ಯಡಿಯೂರಪ್ಪ ಜೊತೆಗೂಡಿ ಪ್ರಲ್ಹಾದ್ ಜೋಶಿ ಭರ್ಜರಿ ರಣತಂತ್ರ!
ಕರ್ನಾಟಕ ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಈಗಾಗಲೇ ಮೊದಲ ಹಂತದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ 2024ರ ಲೋಕಸಭೆ ಚುನಾವಣೆಗೆ ಮತದಾನ ನಡೆದಿದೆ. ಇದೀಗ 2ನೇ ಹಂತದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಮಧ್ಯ ಕರ್ನಾಟಕ ಭಾಗದ ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಈಗ ಬಿಜೆಪಿ ನಾಯಕರು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರಲ್ಹಾದ್ ಜೋಶಿ ಪರವಾಗಿ ಭರ್ಜರಿ ರಣತಂತ್ರ ಹೆಣೆದಿದ್ದಾರೆ.
ಹೌದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ದೊಡ್ಡ ದೊಡ್ಡ ನಾಯಕರೇ ರಣತಂತ್ರ ಹೆಣೆಯುತ್ತಿದ್ದಾರೆ. ಯಾಕಂದ್ರೆ ಇಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಸತತ ಗೆಲುವಿನ ಮೂಲಕ ದಾಖಲೆ ಸೃಷ್ಟಿಸಿ ಮುನ್ನುಗ್ಗುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ, ಮಾಜಿ ಸಿಎಂ ಯಡಿಯೂರಪ್ಪ ಅವರು ಸಾಥ್ ನೀಡಿದ್ದಾರೆ. ಈ ಮೂಲಕ ಲಿಂಗಾಯತ ಸಮುದಾಯದ ಮತಗಳೇ ಹೆಚ್ಚಾಗಿ ಇರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ರಣತಂತ್ರ ಹೆಣೆಯಲು ಇಬ್ಬರೂ ನಾಯಕರು ಕೈಜೋಡಿಸಿದ್ದಾರೆ.

ಬಿಎಸ್ವೈ ಭರ್ಜರಿ ರೋಡ್ ಶೋ!
ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನವಲಗುಂದದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಪರ ಬೃಹತ್ ರೋಡ್ ಶೋ ನಡೆಸಿದರು. ವಿಧಾನಸಭೆ ಕ್ಷೇತ್ರವಾದ, ನವಲಗುಂದ ಪಟ್ಟಣದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಕೇಸರಿ ಧ್ವಜ ರಾರಾಜಿಸಿತು. ಪಕ್ಷದ ಅಸಂಖ್ಯಾತ ಕಾರ್ಯಕರ್ತರು ಸೇರಿದಂತೆ ಮುಖಂಡರು, ಅಭಿಮಾನಿಗಳು ಒಗ್ಗಟ್ಟನಿಂದ ರೋಡ್ ಶೋಗೆ ಮೆರಗನ್ನು ತಂದರು. ಇನ್ನು ಇದೇ ವೇಳೆ ಬಿಜೆಪಿ ನಾಯಕರ ಕಟೌಟ್, ಬ್ಯಾನರ್, ಬಾವುಟಗಳ ಜೊತೆಗೆ ಬಿಎಸ್ವೈ ನೇತೃತ್ವದಲ್ಲಿ ಭರ್ಜರಿ ರ್ಯಾಲಿ ನಡೆಸಲಾಯಿತು ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದರು.

'ಪ್ರಧಾನಿ ಮೋದಿ ಅವರ ಕೈ ಬಲಪಡಿಸಿ'
ಪ್ರಲ್ಹಾದ್ ಜೋಶಿ ಅವರ ಪರವಾಗಿ ಮತಯಾಚನೆ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಪ್ರಲ್ಹಾದ ಜೋಶಿ ಅವರನ್ನ ಈ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದರು. ಇಂದು ಭಾರತ ಜಗತ್ತಿನ ಕೇಂದ್ರ ಬಿಂದುವಾಗಿದೆ. ವಿಶ್ವವೇ ಪ್ರಧಾನಿ ಮೋದಿ ಅವರ ನಾಯಕತ್ವ ಕೊಂಡಾಡುತ್ತಿದ್ದು, ದೇಶವನ್ನ ಅತ್ಯುನ್ನತ ಶ್ರೇಣಿಗೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಇದಕ್ಕಾಗಿ ಮೋದಿ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದರು. ಬೃಹತ್ ರೋಡ್ ಶೋ ಸಮಯದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದರು.












Click it and Unblock the Notifications