ಕೇಂದ್ರದ ಜಿಎಸ್ಟಿ ಆಯ್ಕೆ ತಿರಸ್ಕರಿಸಿ: ರಾಜ್ಯ ಸರ್ಕಾರಕ್ಕೆ ಖರ್ಗೆ ಆಗ್ರಹ
ಬೆಂಗಳೂರು, ಆಗಸ್ಟ್ 21: ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ಜಿಎಸ್ಟಿ ಪರಿಹಾರದ ಹಣವನ್ನು ನೀಡಲಾಗುವುದಿಲ್ಲ. ಅದರ ಬದಲು ಪರಿಹಾರದ ಕೊರತೆಯ ಮೊತ್ತವನ್ನು ಆರ್ಬಿಐನಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಿ ಅಥವಾ ಆರ್ಬಿಐ ಜತೆ ಚರ್ಚಿಸಿ ರಾಜ್ಯಗಳಿಗ ವಿಶೇಷ ಸವಲತ್ತು ಒದಗಿಸುವ ಮೂಲಕ ಉತ್ತಮ ಬಡ್ಡಿ ದರದಲ್ಲಿ ಹಣ ಒದಗಿಸುವ ಆಯ್ಕೆಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Recommended Video
ಈ ಪ್ರಸ್ತಾವವನ್ನು ಅನೇಕ ರಾಜ್ಯ ಸರ್ಕಾರಗಳು ತಿರಸ್ಕರಿಸಿವೆ. ಕೇಂದ್ರದ ಈ ಸೂಚನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಕೂಡ ತಿರಸ್ಕರಿಸಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
'ಕೇಂದ್ರ ಸರ್ಕಾರವು ಜಿಎಸ್ಟಿ ಪರಿಹಾರ ಹಂಚಿಕೆ ವಿಚಾರವಾಗಿ ನೀಡಿರುವ ಎರಡು ಆಯ್ಕೆಗಳನ್ನು ಕರ್ನಾಟಕ ಕೂಡ ತಿರಸ್ಕರಿಸಬೇಕು. ಕೇಂದ್ರ ಸರ್ಕಾರದ ತಪ್ಪುಗಳಿಗೆ ರಾಜ್ಯಗಳ ಮೇಲೆ ಹೊರೆ ಹಾಕಲು ಸಾಧ್ಯವಿಲ್ಲ. ರಾಜ್ಯವು ಸಾಲ ಪಡೆದುಕೊಳ್ಳುವ ಬದಲು ಕೇಂದ್ರ ಸರ್ಕಾರವೇ ಸಾಲು ಪಡೆದುಕೊಂಡು ರಾಜ್ಯಗಳಿಗೆ ಬರಬೇಕಾದ ಪರಿಹಾರದ ಮೊತ್ತವನ್ನು ಒದಗಿಸುವಂತೆ ರಾಜ್ಯ ಸರ್ಕಾರ ಒತ್ತಾಯಿಸಲಿ ಎಂದು ಖರ್ಗೆ ಹೇಳಿದ್ದಾರೆ.

ಜಿಎಸ್ಟಿ ಚರ್ಚೆ ಆರಂಭವಾದ ಸಂದರ್ಭದಿಂದಲೇ ಅದರಲ್ಲಿನ ದೋಷರಹಿತ ಜಾರಿಯ ಕುರಿತು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಎಚ್ಚರಿಸುತ್ತಲೇ ಬಂದಿದ್ದರು. ಕೇಂದ್ರ ಸರ್ಕಾರವು ತನ್ನ ದರ್ಪವನ್ನು ಬದಿಗೊತ್ತಿ ಉದ್ಯಮ ಸಮುದಾಯಗಳ ಅಹವಾಲುಗಳನ್ನು ಆಲಿಸಬೇಕಿತ್ತು. ಈಗಿನ ವ್ಯವಸ್ಥೆಯು ಉದ್ಯಮ ಮತ್ತು ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರಗಳು ಈಗಾಗಲೇ ತೀವ್ರ ಆರ್ಥಿಕ ಒತ್ತಡದಿಂದ ಸಂಕಷ್ಟದಲ್ಲಿವೆ. ಜಿಎಸ್ಟಿ ಪರಿಹಾರದ ಪಾವತಿ ನಿರಾಕರಿಸುವುದು ರಾಜ್ಯಗಳಿಗೆ ಮತ್ತಷ್ಟು ಗಾಸಿ ಮಾಡಲಿವೆ. ಎಂದಿಗೂ ಉಂಟಾಗದ 'ದೇವರ ಆಟ'ವನ್ನು ಪ್ರತಿಪಾದಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಬದ್ಧತೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯ ಉಲ್ಲಂಘನೆ ಎಂದು ಖರ್ಗೆ ಟೀಕಿಸಿದ್ದರು.












Click it and Unblock the Notifications