Lok Sabha Election 2024: ಮಂಡ್ಯದಲ್ಲಿ ರಾಜಕೀಯ ಕುಸ್ತಿಗೆ ಸಜ್ಜಾಗುತ್ತಿದೆಯಾ 'ಲೋಕ' ಅಖಾಡ?

ಮಂಡ್ಯ, ನವೆಂಬರ್‌ 24: ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಅಂತಹದ್ದೇ ರಾಜಕೀಯ ಸಮರ ನಡೆಯುತ್ತಾ? ಎಂಬ ಕುತೂಹಲ ಇದೀಗ ಕಾಡಲಾರಂಭಿಸಿದೆ. ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಒಮ್ಮತಕ್ಕೆ ಬಂದು ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಾರೆ? ಎಂಬುದರ ಮೇಲೆ ಮುಂದಿನ ರಾಜಕೀಯ ಆಟ ಶುರುವಾಗಲಿದೆ.

ಮಂಡ್ಯ ಚುನಾವಣೆಯೇ ಹಾಗೆ. ಅದು ಎಲ್ಲ ಕಡೆ ನಡೆಯುವ ಚುನಾವಣೆಗಿಂತ ಭಿನ್ನವಾಗಿರುತ್ತದೆ. ಕೊನೆಗಳಿಗೆಯಲ್ಲಿ ಆಗಬಹುದಾದ ಬದಲಾವಣೆಗಳು ಇಡೀ ಚುನಾವಣೆಯ ದಿಕ್ಕನ್ನು ಬದಲಾಯಿಸಿ ಬಿಡುತ್ತದೆ. ಇಲ್ಲಿ ರೈತರ ಹೆಸರಿನಲ್ಲಿ ಚುನಾವಣೆಗೆ ಹೋಗುವ ರಾಜಕೀಯ ನಾಯಕರು ರೈತರನ್ನು ಸೆಳೆಯಲು ಬೇಕಾದ ತಂತ್ರಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ರೈತ ನಾಯಕರ ನಡುವೆ ಸಿನಿಮಾ ನಾಯಕ, ನಾಯಕಿಯರು ಜನನಾಯಕರಾಗಿ ಹೊರಹೊಮ್ಮುವುದು ಅಚ್ಚರಿಯಾಗಿದೆ.

Lok Sabha Election 2024: Preparation Starts At Mandya

ರಾಜಕೀಯ ಇತಿಹಾಸವನ್ನು ನೋಡಿದರೆ ಸಿನಿಮಾ ನಾಯಕ, ನಾಯಕಿಯರು ಇಲ್ಲಿ ಸ್ಪರ್ಧಿಸಿ ರಾಜಕೀಯವಾಗಿ ಬದುಕು ಕಟ್ಟಿಕೊಂಡಿರುವ ನಿದರ್ಶನಗಳು ಬಹಳಷ್ಟು ಇವೆ. ಈ ಬಾರಿಯೂ ಅಂತಹದೊಂದು ಸ್ಟಾರ್ ವಾರ್‌ಗೆ ಮಂಡ್ಯ ಲೋಕ ಸಭಾ ಕ್ಷೇತ್ರ ಅಖಾಡವಾಗುತ್ತಾ? ಎಂಬ ವಿಚಾರಗಳು ರಾಜಕೀಯ ಪಡಸಾಲೆಯಲ್ಲಿ ಬಹು ಚರ್ಚೆಗೆ ಎಡೆಮಾಡಿಕೊಟ್ಟಿವೆ.

ಕಳೆದ 2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಮೌನವಾಗಿದ್ದ ದಳಪತಿಗಳು ಬಿಜೆಪಿಯೊಂದಿಗಿನ ಮೈತ್ರಿ ಮಾತುಕತೆ ಬಳಿಕ ದಾಳ ಉರುಳಿಸಲು ಆರಂಭಿಸಿರುವುದನ್ನು ನೋಡಿದರೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಟವೆಲ್ ಹಾಕಿ ಸೀಟು ಖಾತರಿ ಮಾಡಿಕೊಳ್ಳುವುದಕ್ಕೆ ಮುಂದಾಗಿರುವುದು ಖಚಿತವಾಗುತ್ತಿದೆ.

ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಇರಾದೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ಗೆ ರಾಜಕೀಯದಿಂದ ದೂರವಿರಲು ಹೇಳಿದ್ದೇನೆ ಎನ್ನುವಂತಹ ಹೇಳಿಕೆಗಳನ್ನು ನೀಡಿದರೂ ಕೂಡ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿಸಬೇಕೆನ್ನುವ ಮನದಾಸೆಯಂತು ಇದ್ದೇ ಇದೆ. ಆದರೆ ಅದು ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸಾಧ್ಯವಾಗಲಿಲ್ಲ ಎನ್ನುವುದು ಬೇರೆ ಮಾತು. ಈ ಬಾರಿ ಮತ್ತೆ ಪ್ರಯತ್ನ ಮುಂದುವರೆಸಿದರೂ ಅಚ್ಚರಿ ಪಡಬೇಕಾಗಿಲ್ಲ.

Lok Sabha Election 2024: Preparation Starts At Mandya

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆಗೆ ಹೋಗುತ್ತಿರುವುದರಿಂದ ಗೆಲುವಿಗೆ ಪೂರಕ ವಾತಾವರಣವಿದೆ ಎನ್ನುವುದು ದಳಪತಿಗಳ ಲೆಕ್ಕಾಚಾರವಾಗಿದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಿಖಿಲ್ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂಬುದು ಕುಮಾರಸ್ವಾಮಿಯಾದಿಯಾಗಿ ಜೆಡಿಎಸ್ ಮುಖಂಡರ ಆಲೋಚನೆಯಾಗಿದೆ.

