ನಾಗಮಂಗಲದಲ್ಲಿ ಸ್ಥಿತಿ ಉದ್ವಿಗ್ನ: ಹಿಂದೂ ಫೈರ್ಬ್ರ್ಯಾಂಡ್ ಬಸನಗೌಡ್ ಯತ್ನಾಳ್ ಹೇಳಿದ್ದೇನು
ಬೆಂಗಳೂರು, ಸೆಪ್ಟಂಬರ್ 12: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ದುರದ್ದೇಶಪೂರ್ವಕವಾಗಿ ಕಲ್ಲುತೂರಾಟ ನಡೆಸಿದ್ದಾರೆ. ಇದು ಪೂರ್ವ ನಿಯೋಜಿತಕೃತ್ಯವಾಗಿದೆ. ಈಪ್ರಕರಣವನ್ನು ರಾಜ್ಯ ಸರ್ಕಾರ ತಾರ್ಕಿಕ ಅಂತ್ಯ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಫೈರ್ ಬ್ರ್ಯಾಂಡ್ ಬಿಜೆಪಿ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ನಾಗಮಂಗಲ ಪಟ್ಟಣದಲ್ಲಿ ನಡೆದ ಗಲಭೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಯತ್ನಾಳ್ ಅವರು, ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಗುರಿ ಮಾಡಿಕೊಂಡು ಮುಸ್ಲಿಂ ಯುವಕರು ಗಲಭೆ ನಡೆಸಿದ್ದಾರೆ. ಮಸೀದಿ ಮುಂದೆ ಲಾಂಗು ಹಿಡಿದ ದುಷ್ಕರ್ಮಿಗಳು ಮಸೀದಿ ಮುಂದೆ ಬೆಂಕಿ ಹಚ್ಚಿ ಮೆರವಣಿಗೆ ಹೋಗದಂತೆ ತಡೆದಿದ್ದಾರೆ. ಹಿಂದೂ ಆಚರಣೆಗೆ ಅಡ್ಡಿ ಪಡಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಐಟಿ ರಚನೆ, ಪೊಲೀಸರ ಅಮಾನತಿಗೆ ಯತ್ನಾಳ್ ಆಗ್ರಹ
ಗಲಭೆ ನಡೆಸಿದ ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಿ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಬೇಕು. ಇನ್ನೂ ಈ ಕೂಡಲೇ ಕರ್ತವ್ಯಲೋಪವೆಸಗಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಪೊಲೀಸರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ದುಷ್ಕರ್ಮಿಗಳಿಂದಲೇ ಹಾನಿಯಾದ ವೆಚ್ಚವನ್ನು ಪಡೆಯಬೇಕು. ರಾಜ್ಯ ಸರ್ಕಾರ ನೀಡಿರುವ ಎಲ್ಲ ಸವಲತ್ತುಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವಾಪಸ್ ಪಡೆಯಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಪೆಟ್ರೋಲ್ ಬಾಂಬ್ ಎಸೆದು ಕ್ರೌರ್ಯ
ಇತರರಿಗೆ ತೊಂದರೆ ಕೊಡದೆ ತೆರಳುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಕ್ರೌರ್ಯ ಮೆರೆದಿದ್ದಾರೆ. ಸ್ಥಳದಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ. ಇವರ ಅಸಹನೆ, ಜಿಹಾದಿ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಅವರು ಹೇಳಿದರು.
ಮೆರವಣಿಗೆ ಹೋಗುವ ಸ್ಥಳದಲ್ಲಿ ಭದ್ರತೆ ಕಲ್ಪಿಸಲು ವಿಫಲರಾದ ಪೊಲೀಸರು ದೋಷಿಗಳು. ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಹೋಗುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಆದರೆ ಜಿಲ್ಲಾಡಲಿತವಾಗಲಿ, ಪೊಲೀಸರಾಗಲಿ ಗಮನ ಹರಿಸದೇ ಇರುವುದು ಈ ಅಹಿಂಸೆಗೆ ಕಾರಣ.
150 ಮಂದಿ ಮೇಲೆ ಎಫ್ಐಆರ್ ದಾಖಲು: ಎಸ್ಪಿ
ಸದ್ಯ ರಾಜ್ಯದಲ್ಲಿ ನಾಗಮಂಗಲದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹಿಂದೂ, ಮುಸ್ಲಿಂ ಸೇರಿದಂತೆ ಒಟ್ಟು 150 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿಸಲಾಗಿದೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ 23 ಹಿಂದೂ ಯುವಕರು, 30 ಜನ ಮುಸ್ಲಿಂ ಯುಕವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಇನ್ನೂ 50ಕ್ಕೂ ಹೆಚ್ಚು ಮಂದಿಯ ಹೆಸರು, ವಿಳಾಸ ಸಮೇತರಾಗಿ ಎಫ್ಐಆರ್ ದಾಖಲಿಸಲಾಗಿದೆ. 52 ಮಂದಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.












Click it and Unblock the Notifications