ಬಿಜೆಪಿಯವರು ಗೋವಾ ಸಿಎಂ ಜತೆ ಮಾತನಾಡಲಿ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 14: ಮಹದಾಯಿ ಹಂಚಿಕೆ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ಮತ್ತೊಮ್ಮೆ ವಾಕ್ಸಮರ ಶುರುವಾಗಿದೆ. ಮುಖ್ಯಮಂತ್ರಿಗಳ ಸಭೆಗೂ ಮುನ್ನ ಮಹಾರಾಷ್ಟ್ರ ಸಿಎಂ ಫಡ್ನವೀಸ್ ರನ್ನು ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಿರುವುದಕ್ಕೆ ಸಿದ್ದರಾಮಯ್ಯ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಈ ನಡುವೆ 'ಮಹದಾಯಿ ನದಿಯಿಂದ ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ' ಎಂದು ಗೋವಾದ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಯಾರೋ ವಿರೋಧ ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ, ನ್ಯಾಯ ಮಂಡಳಿ ಸಲಹೆ ಮೇರೆಗೆ ಈ ಸಭೆ ನಡೆಯುತ್ತಿದೆ, ಸಭೆಗೆ ಮುನ್ನ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೂ ಅಲ್ಲಿ ಸರ್ವಪಕ್ಷ ಮುಖಂಡರ ಸಭೆ ನಡೆಸಿ ಎಲ್ಲರ ಸಹಕಾರ ಪಡೆದುಕೊಂಡೇ ಸಭೆಗೆ ಬರಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.[ಮಹದಾಯಿ ಬಿಕ್ಕಟ್ಟು : ಮಹಾ ಸಿಎಂ ಫಡ್ನವಿಸ್ ಮಧ್ಯಸ್ಥಿಕೆ!]

ಇದು ಮೊದಲ ಸಭೆ. ಹೀಗಾಗಿ ಯಾರು ಏನೇ ಹೇಳಿದರೂ ಸಭೆಯಲ್ಲಿ ಎಲ್ಲದರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಯವರು ಉತ್ತರಿಸಿದರು.[ಮಹದಾಯಿಗಾಗಿ ಸರ್ವಪಕ್ಷ ಸಭೆ ಕರೆದ ಸಿಎಂ ಸಿದ್ದರಾಮಯ್ಯ]
ಬಿಜೆಪಿ ನಾಯಕರ ನಡೆ ಬಗ್ಗೆ: ರಾಜ್ಯ ಬಿಜೆಪಿ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿಯವರ ಜೊತೆ ಮಾತುಕತೆ ನಡೆಸಿರುವ ಕುರಿತು ಪತ್ರಕರ್ತರು ಗಮನ ಸೆಳೆದಾಗ, ವಿವಾದ ಇರುವುದು ಗೋವಾದ ಜೊತೆಗೆ. ಹೀಗಾಗಿ ಆ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದು ಸೂಕ್ತ, ಇಷ್ಟಕ್ಕೂ ಈ ಬಗ್ಗೆ ಆರಂಭದಲ್ಲೇ ವಿವಾದ ಸೃಷ್ಟಿ ಮಾಡಲು ತಮಗೆ ಇಷ್ಟವಿಲ್ಲ, ಮಾತುಕತೆ ಫಲಪ್ರದವಾಗಲಿ ಎಂಬುದು ತಮ್ಮ ಬಯಕೆ. ಎಲ್ಲರ ಹಾರೈಕೆಯೂ ಆದೇ ಆಗಿರಬೇಕು ಎಂದರು.[ಐತಿಹಾಸಿಕ ಒಗ್ಗಟ್ಟು 'ಪರಂಪರೆ'ಯಾಗಿ ಮುಂದುವರಿಯಲಿ]
ಕಾವೇರಿ ಜಲ ವಿವಾದ ವಿಚಾರದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವರಾದ ಉಮಾಭಾರತಿ ಅವರು ಸಭೆ ಕರೆದಾಗ ತಾವು ಸರ್ವಪಕ್ಷ ಮುಖಂಡರ ಜೊತೆ ಚರ್ಚಿಸಿಯೇ ಅಲ್ಲಿಗೆ ಹೋಗಿದ್ದು, ಇಷ್ಟಕ್ಕೂ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಒಂದೇ ಅಲ್ಲ, ಬೇರೆ ಬೇರೆ ಪಕ್ಷಗಳೂ ಇವೆ ಎಂದು ಹೇಳಿದರು.
ಕಾವೇರಿ ಜಲ ವಿವಾದದ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಅಧ್ಯಯನ ನಡೆಸಲು ತಮಿಳುನಾಡಿಗೆ ಹೋಗಿದ್ದ ತಂಡಕ್ಕೆ ಅಲ್ಲಿಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಭಾವಿಸುವುದಿಲ್ಲ, ವಾಸ್ತವ ಸ್ಥಿತಿ ಅರಿಯಲು ಹೋದಾಗ ತಪ್ಪು ಮಾಹಿತಿ ನೀಡಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.[ಮಾತುಕತೆ ಮೂಲಕ ಮಹದಾಯಿ ವಿವಾದಕ್ಕೆ ತೆರೆ?]
ಕಾವೇರಿ ಜಲ ವಿವಾದ ಸಂಬಂಧ ಮುಖ್ಯ ಅರ್ಜಿ ಸುಪ್ರೀಂಕೋರ್ಟ್ನಲ್ಲಿ 18ರಂದು ವಿಚಾರಣೆಗೆ ಬರಲಿದೆ. ಈ ಸಂಬಂಧ ರಾಜ್ಯದ ಜಲ ಸಂಪನ್ಮೂಲ ಮತ್ತು ಕಾನೂನು ಇಲಾಖೆ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications