ಮಳವಳ್ಳಿ: ಏಕಾಂಗಿ ಹೆತ್ತಪ್ಪನಿಂದಲೇ 3 ಮಕ್ಕಳ ಮಾರಾಟ
ಮಂಡ್ಯ, ಮೇ 2: ಕಳೆದ ವಾರ ಜಿಲ್ಲೆಯಿಂದ 2 ಕೆಟ್ಟ ಸುದ್ದಿಗಳನ್ನು ಕೇಳಿದಿರಿ. ಇಬ್ಬರು ಯುವ ಗೃಹಿಣಿಯರು ಮಾವನ ಮನೆಯ ಕಾಟಕ್ಕೆ ತುತ್ತಾಗಿದ್ದರು. ಇಂದು ಮತ್ತೊಂದು ಹೃದಯವಿದ್ರಾವಕ ಸುದ್ದಿ ಕೇಳಿಬಂದಿದೆ. ಅದನ್ನು ದುರ್ವಿಧಿ ಅನ್ನುತ್ತೀರೋ ಅಥವಾ ಪರಿಸ್ಥಿತಿಯ ವಿಕಟಹಾಸವೋ ನೀವೇ ನಿರ್ಧರಿಸಿ.
ಏನಪ್ಪಾ ಅಂದರೆ ಅದು ಚಿಕ್ಕ ಚೊಕ್ಕ ಕುಟುಂಬ. ಮೂವರು ಹೆಣ್ಣು ಮಕ್ಕಳೊಂದಿಗೆ ಅಪ್ಪ-ಅಮ್ಮ ಇರುವ ಕುಟುಂಬ ಅದು. ಆದರೆ ಆ ಕುಟುಂಬದ ಒಡತಿ ಇತ್ತೀಚೆಗೆ ಮೂವರು ಮಕ್ಕಳು ಮತ್ತು ಪತಿಯನ್ನು ಬಿಟ್ಟು ಮರಳಿ ಬಾರದ ಲೋಕ ಸೇರಿಕೊಂಡಿದ್ದಾರೆ. ಇಂತಿಪ್ಪ ಕುಟುಂಬಕ್ಕೆ ಕಡುಬಡತನ ಎಂಬುದೂ ಸಾಥ್ ನೀಡಿದೆ.

ಕಿತ್ತು ತಿನ್ನುವ ಬಡತನ, ಪತ್ನಿಯ ಅಗಲಿಕೆಯಿಂದ ಮನನೊಂದ ಅಸಹಾಯಕ ತಂದೆ ಮಕ್ಕಳಿಗೆ ತುತ್ತು ಅನ್ನ ನೀಡಲಾಗದೆ ತನ್ನ ಮೂರೂ ಮಂದಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಿಪ್ಪಹಳ್ಳಿಯ ಮಾದೇಶ ಈ ಕುಕೃತ್ಯಕ್ಕೆ ಮುಂದಾದ ಅಪ್ಪ.
ಅದೃಷ್ಟವಶಾತ್ ಈ ಮಕ್ಕಳಿಗೆ ಈಗ ಅಸರೆ ದೊರೆತಿದೆ ಅಂತನ್ನಿ. ಮಾದೇಶ ಮತ್ತು ಜ್ಯೂತಿ ದಂಪತಿಗೆ ಈ ಹಿಂದೆ ಎರಡು ಮಕ್ಕಳು ಜನಿಸಿದ್ದವು. ಈಗ ಒಂದು ತಿಂಗಳ ಹಿಂದೆ ಮತ್ತೂ ಒಂದು ಹೆಣ್ಣು ಮಗು ಜನಿಸಿದೆ. ಅದರೆ ಕೊನೆಯ ಮಗುವಿಗೆ ಮನೆಯಲ್ಲೇ ಹೆರಿಗೆಯಾಗಿತ್ತು. ಬಾಣಂತಿ ಜ್ಯೂತಿ ಮನೆಯಲ್ಲೇ ಇದ್ದು, ಯಾವುದೇ ಚಿಕಿತ್ಸೆ ಆಕೆಗೆ ಲಭಿಸಿರಲಿಲ್ಲ. ಹಾಗಾಗಿ ಆಕೆ ಅನಾರೋಗ್ಯ ಪೀಡಿತಳಾಗಿ 15 ದಿನಗಳ ಹಿಂದೆ ತೀರಿಕೊಂಡಿದ್ದಾಳೆ.
ಏಕಾಂಗಿಯಾದ ಮಾದೇಶ ತನ್ನ ಮೂವರು ಮಕ್ಕಳನ್ನು ಮಾರಾಟ ಮಾಡಲು ನಿಶ್ಚಯಿಸಿ, ಮಕ್ಕಳನ್ನು ಮಾರಾಟ ಮಾಡಲು ಕಂಡಕಂಡವರಲ್ಲಿ ಗೋಗರೆದಿದ್ದಾನೆ. ಆಗ ಈ ಬಗ್ಗೆ ಗ್ರಾಮಸ್ಥರೊಬ್ಬರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ತಿಪ್ಪಹಳ್ಳಿಗೆ ತೆರಳಿ ಮಾದೇಶನಿಗೆ ಮಕ್ಕಳನ್ನು ಮಾರಾಟ ಮಾಡುವುದು ಅಪರಾಧ ಎಂದ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದ್ರೆ ಕಿತ್ತು ತಿನ್ನವ ಬಡತನ, ಒಬ್ಬನೇ ಕೊಲಿ ಮಾಡಿ ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಮಾದೇಶ ಅಂಗಲಾಚಿದ್ದಾನೆ.
ಇದಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮೊದಲು ಜನಿಸಿದ 5 ಮತ್ತು 3 ವರ್ಷದ ಇಬ್ಬರು ಹೆಣ್ಣು ಮಕ್ಕಳ ಯೋಗಕ್ಷೇಮಕ್ಕೆ ಸರ್ಕಾರದಿಂದ ತಲಾ 1,000 ರೂ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಒಂದು ತಿಂಗಳ ಹಸುಳೆಯನ್ನು ತಮ್ಮ ಸುಪರ್ದಿಗೆ ಪಡೆದಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಗುವನ್ನು ಮೇಲುಕೋಟೆಯ ಜನಪರ ಮಕ್ಕಳ ದತ್ತು ಕೇಂದ್ರದ ವಶಕ್ಕೆ ನೀಡಿದ್ದಾರೆ.
ಎರಡು ತಿಂಗಳಲ್ಲಿ ಪೋಷಕರ ಮನ ತಂದೆ ಮಾದೇಶನ ಮನಃಪರಿವರ್ತನೆಯಾದಲ್ಲಿ ಮಗುವನ್ನು ಆತನ ಸುಪರ್ದಿಗೆ ವಾಪಸು ನೀಡುವುದಾಗಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.












Click it and Unblock the Notifications