ಸಿದ್ದು ಲೋಕಾಯುಕ್ತ ಕಾಯ್ದೆಗೆ ಭಾಸ್ಕರ 'ಅನುಗ್ರಹ'ವಿಲ್ಲ
ಬೆಂಗಳೂರು, ಫೆ.23: ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಲೋಕಪಾಲ್ ಕಾಯ್ದೆ ಮಾದರಿಯಲ್ಲಿ ಕರ್ನಾಟಕದಲ್ಲೂ ಹೊಸ ಲೋಕಾಯುಕ್ತ ಕಾನೂನು ಜಾರಿಯಾಗೊಳಿಸುವ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ಅನುಗ್ರಹ' ನೀಡಬೇಡಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರಲ್ಲಿ ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಇಂದು ರಾಜಭವನದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ ಕರ್ನಾಟಕ ಸರ್ಕಾರ ಮಂಡಿಸಲು ಯೋಜಿಸಿರುವ ಹೊಸ ಲೋಕಾಪಾಲ್ ಮಾದರಿ ಲೋಕಾಯುಕ್ತ ತಿದ್ದುಪಡಿ ಮಸೂದೆ ಬಗ್ಗೆ ಚರ್ಚೆ ನಡೆಸಿದರು.
ಲೋಕಪಾಲ್ ಕಾಯ್ದೆ ಮಾದರಿಯಲ್ಲಿ ಹೊಸ ಲೋಕಾಯುಕ್ತ ಕಾನೂನು ಜಾರಿಯಾಗುವುದು ಬೇಡ. ಇದಕ್ಕೆ ನೀವು ಅವಕಾಶ ನೀಡಬಾರದು, ಸಿದ್ದರಾಮಯ್ಯ ಅವರ ಹೊಸ ಕಾಯ್ದೆಯಲ್ಲಿ ಏನು ಹೊಸತನವಿಲ್ಲ. ಲೋಕಾಯುಕ್ತ ಪೊಲೀಸ್ ಬದಲು ಜಾಗೃತಿ ಪೊಲೀಸ್ ಜಾರಿಯಾಗುವುದು ಸರಿಯಿಲ್ಲ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ರಾಜ್ಯ ವಿಧಾನಮಂಡಲದಲ್ಲಿ ಉದ್ದೇಶಿತ ಲೋಕಪಾಲ್ ಮಾದರಿಯ ಹೊಸ ಲೋಕಾಯುಕ್ತ ಕಾರ್ಯ ಮಂಡನೆಗೆ ಅವಕಾಶ ನೀಡಬಾರದು ಜಾಗೃತ ಪೊಲೀಸ್ ವ್ಯವಸ್ಥೆ ಜಾರಿಯಾಗುವುದು ಬೇಕಾಗಿಲ್ಲ. ಒಂದು ವೇಳೆ ಜಾರಿಯಾದರೆ ಲಾಬಿಗೆ ಮಣಿಯಬೇಕಾಗುತ್ತದೆ. ಐಎಎಸ್ ಅಧಿಕಾರಿಗಳ ನಿಯಂತ್ರಣದಲ್ಲಿ ಪೊಲೀಸರು ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಅನಾವಶ್ಯಕ ಗೊಂದಲಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಭಾಸ್ಕರರಾವ್ ಅವರು ರಾಜ್ಯಪಾಲರಿಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. [ನ್ಯಾ. ಭಾಸ್ಕರ್ ರಾವ್ ನೂತನ ಲೋಕಾಯುಕ್ತ]

ಹೊಸ ಲೋಕಾಯುಕ್ತ ಕಾಯ್ದೆಯಲ್ಲಿ ವಿಶೇಷ ಏನಿದೆ?:
* ಮುಖ್ಯಮಂತ್ರಿ, ಅಸೆಂಬ್ಲಿ ಸ್ಪೀಕರ್, ವಿಪಕ್ಷ ನಾಯಕ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರ ನಾಮಾಂಕಿತ ಪ್ರತಿನಿಧಿ ಅವರಿಂದ ಲೋಕಾಯುಕ್ತ ನೇಮಕ.
