ಲೋಕಸಭಾ ಚುನಾವಣೆ : ಹಲವು ಕಾರ್ಯಕ್ರಮ ಘೋಷಿಸಿದ ಕರ್ನಾಟಕ ಬಿಜೆಪಿ
ಬೆಂಗಳೂರು, ಫೆಬ್ರವರಿ 19 : ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ. ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬ ಗುರಿಯನ್ನು ಬಿಜೆಪಿ ಹೊಂದಿದೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. 'ಮೋದಿ ವಿಜಯ ಸಂಕಲ್ಪ ಯಾತ್ರೆ' ಎಂಬ ಕಾರ್ಯಕ್ರಮವನ್ನು ಬಿಜೆಪಿ ಆಯೋಜನೆ ಮಾಡಿದೆ.
ಬೈಕ್ ಜಾಥಾ, ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ, ನಮ್ಮ ಪರಿವಾರ ಬಿಜೆಪಿ ಪರಿವಾರ ಮುಂತಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1000 ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾರ್ಚ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು ಕಲಬುರಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ರಾಜ್ಯದಲ್ಲಿ ಮೋದಿ ನಡೆಸುತ್ತಿರುವ 2ನೇ ಚುನಾವಣಾ ಪ್ರಚಾರದ ಸಮಾವೇಶವಾಗಿದೆ...

ಮೋದಿ ವಿಜಯ ಸಂಕಲ್ಪ ಯಾತ್ರೆ
'ಮೋದಿ ವಿಜಯ ಸಂಕಲ್ಪ ಯಾತ್ರೆ' ಎಂಬ ಕಾರ್ಯಕ್ರಮವನ್ನು ಬಿಜೆಪಿ ಆಯೋಜನೆ ಮಾಡಿದೆ. ಫೆ.21ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದೇವನಹಳ್ಳಿಯಲ್ಲಿ ಯಾತ್ರೆ ಉದ್ಘಾಟನೆ ಮಾಡಲಿದ್ದಾರೆ. ಮಾರ್ಚ್ 19ರ ತನಕ ಈ ಯಾತ್ರೆ ನಡೆಯಲಿದೆ. ಎಲ್ಲಾ ಜಿಲ್ಲೆ ಮತ್ತು ಪ್ರಮುಖ ಪಟ್ಟಣಗಳಲ್ಲಿ ಈ ಯಾತ್ರೆ ಸಾಗಲಿದೆ.

ಕಾರ್ಯಕರ್ತರ ಬೈಕ್ ಜಾಥಾ
ಬಿಜೆಪಿಯ ಕಾರ್ಯಕರ್ತರಿಂದ ಬೈಕ್ ಜಾಥಾವನ್ನು ಆಯೋಜನೆ ಮಾಡಲಾಗಿದೆ. ಮಾರ್ಚ್ 2ರಂದು ಈ ಯಾತ್ರೆಗೆ ಚಾಲನೆ ಸಿಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ಗೆ ಪಕ್ಷದ ಧ್ವಜವನ್ನು ಕಟ್ಟಿಕೊಂಡು ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ 150 ಕಿ.ಮೀ. ಮತ್ತು ಪಟ್ಟಣ ಪ್ರದೇಶದಲ್ಲಿ 30 ರಿಂದ 60 ಕಿ.ಮೀ. ತನಕ ಜಾಥಾ ನಡೆಸಲಿದ್ದಾರೆ. 224 ಕ್ಷೇತ್ರದಲ್ಲಿ ಕನಿಷ್ಠ 1000 ಬೈಕ್ಗಳು ಜಾಥಾದಲ್ಲಿ ಪಾಲ್ಗೊಳ್ಳಲಿವೆ.

ಪ್ರಧಾನಿ ಸಂಘಟನಾ ಸಂವಾದ
ಪ್ರಧಾನಿ ನರೇಂದ್ರ ಮೋದಿ ಅವರು ಫೆ.28ರಂದು ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಂಘಟನಾ ಸಂವಾದ ನಡೆಸಲಿದ್ದಾರೆ. ರಾಜ್ಯದ 224 ಕ್ಷೇತ್ರದ 1000 ಕಾರ್ಯಕರ್ತರು ಸೇರಿ ಒಟ್ಟು 2.50 ಲಕ್ಷ ಕಾರ್ಯಕರ್ತರೊಂದಿಗೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ.

ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ
ಫೆ.26ರಂದು ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಕಾಗೂ ಕಾರ್ಯಕರ್ತರು ಪ್ರತಿ ಬೂತ್ನಲ್ಲಿ ಒಂದೇ ಕಡೆ ಸೇರಿ ದೀಪೋತ್ಸವ ಆಚರಿಸಲಿದ್ದಾರೆ. ಈ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದ್ದು, 8 ಲಕ್ಷ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

75 ಲಕ್ಷ ಮನೆಗಳನ್ನು ತಲುಪುವುದು
ನನ್ನ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮದಡಿ ಫೆ.24ರಿಂದ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ತನಕ ಮನೆಗಳಿಗೆ ಭೇಟಿ ನೀಡಲಾಗುತ್ತದೆ. ಮನೆಯ ಬಾಗಿಲಿಗೆ ಸ್ಟಿಕ್ಕರ್ಗಳನ್ನು ಅಂಟಿಸಲಾಗುತ್ತದೆ. ಸುಮಾರು 75 ಲಕ್ಷ ಮನೆಗಳನ್ನು ತಲುಪಲು ಯೋಜನೆ ರೂಪಿಸಲಾಗಿದೆ.












Click it and Unblock the Notifications