರೆ.
'ನಾನು ವಾಸಿಸುವ ಸ್ಥಳವು ಸದ್ಯಕ್ಕೆ ಸುರಕ್ಷಿತವಾಗಿದ್ದರೂ, ಗಾಜಾದಿಂದ ಕ್ಷಿಪಣಿಗಳು ಹಾರುತ್ತಿರುವುದನ್ನು ನಾವು ನೋಡಿದೆವು. ನಾನು ವಾಸಿಸುವ ಸ್ಥಳದ ಬಳಿ ಕೆಲವು ಕ್ಷಿಪಣಿಗಳು ಇಳಿದವು. ಆದರೆ ಅವುಗಳಲ್ಲಿ ಕನಿಷ್ಠ 15 ಕ್ಷಿಪಣಿಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಐರನ್ ಡೋಮ್ಗಳ ಸಹಾಯದಿಂದ ತಡೆದವು' ಎಂದು ಲೆನಾರ್ಡ್ ಹೇಳಿದ್ದಾರೆ.
'ಎಲ್ಲಾ ಹೊಸ ಕಟ್ಟಡಗಳಲ್ಲಿ ಬಲವರ್ಧಿತ ಭದ್ರತಾ ಕೊಠಡಿಯಾದ ಮಮ್ಮಲ್ ಕಡೆಗೆ ನಾವು ಧಾವಿಸಬೇಕಾಗಿತ್ತು. ನಾನು ಇಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ ಇಂತಹ ದಾಳಿಯ ಬಗ್ಗೆ ಕೇಳಿಲ್ಲ. ಅವರು ಎಂದಿಗೂ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿರಲಿಲ್ಲ' ಎಂದು ತಿಳಿಸಿದ್ದಾರೆ.
ಆದರೆ, ಈ ಬಾರಿ ಅವರು ಇಸ್ರೇಲ್ನೊಳಗೆ ಪ್ರವೇಶಿಸಿದ್ದಾರೆ. ಮನೆಗಳು ಮತ್ತು ಬೀದಿಗಳಲ್ಲಿ ಸುತ್ತುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ನಿರ್ದಯವಾಗಿ ಕೊಂದು ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇದು ಭಯಾನಕವಾಗಿದೆ ಎಂದು ಲೆನಾರ್ಡ್ ಹೇಳಿದ್ದಾರೆ.
ಜೆರುಸಲೆಮ್ನಲ್ಲಿ ವಾಸಿಸುತ್ತಿರುವ ಫ್ರಾ ಸಂತೋಷ್ ಮಾತನಾಡಿ, ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ ಇದೀಗ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
'ನಾವು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಹೆಚ್ಚಿನ ಸ್ಫೋಟಗಳು ಇಸ್ರೇಲ್ನ ದಕ್ಷಿಣ ನಗರಗಳಲ್ಲಿ ಸಂಭವಿಸಿವೆ. ನಮ್ಮನ್ನು ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನ ಪ್ರವೀಣ್ ಪಿಂಟೋ ಕಳೆದ 16 ವರ್ಷಗಳಿಂದ ಟೆಲ್ ಅವೀವ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಅವರ ಮನೆಯಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿರುವ ಕಟ್ಟಡಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಇದರಲ್ಲಿ ಇಬ್ಬರು ಇಸ್ರೇಲಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರವೀಣ್ ಪಿಂಟೋ ಅವರ ಪತ್ನಿ ನೀತಾ ಅವರು ತಮ್ಮ ಪತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಪತಿ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
'ಭಾನುವಾರ ಮಧ್ಯಾಹ್ನ ಇಸ್ರೇಲ್ ಸರ್ಕಾರವು ರೆಡ್ ಅಲರ್ಟ್ ಘೋಷಿಸಿದೆ. ಮಂಗಳೂರು, ಉಡುಪಿ ಮತ್ತು ಕುಂದಾಪುರ ಕಡೆಯ ಸುಮಾರು 500 ಕ್ಕೂ ಹೆಚ್ಚು ಜನರು ಇದ್ದಾರೆ ಎಂದು ಪತಿ ನನಗೆ ಹೇಳಿದರು" ಎಂದು ನೀತಾ 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್'ಗೆ ಹೇಳಿದ್ದಾರೆ.
ಟೆಲ್ ಅವಿವ್ನಲ್ಲಿ ನೆಲೆಸಿರುವ ಮತ್ತೊಬ್ಬ ಮಂಗಳೂರಿಗ ಪ್ರಕಾಶ್ ಎಂಬುವವರು, ಕ್ಷಿಪಣಿ ದಾಳಿಯಿಂದಾಗಿ ಶನಿವಾರದಿಂದ ಬಂಕರ್ನೊಳಗೆ ಸಿಲುಕಿಕೊಂಡಿದ್ದೆ. ಆ ಬಳಿಕ ಮನೆಗೆ ಮರಳಿದ್ದೇನೆ. ನನ್ನ ಕುಟುಂಬ ಸದಸ್ಯರು ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.
'ಹಮಾಸ್ ಉಗ್ರಗಾಮಿಗಳು ನಮ್ಮ ಕೋಣೆಗೆ ಬಹಳ ಹತ್ತಿರದಲ್ಲಿದ್ದರು. ಇಸ್ರೇಲಿ ಪಡೆಗಳು ಅವರನ್ನು ವಶಪಡಿಸಿಕೊಂಡವು. ನಾವು ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಸುರಕ್ಷಿತವಾಗಿ ಉಳಿದಿದ್ದೇವೆ' ಎಂದು ಗಾಡ್ವಿನ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೇಲ್ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಹಾಯವಾಣಿಗಳಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
080-22340676 ಅಥವಾ 080-22253707 ಸಹಾಯವಾಣಿ ನಂಬರ್ಗಳನ್ನು ನೀಡಿದ್ದಾರೆ.












Click it and Unblock the Notifications