ರಮ್ಯಾ (ರಮ್ಮೀ) ಆಟ ತೋರಿಸ್ಬೇಕು: ಶಾಸಕ ಪುಟ್ಟಣ್ಣಯ್ಯ
ಬೆಂಗಳೂರು, ಏ.7: ಲೇಟೆಸ್ಟ್ ಆಗಿ ಕಳೆದ ವಾರ ಮಂಡ್ಯ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ಭುಗಿಲೇಳುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಅತ್ತ, ಗುಲ್ಬರ್ಗದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಮಂಡ್ಯ ಬೆಳವಣಿಗೆಗಳು ದುರದೃಷ್ಟಕರ' ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನಂದು ವಾರದಲ್ಲಿ ಚುನಾವಣೆ ಇಟ್ಟುಕೊಂಡು ರಗಳೆ ಮಾಡುವುದನ್ನು ಜಿಲ್ಲಾ ಕಾಂಗ್ರೆಸ್ಸಿಗರು ತಕ್ಷಣ ಕೈಬಿಡಬೇಕು. ಭಿನ್ನಭಿಪ್ರಾಯ ಮರೆತು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಾ. ಪರಮೇಶ್ವರ್ ಸ್ಪಷ್ಟ ಸಂದೇಶ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ತಮ್ಮ ನಿವಾಸದಲ್ಲಿ ಕೇಂದ್ರದ ಮಾಜಿ ಸಚಿವ ಬಸವರಾಜ್ ಪಾಟೀಲ್ ಅನ್ವರಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸಂದೇಶ ನೀಡಿದರು.

ಚುನಾವಣೆ ವೇಳೆಯಲ್ಲಿ ಭಿನ್ನಾಭ್ರಿಪಾಯ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದೇವೆ. ಬುದ್ದಿಮಾತು ಹೇಳಿದ್ದೇವೆ. ಇದಕ್ಕೂ ಮಿಗಿಲಾಗಿ ಹದ್ದು ಮೀರಿದರೆ ಅಂಥವರ ವಿರುದ್ಧ ನೇರ ಶಿಸ್ತು ಕ್ರಮ ಜರುಗಿಸಲಾಗುವುದು. ರಮ್ಯಾ ಗೆಲುವಿಗೆ ತೊಂದರೆಯಾಗುವಂತಹ, ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆಯನ್ನು ನೀಡಿರುವ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ಮತ್ತು ಬೆಂಬಲಿಗರಿಗೆ ಈಗಾಗಲೇ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನು ಮೀರಿ ನಡೆದರೆ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಡಾ. ಪರಮೇಶ್ವರ್ ಎಚ್ಚರಿಸಿದ್ದಾರೆ.
ದುರದೃಷ್ಟಕರ- ಗುಲ್ಬರ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ:
ಪಕ್ಷದಲ್ಲಿ ಎದ್ದಿರುವ ಭಿನ್ನಾಭಿಪ್ರಾಯಗಳು ಶೀಘ್ರದಲ್ಲಿಯೇ ಶಮನವಾಗಲಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಮಂಡ್ಯದಲ್ಲಿ ಶನಿವಾರ ನಡೆದ ಘಟನೆ ದುರದೃಷ್ಟಕರ. ಈಗಾಗಲೇ ಪಕ್ಷದ ಅಧ್ಯಕ್ಷರು ಸ್ಥಳೀಯ ಮುಖಂಡರ ಜತೆಗೆ ಮಾತನಾಡಿದ್ದಾರೆ. ಶಿವಮೊಗ್ಗದಲ್ಲೂ ಕುಮಾರ್ ಬಂಗಾರಪ್ಪ ಮನವೊಲಿಸುವ ಪ್ರಯತ್ನ ನಡೆದಿದೆ. ಏ 14 ರಂದು ಅಂಬರೀಷ್ ಅವರು ರಾಜ್ಯಕ್ಕೆ ಬರುವ ಸಾಧ್ಯತೆ ಇದ್ದು, ಅಷ್ಟರೊಳಗೆ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ. ಒಗ್ಗಟ್ಟಾಗಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ರಮ್ಯ ಎದುರಿಗೇ ರಂಪಾಟ:
ಕಳೆದ ಶನಿವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸದೆ ರಮ್ಯಾ ಅವರು ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿದ್ದಾಗ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಮತ್ತು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಎಲ್ ಲಿಂಗರಾಜು ಅವರ ನಡುವೆ ಅಕ್ಷರಶಃ ಕಾದಾಟ ನಡೆದಿತ್ತು.
ಮಧ್ಯೆ ಪ್ರವೇಶಿಸಿದ ಹಿರಿಯ ಮುಖಂಡರು ಹಾಗೂ ಜಿಲ್ಲಾಧ್ಯಕ್ಷ ಎಂಎಸ್ ಆತ್ಮಾನಂದ ಅವರು ಇಬ್ಬರನ್ನೂ ಸಮಾಧಾನಪಡಿಸಿದರು. ಇದರಿಂದ ತೀವ್ರ ಮುಜುಗರಕ್ಕೀಡಾದ ರಮ್ಯಾ ಅವರು ರೋಡ್ ಸೋವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು.
ರಮ್ಯಾ ಅವರು (ರಮ್ಮೀ) ಆಟ ತೋರಿಸಬೇಕು: ಪ್ರಾಮಾಣಿಕ ಮತ್ತು ಸತ್ಯದ ಮಾರ್ಗದಲ್ಲಿ ಚುನಾವಣೆ ನಡೆಸಿದರೆ ಗೆಲುವು ಸಾಧಿಸುವುದು ಕಷ್ಟ. ಹಾಗಾಗಿ ವಾಮಮಾರ್ಗ ಬಳಸಿ ಗೆಲ್ಲುವ ಮಾರ್ಗ ಕಂಡುಕೊಳ್ಳಬೇಕೆಂದು ಶಾಸಕ ಕೆಎಸ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ರಮ್ಯಾಗೆ ಮಂಡ್ಯದಲ್ಲಿ ಕಿವಿಮಾತು ಹೇಳಿದ್ದಾರೆ.
ಪಾಂಡುಪುರ ವಿಧಾನಸಭೆ ಕ್ಷೇತ್ರದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು ರಾಜಕಾರಣದಲ್ಲಿ ಸತ್ಯ, ಪ್ರಾಮಾಣಿಕತೆ ನಡೆಯುವುದಿಲ್ಲ. ರಮ್ಯಾ ಅವರು (ರಮ್ಮೀ) ಆಟ ತೋರಿಸಬೇಕು. ಇಲ್ಲದಿದ್ದರೆ ಎದುರಾಳಿಯನ್ನು ಮಣಿಸುವುದು ಕಷ್ಟ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಹಾಗೂ ರೈತ ಮುಖಂಡ ನಂಜುಂಡೇಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಣಸಾಲೆ ನರಸರಾಜು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications