ಸಿದ್ದರಾಮಯ್ಯ ಪತ್ನಿಯಂತೆ 5 ಎಕರೆ ಸೈಟ್ ಹಿಂತಿರುಗಿಸಲು ಖರ್ಗೆ ಕುಟುಂಬ ನಿರ್ಧಾರ
ಬೆಂಗಳೂರು, ಅಕ್ಟೋಬರ್ 14: ಮುಡಾ ಹಗರಣ ಆರೋಪ ತೀವ್ರಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ವಾಪಸ್ ನೀಡಿದ್ದರು. ಇದರ ಬೆನ್ನಲ್ಲೇ ಕೆಐಎಡಿಬಿ ಭೂಮಿ ಹಂಚಿಕೆಯಲ್ಲಿಯೂ ಅಕ್ರಮದ ಆರೋಪ ಕೇಳಿಬಂದಿತ್ತು. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ ಭೂಮಿ ವಾಪಸ್ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಿಎ ಸೈಟ್ ಪಡೆಯೋದಕ್ಕೆ ಅರ್ಹ ಇದ್ದೇವೆ. ಆದರೆ ಆರೋಪ ಬಂದಿರುವ ಹಿನ್ನೆಲೆ ಸಿಎ ಸೈಟ್ ವಾಪಸ್ ನೀಡಿದ್ದೇವೆ. ವೈಯಕ್ತಿಕವಾಗಿ ರಾಜಕೀಯ ಆರೋಪದಿಂದ ಬೇಸರವಾಗಿದೆ. ಸಿಎ ಸೈಟ್ ಬೇಡ ಎಂದು ರಾಹುಲ್ ಖರ್ಗೆ ಪತ್ರ ಬರೆದಿದ್ದಾರೆ. ಹೀಗಾಗಿ ಕೆಐಎಡಿಬಿಗೆ ಸೈಟ್ ವಾಪಸ್ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ತರಾತುರಿಯಲ್ಲಿ ಹಾಗೂ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪ ಇತ್ತು. ಆದರೆ ಆ ರೀತಿ ಆಗಿಲ್ಲ. ಟ್ರಸ್ಟ್ ಅಧ್ಯಕ್ಷ, ರಾಹುಲ್, ಖರ್ಗೆ ಅವರಿಗೆ ಹೆಚ್ಚು ಅರಿವು ಇರಲಿಲ್ಲ ಅನ್ಸುತ್ತೆ. ಅವರಿಗೆ ಕೇಂದ್ರದಿಂದ ಸಾಕಷ್ಟು ಅವಾರ್ಡ್ ಸಿಕ್ಕಿದೆ. ಯುಪಿಎಸ್ ಇ ನಲ್ಲೂ ರ್ಯಾಂಕ್ ಬಂದಿದ್ದರು. ಆದರೆ ಈ ವಿಚಾರದಲ್ಲಿ ಅವರಿಗೆ ಹೆಚ್ಚು ಮಾಹಿತಿ ಇರಲಿಲ್ಲ ಅನ್ಸುತ್ತೆ. ನಮ್ಮ ಕುಟುಂಬದಲ್ಲಿ ಮೂವರು ಅಷ್ಟೇ ರಾಜಕೀಯದಲ್ಲಿ ಇದ್ದೇವೆ. ಯುರೋಸ್ಪೇಸ್ ನಲ್ಲಿ ಜಾಗ ಬೇಕು ಅಂತ ಅರ್ಜಿ ಹಾಕ್ತಾರೆ, ಅದರ ಅನ್ವಯ ಅವರಿಗೆ ಸೈಟ್ ಅಲಾಟ್ ಆಗಿದೆ. ಸಂಪೂರ್ಣ ದಾಖಲೆ ಆಧಾರದ ಮೇಲೆ ಸೈಟ್ ಸಿಕ್ಕಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ಮಾನ್ಯ @kharge ಅವರ ಕುಟುಂಬದ ಸಿದ್ದಾರ್ಥ ಟ್ರಸ್ಟ್ ಗೆ ಕೆಐಎಡಿಬಿಯಿಂದ ಮಂಜೂರಾಗಿದ್ದ 5 ಎಕರೆ ಸಿಎ ನಿವೇಶನವನ್ನು ಬೇಷರತ್ ಹಿಂದಿರುಗಿಸಿರುವ ನಿಲುವು ಗಮನಿಸಿದರೆ ಅಕ್ರಮ ಮಂಜೂರಾತಿ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರುವ ಮುನ್ನ ಖರ್ಗೆ ಕುಟುಂಬ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರ ಹಾದಿಯನ್ನೇ ತುಳಿದಿರುವುದು ಸಾಬೀತಾಗುತ್ತಿದೆ.… pic.twitter.com/7g0JhPZqvJ
— Vijayendra Yediyurappa (@BYVijayendra) October 13, 2024
ನಮ್ಮ ಅಣ್ಣ ಅವರು ಮೃದು ಸ್ವಭಾವದವರು, ಅವರಿಂದ ಕುಟುಂಬದ ಸದಸ್ಯರರಿಗೆ ಹಿಂಸೆ ಆಗ್ತಿದೆ ಎಂದು ನೊಂದಿದ್ದಾರೆ. ಸೆಪ್ಟೆಂಬರ್ 20ನೇ ರಂದು ಅವರು ಕೆಐಎಡಿಬಿ ಗೆ ಪತ್ರ ಬರೆದಿದ್ದಾರೆ. ಸೈಟ್ ಕೊಟ್ಟಿರೋದನ್ನ ನಿವೇಶನ ಕಾನೂನಾತ್ಮಕ ವಾಗಿ ಮರಳಿ ನೀಡುತ್ತಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಎರಡೂ ಮೂರು ಕಾರಣ ಕೊಟ್ಟು ಸೈಟ್ ಮರಳಿ ನೀಡಿದ್ದಾರೆ. ಖಾಸಗಿ ಟ್ರಸ್ಟ್ ಅಲ್ಲ ಪಬ್ಲಿಕ್ ಟ್ರಸ್ಟ್ ಎಂದು ನಮೂದಿಸಿದ್ದಾರೆ.
ಟ್ರಸ್ಟ್ ಗೆ ಬಂದು ಹಣ ಯಾವುದೇ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎ ಸೈಟ್ ನಲ್ಲಿ ಯಾವುದೇ ರೀತಿ ರಿಯಾಯಿತಿ ಕೋಡೋದಕ್ಕೆ ಬರೋದಿಲ್ಲ. ಇದು ತರಬೇತಿಗೆ ಅಂತ ಸಿಎ ಸೈಟ್ ಇತ್ತು, ಆದರೆ ಯಾವುದೇ ಲಾಭದ ಉದ್ದೇಶ ಇರಲಿಲ್ಲ. ಆದರೆ ಬಿಜೆಪಿಯವರು ಹಲವು ರೀತಿಯ ಆರೋಪ ಮಾಡಿದರು. ವೈಯಕ್ತಿಕ ವಾಗಿ ರಾಜಕೀಯ ಆರೋಪದಿಂದ ಬೇಸರವಾಗಿದೆ, ಹೀಗಾಗಿ ಸಿಎ ಸೈಟ್ ಬೇಡ ಎಂದು ರಾಹುಲ್ ಖರ್ಗೆ ಪತ್ರ ಬರೆದಿದ್ದಾರೆ.
ಸಿಓಕೆಎಐಡಿಬಿಗೆ ಪತ್ರ ಬರೆದಿದ್ದಾರೆ, ಪತ್ರ ಸಿಎ ಸೈಟ್ ಪಡೆಯೋದಕ್ಕೆ ಅರ್ಹ ಇದ್ದೇವೆ, ಯಾವುದೇ ಅವ್ಯವಹಾರ ಅಥವಾ ಲಾಭದ ಉದ್ದೇಶದಿಂದ ನಾವು ಸಿಎ ಸೈಟ್ ಪಡೆದಿದ್ದೇವೆ ಎಂದು ಪತ್ರ ದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಿ ವೈ ವಿಜಯೇಂದ್ರ ಹೇಳಿದೇನು?
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬದ ಸಿದ್ದಾರ್ಥ ಟ್ರಸ್ಟ್ ಗೆ ಕೆಐಎಡಿಬಿಯಿಂದ ಮಂಜೂರಾಗಿದ್ದ 5 ಎಕರೆ ಸಿಎ ನಿವೇಶನವನ್ನು ಬೇಷರತ್ ಹಿಂದಿರುಗಿಸಿರುವ ನಿಲುವು ಗಮನಿಸಿದರೆ ಅಕ್ರಮ ಮಂಜೂರಾತಿ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರುವ ಮುನ್ನ ಖರ್ಗೆ ಕುಟುಂಬ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರ ಹಾದಿಯನ್ನೇ ತುಳಿದಿರುವುದು ಸಾಬೀತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳಲ್ಲಿ ಭಾಗಿಯಾದವರು ಬಿಜೆಪಿ ನಡೆಸುತ್ತಿರುವ ಹೋರಾಟಗಳಿಗೆ ಮಣಿಯುತ್ತಿರುವುದರ ನಿದರ್ಶನವೂ ಇದಾಗಿದೆ. ಕಾಂಗ್ರೆಸ್ ಸರ್ಕಾರದ ಸರಣೀ ಭ್ರಷ್ಟಚಾರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಭಾಗಿಯಾಗಿರುವ ಅನೇಕರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಕಾಲವೇ ಉತ್ತರ ಹೇಳಲಿದೆ. ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದು ಲೂಟಿಯನ್ನೇ ಗುರಿಯಾಗಿಸಿಕೊಂಡಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸುವ ವರೆಗೂ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಯಾವಾಗ?
ಪ್ರಿಯಾಂಕ್ ಖರ್ಗೆ ಅವರು KIADB ಭೂ ಹಗರಣದ ಸೈಟ್ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ MUDA ಹಗರಣದ ನಂತರ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಘಟನೆಯಾಗಿದೆ. ಇದು ನ್ಯಾಯಕ್ಕೆ ಸಿಕ್ಕ ಮತ್ತೊಂದು ಗೆಲುವು ಎಂದು ಪರಿಗಣಿಸಲಾಗಿದ್ದು, ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧದ ನಮ್ಮ ಹೋರಾಟ ಸಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಒಂದು ಕಡೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ MUDA ಹಗರಣ, ಮತ್ತೊಂದೆಡೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ KIADB ಹಗರಣ - ಈ ಎರಡೂ ಪ್ರಕರಣಗಳು ಕಾನೂನಿನ ಮುಂದೆ ತಲೆಬಾಗಿವೆ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ರಾಜೀನಾಮೆ ಯಾವಾಗ? ಎಂ ಬಿ ಪಾಟೀಲ್ ರವರೇ ಇದನ್ನು ಬೆಳಕಿಗೆ ತಂದ ನನ್ನನ್ನು ಅಪಮಾನ ಮಾಡಿದ ತಾವು ಆಗಿರುವ ಅಪರಾಧಕ್ಕೆ ತನಿಖೆ ಮಾಡಿಸಿ, ನೋಟಿಫಿಕೇಶನ್ ರದ್ದುಗೊಳಿಸಿ ಇಲ್ಲವೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಎಂದು ಕಿಡಿಕಾರಿದ್ದಾರೆ.












Click it and Unblock the Notifications