ಪ್ರತ್ಯೇಕ ರೂಮ್ನಲ್ಲಿದ್ದ ಸಂತೋಷ್ ಭೇಟಿಗೆ ಬಂದಿದ್ದ ನಾಲ್ಕನೇ ವ್ಯಕ್ತಿ ಯಾರು?
ಬೆಂಗಳೂರು, ಏ. 15: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇಬ್ಬರು ಸ್ನೇಹಿತರ ಜತೆ ಪ್ರತ್ಯೇಕವಾಗಿ ಉಡುಪಿಯ ಲಾಡ್ಜ್ನಲ್ಲಿ ತಂಗಿದ್ದ ಸಂತೋಷ್ ಅನ್ನು ಭೇಟಿ ಮಾಡಲು ಮತ್ತೊಬ್ಬ ವ್ಯಕ್ತಿ ಬಂದಿದ್ದನೇ? ಆತನ ಭೇಟಿ ಬಳಿಕ ಆತ್ಮಹತ್ಯೆ ನಡೆಯಿತಾ? ಇಲ್ಲವೇ ಬೇರೆಯದ್ದೇ ಹಿನ್ನೆಲೆಯಿಂದ ಸಂತೋಷ್ ಸಾವನ್ನಪ್ಪಿದ್ದರೇ ಎಂಬ ಅನುಮಾನ ಮೂಡಿಸಿದೆ.
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರವಾಸ ಹೋಗುವುದಾಗಿ ತನ್ನ ಇಬ್ಬರ ಸ್ನೇಹಿತರ ಜತೆ ತೆರಳಿದ್ದ. ಉಡುಪಿಗೆ ಹೋಗುವ ಮುನ್ನ ದಿನ ಚಿಕ್ಕಮಗಳೂರಿನ ಹೋಮ್ ಸ್ಟೇನಲ್ಲಿ ತಂಗಿದ್ದ ಸಂತೋಷ್ ಪಾಟೀಲ್ ಕೊಠಡಿಯಲ್ಲಿಯೇ ಸ್ನೇಹಿತರು ಜತೆಗಿದ್ದರು.
ಮರು ದಿನ ಬೆಳಗ್ಗೆ ಉಡುಪಿಗೆ ಬಂದಿದ್ದ ಸಂತೋಷ್ ಶಾಂಭವಿ ಹೋಟೆಲ್ನಲ್ಲಿ ಪ್ರತ್ಯೇಕ ಕೊಠಡಿ ಮಾಡಿಕೊಂಡಿದ್ದ. ಇಬ್ಬರು ಸ್ನೇಹಿತರೂ ಬೇರೆಯದ್ದೇ ಕೊಠಡಿಯಲ್ಲಿ ತಂಗಿದ್ದರು. ಈ ಬಗ್ಗೆ ಸಂತೋಷ್ನನ್ನು ಸ್ನೇಹಿತರು ವಿಚಾರಣೆ ನಡೆಸಿದಾಗ, ನನ್ನ ಮತ್ತೊಬ್ಬ ಸ್ನೇಹಿತ ರಾಜೇಶ್ ಎಂಬ ವ್ಯಕ್ತಿ ಬರ್ತಾನೆ. ಹೀಗಾಗಿ ನೀವು ಪ್ರತ್ಯೇಕವಾಗಿರಿ ಎಂದು ಹೇಳಿದ್ದನಂತೆ. ಹೀಗಾಗಿ ನಾಲ್ಕನೇ ವ್ಯಕ್ತಿ ಯಾರಾದ್ರೂ ಬಂದಿದ್ದರೇ ಎಂಬ ವಿಚಾರ ಉಡುಪಿ ಪೊಲೀಸರ ನಿದ್ದೆಗೆಡಿಸಿದೆ.