* ಲೋಕಾಯುಕ್ತ ಸಮಿತಿಗೆ ಎಂಟು ಜನ ನೇಮಕಾತಿಯಲ್ಲಿ ಶೇ 50ರಷ್ಟು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಹಾಗೂ ಮಹಿಳಾ ಮೀಸಲಾತಿ ಇರಬೇಕು.
* ಲೋಕಾಯುಕ್ತ +ಎಂಟು ಜನರ ಸಮಿತಿಯಲ್ಲಿರುವ ಸದಸ್ಯರಿಗೆ ಕಾನೂನಿನ ಹಿನ್ನೆಲೆ, ಅನುಭವ, ಮೀಸಲಾತಿ ಪರಿಚ್ಛೇದಗಳ ಸಂಪೂರ್ಣ ಅರಿವಿರಬೇಕು.
* ಲೋಕಾಯುಕ್ತ ತಂಡವು ಸಚಿವ, ಸಂಸದ ಹಾಗೂ ಎಲ್ಲಾ ಸರ್ಕಾರಿ ಅಧಿಕಾರಗಳ ವಿರುದ್ಧದ ಆರೋಪ ಅರ್ಜಿಗಳನ್ನು ಪಡೆಯುವ ಅಧಿಕಾರ ಹೊಂದಿದೆ.
* ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದರೆ ಲೋಕಾಯುಕ್ತ ತಂಡವು in-camera preliminary inquiryಗೆ ಒಳಪಡಿಸಬಹುದಾಗಿದೆ.
*ವಿದೇಶಗಳಿಂದ 10 ಲಕ್ಷ ರು.ಗಿಂತ ಅಧಿಕ ದೇಣಿಗೆ ಪಡೆಯುತ್ತಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳು(NGOs) ಕೂಡಾ ಲೋಕಾಯುಕ್ತ ಕಾಯ್ದೆಗೆ ಒಳಪಡಲಿದ್ದಾರೆ.
ಅಂದಹಾಗೆ, ರಾಜ್ಯ ಸರ್ಕಾರದ ಹೊಸ ಲೋಕಾಯುಕ್ತ ಕಾಯ್ದೆ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಕ್ರಮವೇ? ಸಾಧ್ಯವೇ ಇಲ್ಲ. ಅವರು ಕೇವಲ ಗುಮಾಸ್ತರ ಕೆಲಸ ನಿರ್ವಹಿಸುತ್ತಿದ್ದು, ಕಳೆದ ವರ್ಷ ಯುಪಿಎ ಸರ್ಕಾರ ಲೋಕಪಾಲ ಮಸೂದೆ ಮಂಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧಿಕಾರವಿರುವ ಎಲ್ಲಾ ರಾಜ್ಯಗಳಲ್ಲೂ ಲೋಕಪಾಲ ಮಾದರಿ ಕಾಯ್ದೆ ಜಾರಿಗೊಳಿಸುವಂತೆ ಎಐಸಿಸಿ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಚುನಾವಣೆ ಮುಂದಿಟ್ಟುಕೊಂಡು 'ಸಕಾಲಿಕ' ವಾಗಿ ಸಿದ್ದರಾಮಯ್ಯ ಅವರು ಈಗ ಹೊಸ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದಾರೆ ಅಷ್ಟೇ.
ಮುಖ್ಯಮಂತ್ರಿ ಹಾಗೂ ಸಚಿವರು, ಶಾಸಕರ ವಿರುದ್ಧ ದೂರು ಸ್ವೀಕೃತಿ, ತನಿಖೆ ಎಲ್ಲವೂ ಈಗಾಗಲೇ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿದೆ. ಆದರೆ, ಎಲ್ಲಕ್ಕೂ ಸ್ಪೀಕರ್ ಹಾಗೂ ರಾಜ್ಯಪಾಲರ ಅನುಮತಿ ಅಗತ್ಯವಿದೆ. ಹೊಸ ಕಾಯ್ದೆಯಲ್ಲಿ 9 ಮಂದಿ ಸದಸ್ಯರ ನಿರ್ಣಯವೂ ಮುಂದಿನ ಕ್ರಮವನ್ನು ನಿರ್ದೇಶಿಸಲಿದೆ.












Click it and Unblock the Notifications