ಕಾಂಗ್ರೆಸ್ ಇಲ್ಲದೇ ಮಹಾಘಟಬಂಧನ ಅಪೂರ್ಣ : ದೇವೇಗೌಡ
ಬೆಂಗಳೂರು, ಅಕ್ಟೋಬರ್ 31 : 'ಕಾಂಗ್ರೆಸ್ ಬೆಂಬಲವಿಲ್ಲದೇ ಯಾವ ಒಕ್ಕೂಟವೂ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಅಸಾಧ್ಯ. ಆದ್ದರಿಂದ, ಕಾಂಗ್ರೆಸ್ ಪಕ್ಷವಿಲ್ಲದೇ ಮಹಾಘಟಬಂಧನ ಪರಿಪೂರ್ಣ ಮತ್ತು ಪ್ರಭಾವಿಯಾಗಿ ಇರುವುದಿಲ್ಲ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಪ್ರಚಾರ ಮಾಡಿದ ಬಳಿಕ ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿದರು, 'ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲಾ ಪಕ್ಷಗಳು ಒಂದಾಗಲಿವೆ' ಎಂದರು.
'ಕರ್ನಾಟಕದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ' ಎಂದು ದೇವೇಗೌಡರು ವಿವರಿಸಿದರು.
'ಕರ್ನಾಟಕದ ಐದು ಕ್ಷೇತ್ರಗಳ ಉಪ ಚುನಾವಣೆ 5 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಜಾತ್ಯಾತೀತ ಪಕ್ಷಗಳು ಎದುರಿಸಲಿರುವ ಪರೀಕ್ಷೆ' ಎಂದು ಎಚ್.ಡಿ.ದೇವೇಗೌಡರು ಹೇಳಿದರು.

ಅರ್ಹತೆ ಬಗ್ಗೆ ಮಾತನಾಡಲಾರೆ
'ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅನುಭವ ಗಳಿಸಿಕೊಳ್ಳುತ್ತಿದ್ದಾರೆ. ಅವರ ಅರ್ಹತೆಯ ಬಗ್ಗೆ ನಾನು ಮಾತನಾಡಲಾರೆ ಪ್ರಧಾನಿಯಾಗಲು ಯಾರು ಅರ್ಹರು ಎಂಬ ಚರ್ಚೆ ರಾಹುಲ್ ಇಲ್ಲದೆ ಅಪೂರ್ಣ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ' ಎಂದು ಹೇಳಿದರು.

ಕಾಂಗ್ರೆಸ್ ಜೊತೆ ಬರಬಹುದು
'ದೇಶದಲ್ಲಿ ಮಹಾಮೈತ್ರಿಯು ಚುನಾವಣೆಗೆ ಮುನ್ನ ಮತ್ತು ನಂತರ ಎಂದು ಎರಡು ಹಂತದಲ್ಲಿ ಏರ್ಪಡಲಿದೆ. ಬಿಎಸ್ಪಿಯ ಮಾಯಾವತಿ ಈಗ ಜೆಡಿಎಸ್ ಜೊತೆ ಮಾತ್ರ ಇರಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೊತೆಗೂ ಬರುವ ಸಾಧ್ಯತೆ ಇದೆ' ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಇಲ್ಲದೆ ಅಪೂರ್ಣ
'ಕಾಂಗ್ರೆಸ್ ಇಲ್ಲದೇ ಮಹಾಘಟಬಂಧನ ಅಪೂರ್ಣ. ಕಾಂಗ್ರೆಸ್ ಬೆಂಬಲ ಇಲ್ಲದೇ ಯಾವ ಒಕ್ಕೂಟವೂ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಅಸಾಧ್ಯ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲಾ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನದ ಮೂಲಕ ಬಿಜೆಪಿ ವಿರುದ್ಧ ಒಂದಾಗಿವೆ' ಎಂದು ಹೇಳಿದರು.

ದೇಶಕ್ಕೆ ಮಾದರಿ ಚುನಾವಣೆ
'ರಾಜ್ಯದ ಐದು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ದೇಶಕ್ಕೆ ಮಾದರಿಯಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ' ಎಂದು ದೇವೇಗೌಡರು ತಿಳಿಸಿದರು.












Click it and Unblock the Notifications