ಸಂತೋಷ್ ತಂಗಿದ್ದ ಶಾಂಭವಿ ಲಾಡ್ಜ್ಗೆ ಹೋಗಿ ಬಂದವರ ಜಾಡು ಹಿಡಿದು ತನಿಖಾ ತಂಡಗಳು ತನಿಖೆ ಆರಂಭಿಸಿವೆ. ಶಾಂಭವಿ ಲಾಡ್ಜ್ ಸಿಸಿಟಿವಿ ಫುಟೇಜ್ ಪರಿಶೀಲನೆ ಮಾಡುತ್ತಿದೆ. ಸಂತೋಷ್ ಜತೆ ಪ್ರತ್ಯೇಕ ಕೊಠಡಿಯಲ್ಲಿ ವಾಸವಾಗಿದ್ದ ಇಬ್ಬರು ಸ್ನೇಹಿತರ ವಿಚಾರಣೆ ಬಳಿಕ ರಾಜೇಶ್ ಎಂಬ ವ್ಯಕ್ತಿಯ ಹೆಸರು ಮುನ್ನೆಲೆಗೆ ಬಂದಿದ್ದು, ಆ ವ್ಯಕ್ತಿ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂತೋಷ್ ಆತ್ಮಹತ್ಯೆಗೂ ಮುನ್ನ ವಾಟ್ಸಪ್ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಬರೆದು ಮಾಧ್ಯಮದ ಸ್ನೇಹಿತರಿಗೆ ರವಾನಿಸಿದ್ದಾರೆ. ಅದರ ಜತೆಗೂ ಬೇರೆ ಯಾರಿಗೆ ಸಂದೇಶ ರವಾನಿಸಲಾಗಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸಂತೋಷ್ ಆತ್ಮಹತ್ಯೆ ನಂತರ ಬೇರೆ ಯಾರಾದರೂ ಸಂದರ್ಭ ಬಳಿಸಿಕೊಂಡು ಸಂದೇಶ ಕಳುಹಿಸಿದರೇ? ಇಲ್ಲವೇ ಆತ್ಮಹತ್ಯೆಗೂ ಮುನ್ನ ರವಾನಿಸಲಾಗಿದೆಯಾ? ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ. ಈಶ್ವರಪ್ಪ ರಾಜೀನಾಮೆ ನಿರ್ಧಾರದ ಬಳಿಕ ಸಂತೋಷ್ ಪಾಟೀಲ್ ಆತ್ಮಹತ್ಯೆ ತನಿಖೆ ಚುರುಕುಗೊಂಡಿದೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ರಾಜಕೀಯ ಪಿತೂರಿ ಅಡಗಿದೆಯಾ? ಸಂತೋಷ್ ಆತ್ಮಹತ್ಯೆಗೂ ಮುನ್ನ ಯಾರನ್ನು ಸಂಪರ್ಕಿಸಿದ್ದರು. ಯಾರ ಜತೆ ಮಾತುಕತೆ ಮಾಡಿದ್ದರು? ಎಂಬುದರ ವಿವರ ಪಡೆದು ಕೆಲವರನ್ನು ವಿಚಾರಣೆಗೆ ಒಳಪಡಿಸಿ ಉಡುಪಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಮಗಾರಿಗಳ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಸಂತೋಷ್ ಪಾಟೀಲ್ ನೊಂದಿದ್ದರೇ ? ಪ್ರಧಾನಿ ಮೋದಿ ಅವರಿಗೆ ದೂರು ಸಲ್ಲಿಸಿ ಧೈರ್ಯ ತೋರಿದ್ದ ಸಂತೋಷ್ ಆತ್ಮಹತ್ಯೆ ನಿರ್ಧಾರ ಮಾಡಿಕೊಂಡಿದ್ದು ಯಾಕೆ ? ಆತ್ಮಹತ್ಯೆ ಪ್ಲಾನ್ ರೂಪಿಸಲಾಗಿತ್ತೇ ಎಂಬ ಅನುಮಾನಗಳು ಮೂಡಿವೆ.

ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನಾನು ಹೊಣೆಯಲ್ಲ. ಆತ ಯಾರೋ ಗೊತ್ತಿಲ್ಲ. ನಾನು ರಾಜೀನಾಮೆ ನೀಡಲ್ಲ ಎಂದು ಹೇಳಿಕೆ ನೀಡಿದ್ದ ಕೆ.ಎಸ್. ಈಶ್ವರಪ್ಪ ನಿನ್ನೆಯಷ್ಟೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಬೃಹತ್ ಮೆರವಣಿಗೆ ಮೂಲಕ ಬೆಂಗಳೂರಿಗೆ ಆಗಮಿಸಿ ಸಿಎಂ ಬೊಮ್ಮಾಯಿಗೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಂತೋಷ್ ಪಾಟೀಲ್ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಂತೋಷ್ ಪಾಟೀಲ್ ಕೊಲೆ ಆಗಿದ್ದಲ್ಲಿ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಲಿದೆ.
ಮರಣೋತ್ತರ ವರದಿ ಮಹತ್ವ: ಇನ್ನು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಆತ ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಮಯದ ಬಗ್ಗೆ ಖಚಿತ ಪಡಿಸಿಕೊಳ್ಳಲು ಪೊಲೀಸರು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಳಿಕ ಈ ಪ್ರಕರಣ ಹೊಸ ಆಯಾಮ ಪಡೆದುಕೊಂಡರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications