ಡಾ ರಾಜ್ ಆಶಯಕ್ಕೆ ವಿರುದ್ಧವಾಗಿ ಗೀತಾ ಜೆಡಿಎಸ್ ಅಭ್ಯರ್ಥಿ
ಶಿವಮೊಗ್ಗ, ಮಾರ್ಚ್ 4: ಜನಾನುರಾಗಿ ದಿವಂಗತ ಡಾ. ರಾಜ್ ಕುಮಾರ್ ಅವರು ರಾಜಕೀಯ ಪ್ರವೇಶವನ್ನು ತಮ್ಮ ಜೀವನುದ್ದಕ್ಕೂ ದೂರವಿಟ್ಟಿದ್ದರು. ಆದರೆ ಜೆಡಿಎಸ್ ಪಕ್ಷವು ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವತ್ತ ದೃಢ ಹೆಜ್ಜೆ ಹಾಕುತ್ತಿದೆ.
ಜಿಲ್ಲೆಯ ರಾಜಕೀಯ ಧಣಿ ಬಂಗಾರಪ್ಪ ಅವರ ಕುಡಿ, ವರನಟ ಡಾ. ರಾಜ್ ಕುಮಾರ್ ಕುಟುಂಬದ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಈ ಬಾರಿ ಶಿವಮೊಗ್ಗದ ಲೋಕಸಭಾ ಚುನಾವಣೆ ಕಣದಿಂದ ಸ್ಪರ್ಧಿಸುವುದು ಬಹುತೇಕ ಅಖೈರಾಗಿದೆ. ಇಂದು ಬೆಳಗ್ಗೆಯಿಂದ ಟಿವಿ ಮಾಧ್ಯಮಗಳು ಸಹ ಇದನ್ನು ಖಚಿತ ದನಿಯಲ್ಲಿ ಬಿತ್ತರಿಸುತ್ತಿವೆ.
ಜೆಡಿಎಸ್ ಅಧಿನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸೇರಿದಂತೆ ಅನೇಕಾನೇಕ ರಾಜಕೀಯ ನಾಯಕರು ಡಾ. ರಾಜ್ ಕುಮಾರ್ ಅವರ ಖ್ಯಾತಿಯನ್ನು ಬಳಸಿಕೊಳ್ಳಲು ಅವರನ್ನು ರಾಜಕೀಯಕ್ಕೆ ಕರೆತರಲು ಶತಾಯಗತಾಯ ಯತ್ನಿಸಿದ್ದವು. ಡಾ. ರಾಜ್ ಅವರು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅಣ್ಣಾವ್ರು ಈ ಬಾರಿ ಮನಸ್ಸು ಮಾಡಿ ಕಣಕ್ಕಿಳಿದರೆ ಅವರು ನಾಡಿನ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದ ಕಾಲವೊಂದಿತ್ತು.
ಆದರೆ ಡಾ ರಾಜ್ ಅವರು ರಾಜಕೀಯ ಅಂದರೆ ದುಃಸ್ವಪ್ನ ಕಂಡವರಂತೆ ರಾಜಕೀಯ ಪ್ರಸ್ತಾಪ ಬಂದಾಗಲೆಲ್ಲಾ ದಿವ್ಯಮೌನ ಪರಿಪಾಲಿಸುತ್ತಿದ್ದರು. ಅಷ್ಟರಮಟ್ಟಿಗೆ ಅವರು ರಾಜಕೀಯದಿಂದ ದೂರವೇ ಉಳಿದುಬಿಟ್ಟರು. ಮುಂದೆ ಅವರ ಕುಟಂಬದವರೂ ಸಹ ನೇರವಾಗಿ ರಾಜಕೀಯಕ್ಕೆ ಎಂದೂ ಎಂಟ್ರಿ ಕೊಟ್ಟವರಲ್ಲ. ಶಿವಣ್ಣ/ ರಾಘಣ್ಣ ಆದಿಯಾಗಿ ಯಾರೂ ವಿಧಾನಸೌದದತ್ತ ತಲೆಯಿಟ್ಟು ಮಲಗಲಿಲ್ಲ.
ಆದರೆ ಈಗ ದೊಡ್ಡ ಗೌಡ್ರು ದೊಡ್ಡ ಮಟ್ಟದ ಸಾಹಸಕ್ಕೆ ಕೈಹಾಕಿದ್ದು, ಡಾ. ರಾಜ್ ಅವರ ಸೊಸೆ ಯಾನೆ ಶಿವಮೊಗ್ಗದ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸುವುದು ಶತಃಸಿದ್ಧ ಎಂಬ ಮಾತುಗಳು ಕೇಳಿಬಂದಿವೆ. ರಾಜಕೀಯವಾಗಿ ಇದು ತಮ್ಮ ಕೊನೆಯ ಹೋರಾಟ ಎನ್ನುತ್ತಿರುವ ದೇವೇಗೌಡರು ಈ ಬಾರಿ ಕರ್ನಾಟಕದಿಂದ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಉಮೇದಿಗೆ ಬಿದ್ದಿದ್ದಾರೆ. [ಚುನಾವಣೆ ಸ್ಪರ್ಧಿಸಲ್ಲ ಎಂದಿದ್ದ ಗೀತಾ ಶಿವರಾಜ್]
ಹಾಗಾಗಿ, ಮೊದಲು ಬಂಗಾರಪ್ಪನವರ ಪತ್ನಿ ಶಕುಂತಲಾ ಅವರನ್ನು ಕಣಕ್ಕಿಳಿಯುವಂತೆ ವಿನಂತಿಸಿದರು. ಆದರೆ ಅವರು ರಾಜಕೀಯ ಯಜಮಾನರಿಗೇ ಸಾಕು. ನನ್ನ ಕಾಲಕ್ಕೆ ಬೇಡ ಎಂದು ನಿರಾಕರಿಸಿಬಿಟ್ಟರು. ಇದೀಗ ಅವರ ಸೊಸೆ ಗೀತಾರನ್ನು ಕಣಕ್ಕಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಮತದಾರ ಇದಕ್ಕೆ ಏನನ್ನುತ್ತಾನೆ? ಮೇ ವರೆಗೂ ಕಾದುನೋಡಬೇಕು.