ಕಾರವಾರದಲ್ಲಿ ಇಂದು ಲೋಕಾ ಬೇಟೆ; ನಿನ್ನೆದೇನಾಯ್ತು?
ಬೆಂಗಳೂರು, ಜೂನ್ 11: ಲೋಕಾಯುಕ್ತ ಪೊಲೀಸರು ತಮ್ಮ ಭರ್ಜರಿ ಬೇಟೆಯನ್ನು ಇಂದು ಹೊಸದಾಗಿ ಆರಂಭಿಸಿದ್ದಾರೆ. ನಿನ್ನೆ 7 ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟರ ವಿರುದ್ಧ ದಾಳಿ ನಡೆಸಿದ್ದಾರೆ.
ಬುಧವಾರ ಬೆಳಗ್ಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಕಡೆ ಮತ್ತು ಉಡುಪಿಯಲ್ಲಿ ಒಂದು ಮನೆಯ ಮೇಲೆ ದಾಳಿ ನಡೆದಿದೆ.

ಜಿಲ್ಲೆಯ ಏಳು ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಇಬ್ಬರು ಭ್ರಷ್ಟರನ್ನು ಬಲೆಗೆ ಕೆಡವಿದ್ದಾರೆ. ಮುಂಡಗೋಡ ಎಸಿಎಫ್ ಅಶೋಕ್ ಭಟ್ ಹಾಗೂ ಹೊನ್ನಾವರ ಪಟ್ಟಣ ಪಂಚಾಯ್ತಿ ಬಿಲ್ ಕಲೆಕ್ಟರ್ ಮಹೇಶ್ ಪಾಲೇಕರ್ ಬಲೆಗೆ ಬಿದ್ದವರು. ಲೋಕಾಯುಕ್ತ ಎಸ್ಪಿ ಸಿದ್ದೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು ನವಿಲುಗೋಣದಲ್ಲಿರುವ ಎಸಿಎಫ್ ಅಶೋಕ್ ಭಟ್ ಅವರ ನಿವಾಸ, ಕಚೇರಿ, ವಸತಿ ಗೃಹ ಹಾಗೂ ಹೊನ್ನಾವರ ಮತ್ತು ಉಡುಪಿಯಲ್ಲಿರುವ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆಹಚ್ಚಿದ್ದಾರೆ.
ಹೊನ್ನಾವರ ಪಟ್ಟಣ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಪಾಲೇಕರ್ ಅವರ ರಾಮತೀರ್ಥ ನಿವಾಸದ ಮೇಲೆ ದಾಳಿ ನಡೆಸಿ ಸಂಪಾದನೆಗಿಂತ ಹೆಚ್ಚು ಆಸ್ತಿ ಹೊಂದಿರುವ ದಾಖಲೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಮಂಗಳವಾರ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಬೆಳಗಾವಿ ಹಾಗೂ ಉಡುಪಿಯಲ್ಲಿ ಸಪ್ತ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸರಕಾರಿ ಸೇವೆಯಲ್ಲಿರುವ ಈವರೆಲ್ಲಾ ಕೋಟಿ ಕೋಟಿಗೆ ಬಾಳುತ್ತಿದ್ದಾರೆ ಎಂಬುದು ದಾಳಿಯಿಂದ ತಿಳಿದುಬಂದಿದೆ.
ಸಪ್ತ ಭ್ರಷ್ಟರ ಕೋಟಿ ಕೋಟಿ ಲೆಕ್ಕಾಚಾರ ಇಲ್ಲಿದೆ:
1 ಎಚ್ ವಿ ಚಂದ್ರಶೇಖರ್, ಮುಖ್ಯ ಆಡಳಿತಾಧಿಕಾರಿ, ಸಹಕಾರ ಇಲಾಖೆ, ಮಂಡ್ಯ
ಕೆಆರ್ ಪೇಟೆ ತಾಲೂಕಿನ ಹರಿಹರಪುರದಲ್ಲಿ ಮನೆ ಹಾಗೂ ಹಸು ಸಾಕಾಣಿಕೆ ಶೆಡ್, 32 ಮತ್ತು 23 ಗುಂಟೆ ಜಮೀನು, ಕುರನೇಹಳ್ಳಿ ಮತ್ತು ಚಿಕ್ಕೇನಹಳ್ಳಿಯಲ್ಲಿ ನಿವೇಶನ, ಕಾರು, ಬೈಕ್ ಸೇರಿ 32 ಲಕ್ಷ ರೂ
2 ಶ್ರೀಧರನಾಯ್ಕ, ಕಿರಿಯ ಇಂಜಿನಿಯರ್, ಕಾರ್ಕಳ ಪುರಸಭೆ
ಮೂಡಬಿದಿರೆಯ ಮಾರ್ಪಾಡಿ ಗ್ರಾಮದಲ್ಲಿ 0.13 ಮತ್ತು 0.5 ಸೆಂಟ್ ನಿವೇಶನ, ಪತ್ನಿ ಹೆಸರಿನಲ್ಲಿ ನಿಟ್ಟೆ ಗ್ರಾಮದಲ್ಲಿ ಮನೆ, ಪೆರ್ವಾಜೆಯಲ್ಲಿ 9.75 ಸೆಂಟ್ ನಿವೇಶನ, ಕಾರು, ಬೈಕು ಸೇರಿ 56 ಲಕ್ಷ ರೂ ಆಸ್ತಿ.
3 ಎಂಎಸ್ ರವಿಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಯೋಜನಾ ಶಾಖೆ, ಬೆಂಗಳೂರು ಉತ್ತರ ವಿಭಾಗ
ಒಟ್ಟು ಆಸ್ತಿ: 2.71 ಕೋಟಿ ರೂ. ಅಕ್ರಮ ಆಸ್ತಿ: 2.49 ಕೋಟಿ ರೂ.
ಸ್ಥಿರಾಸ್ತಿ: ಉತ್ತರಹಳ್ಳಿಯಲ್ಲಿ ನಿವೇಶನ ಮತ್ತು ಮನೆ 1 ಕೋಟಿ ರೂ, ಯಲಹಂಕದಲ್ಲಿ ವಾಣಿಜ್ಯ ಕಟ್ಟಡ 30 ಲಕ್ಷ ರೂ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡ 78.75 ಲಕ್ಷ ರೂ, ಶ್ರೀಗಂಧಕಾವಲಿನಲ್ಲಿ ನಿವೇಶನ 15 ಲಕ್ಷ ರೂ.
ಚರಾಸ್ತಿ: ನಿಸಾನ್ ಕಾರು 7 ಲಕ್ಷ ರೂ, ಎಸ್ಎಕ್ಸ್ ಕಾರು 10 ಲಕ್ಷ ರೂ, ಮಹೀಂದ್ರ ಎಕ್ಸ್ ಯುವಿ ಕಾರು 14 ಲಕ್ಷ ರೂ, ಗೃಹೋಪಯೋಗಿ ವಸ್ತುಗಳು 12 ಲಕ್ಷ ರೂ, 6.94 ಕೆಜಿ ಚಿನ್ನಾಭರಣ, 9.6 ಕೆಜಿ ಬೆಳ್ಳಿ ಹಾಗೂ 2.63 ಲಕ್ಷ ರೂ ನಗದು.
4 ಸಿ ಲಕ್ಷ್ಮೀನರಸಿಂಹಯ್ಯ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಬಿಡಿಎ, ಬೆಂಗಳೂರು
ಒಟ್ಟು ಆಸ್ತಿ: 2.19 ಕೋಟಿ ರೂ. ಆಕ್ರಮ ಆಸ್ತಿ: 1.97 ಕೋಟಿ ರೂ.
ಸ್ಥಿರಾಸ್ತಿ: ಜೆಪಿ ನಗರದಲ್ಲಿ ನಿವೇಶನ 14.13 ಲಕ್ಷ ರೂ ಹಾಗೂ ಮನೆ 70 ಲಕ್ಷ ರೂ, ಮೈಸೂರಿನಲ್ಲಿ ಮನೆ 3.26 ಲಕ್ಷ ರೂ.
ಚರಾಸ್ತಿ: 2 ಮಾರುತಿ ಸ್ವಿಫ್ಟ್ ಕಾರುಗಳು ತಲಾ 6.75 ಲಕ್ಷ ರೂ, 2 ಜೆಸಿಬಿಗಳು 19 ಲಕ್ಷ ರೂ ಹಾಗೂ 17 ಲಕ್ಷ ರೂ, ಇನ್ನೋವಾ ಕಾರು 11.80 ಲಕ್ಷ ರೂ, ಸ್ಯಾಂಟ್ರೋ ಕಾರು 4 ಲಕ್ಷ ರೂ, ಸ್ವಿಫ್ಟ್ ಕಾರು 5 ಲಕ್ಷ ರೂ, ಚಿನ್ನಾಭರಣ 39 ಲಕ್ಷ ರೂ, 14 ಕೆಜಿ ಬೆಳ್ಳಿ ವಸ್ತುಗಳು, ಗೃಹೋಪಯೋಗಿ ವಸ್ತುಗಳು 7 ಲಕ್ಷ ರೂ.
5 ಎ ನಂಜುಂಡಯ್ಯ, ಆಹಾರ ನಿರೀಕ್ಷಕರು, ಬೆಂಗಳೂರು
ಒಟ್ಟು ಆಸ್ತಿ: 1.35 ಕೋಟಿ ರೂ. ಅಕ್ರಮ ಆಸ್ತಿ: 93.08 ಲಕ್ಷ ರೂ.
ಸ್ಥಿರಾಸ್ತಿ: ಕಾಮಾಕ್ಷಿಪಾಳ್ಯದಲ್ಲಿ ಮನೆ 49.80 ಲಕ್ಷ ರೂ., ಶ್ರೀಗಂಧಕಾವಲಿನಲ್ಲಿ 3 ಅಂತಸ್ತಿನ ಮನೆ 49.48 ಲಕ್ಷ ರೂ.
ಚರಾಸ್ಥಿ: ಅಲ್ಟೋ ಕಾರು 3 ಲಕ್ಷ ರೂ, ಕ್ವಾಲಿಸ್ ವಾಹನ 5 ಲಕ್ಷ ರೂ, 500 ಗ್ರಾಂ ಚಿನ್ನ 12.50 ಲಕ್ಷ ರೂ, ಗೃಹೋಪಯೋಗಿ ವಸ್ತುಗಳು 9 ಲಕ್ಷ ರೂ.
6 ಯಲ್ಲಪ್ಪ ಆಶಪ್ಪ ತಳವಾರ, ವಲಯ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ
ಒಟ್ಟು ಆಸ್ತಿ: 1.62 ಕೋಟಿ ರೂ. ಅಕ್ರಮ ಆಸ್ತಿ: 1.34 ಕೋಟಿ
ಸ್ಥಿರಾಸ್ತಿ: ಬೈಲಹೊಂಗಲದಲ್ಲಿ ಮನೆ 48.90 ಲಕ್ಷ ರೂ, ನಿವೇಶನ 14.40 ಲಕ್ಷ ಮನೆ ರೂ.
ಚರಾಸ್ತಿ: 2 ಜೆಸಿಬಿಗಳು 18 ಲಕ್ಷ ರೂ, 20 ಲಕ್ಷ ರೂ, ಬುಲೆರೋ ವಾಹನ 6.67 ಲಕ್ಷ ರೂ, ಚಿನ್ನಾಭರಣ 14.67 ಲಕ್ಷ ರೂ, 53 ವಿಮೆ ಪಾಲಿಸಿ 31.23 ಲಕ್ಷ ರೂ.
7 ಜಿವಿ ರಾಮಚಂದ್ರ, ಚೆಸ್ಕಾಂ ಲೆಕ್ಕಾಧಿಕಾರಿ, ಮಂಡ್ಯ
ಒಟ್ಟು ಆಸ್ತಿ: 1.18 ಕೋಟಿ ರೂ. ಅಕ್ರಮ ಆಸ್ತಿ: 89.22 ಲಕ್ಷ ರೂ.
ಸ್ಥಿರಾಸ್ತಿ: ಚಾಮುಂಡೇಶ್ವರಿ ನಗರದಲ್ಲಿ ಮನೆ 80 ಲಕ್ಷ, ಮೈಸೂರು ನಗರ ಹಾಗೂ ಎಚ್ ಡಿ ಕೋಟೆಯಲ್ಲಿ ತಲಾ 10 ಲಕ್ಷ ರೂ ನಿವೇಶನಗಳು, ಮದ್ದೂರಿನಲ್ಲಿ ನಿವೇಶನ 6 ಲಕ್ಷ ರೂ.
ಚರಾಸ್ತಿ: ಗೃಹೋಪಯೋಗಿ ವಸ್ತುಗಳು 7 ಲಕ್ಷ ರೂ, ಆಭರಣ 2 ಲಕ್ಷ ರೂ.












Click it and Unblock the Notifications