ಸ್ಪರ್ಧಿಸುವಂತೆ ಒತ್ತಡ ತರಲಿರುವ ದಳಪತಿಗಳು

ದಳಪತಿಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ದಿನದವರೆಗೂ ಲೋಕಸಭಾ ಚುನಾವಣಾ ಅಭ್ಯರ್ಥಿ ಬಗ್ಗೆ ಜೆಡಿಎಸ್ ಮುಖಂಡರು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರಲಿಲ್ಲ. ಕಾಂಗ್ರೆಸ್ ಕೂಡ ಆ ಬಗ್ಗೆ ಮಾತನಾಡಿರಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ನೀಡಿದ ಕಾರಣದಿಂದ ಮುಂದಿನ ಚುನಾವಣೆಗೂ ಅವರೇ ಅಭ್ಯರ್ಥಿ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದರು.

ಇದೀಗ ಜಿಲ್ಲೆಯ ಜೆಡಿಎಸ್ ನ ಮಾಜಿ, ಹಾಲಿ ಶಾಸಕರು ಸೇರಿದಂತೆ ಒಂದಷ್ಟು ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನಮ್ಮದು ಎಂಬ ಹೇಳಿಕೆಯನ್ನು ನೀಡುತ್ತಿರುವುದು ಮಾತ್ರವಲ್ಲದೆ, ಸ್ಪರ್ಧೆ ಮಾಡಲೇ ಬೇಕೆಂಬ ಒತ್ತಡವನ್ನು ಹಾಕುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ನ್ನು ಸ್ಪರ್ಧಿಸುವಂತೆ ನಾನು ಹೇಳಿರಲಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಯಕ್ಕಾಗಿ ಸ್ಪರ್ಧೆ ಮಾಡುವಂತಾಯಿತು ಎಂದು ಹೇಳಿದ್ದರು.

ಕಾದುನೋಡುವ ತಂತ್ರದಲ್ಲಿ ಸುಮಲತಾ ಅಂಬರೀಶ್

ಈ ಬಾರಿಯೂ ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಒತ್ತಡದಕ್ಕೆ ಮಣಿದು ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಹಠಕ್ಕೆ ಬಿದ್ದರೆ ಆಗ ನಡೆಯಲಿರುವ ರಾಜಕೀಯದ ಆಟ ಇಡೀ ದೇಶ ಇತ್ತ ನೋಡುವಂತೆ ಮಾಡಿದರೂ ಅಚ್ಚರಿಯಿಲ್ಲ. ಮಂಡ್ಯದಲ್ಲಿ ತಳಮಟ್ಟದಿಂದ ಜೆಡಿಎಸ್ ಗಟ್ಟಿಯಾಗಿದೆ. ಹೀಗಾಗಿ ಬಿಜೆಪಿ ನಾಯಕರು ದಳಪತಿಗಳ ಒತ್ತಡಕ್ಕೆ ಮಣಿಯಲೇ ಬೇಕಾಗುತ್ತದೆ. ಆಗ ಏನಾಗಬಹುದೋ ಗೊತ್ತಿಲ್ಲ.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕುರಿತಂತೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಟೀಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಜತೆಗೆ ಬಿಜೆಪಿ ನಾಯಕರು ಒಂದಷ್ಟು ಮಾತುಗಳನ್ನಾಡುತ್ತಿದ್ದಾರೆ. ಅಧಿಕೃತವಾಗಿ ಯಾವುದೂ ಅಂತಿಮವಾಗಿಲ್ಲ. ಹೀಗಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ಯಾವುದೇ ಹೇಳಿಕೆಗಳನ್ನು ನೀಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬೆಳವಣಿಗೆಗಳು ಮೇಲ್ನೋಟಕ್ಕೆ ಕಾಣಿಸದೆ ಇದ್ದರೂ ಪಕ್ಷಗಳ ಆಂತರಿಕ ಮಟ್ಟದಲ್ಲಿ ಚಟುವಟಿಕೆ ಶುರುವಾಗಿದೆ.

ರಾಜಕೀಯ ಆಟ ಶುರುವಾಗುವುದು ಯಾವಾಗ..?

ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಎದುರಿಸಿದ್ದ ಸುಮಲತಾ ಅಂಬರೀಶ್ ಅವರು ಈ ಬಾರಿ ಜೆಡಿಎಸ್ -ಬಿಜೆಪಿ ಮೈತ್ರಿಯನ್ನು ಎದುರಿಸಬೇಕಾದ ಅನಿವಾರ್ಯತೆ ಬರುತ್ತಾ..? ಗೊತ್ತಿಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಈ ಬಾರಿ ಯಾವುದೇ ಪಕ್ಷದ ಬೆಂಬಲವಿಲ್ಲದೆ ಪಕ್ಷೇತರರಾಗಿ ಗೆಲುವು ಸಾಧಿಸುವುದು ಸುಲಭವಾಗಿ ಉಳಿದಿಲ್ಲ. ಅವರು ಕಳೆದ ಐದು ವರ್ಷಗಳಲ್ಲಿ ರಾಜಕೀಯವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ದಳಪತಿಗಳು ಈಗ ಏನೇ ಹೇಳಿದರೂ ಅಂತಿಮ ನಿರ್ಧಾರದವರೆಗೆ ನಾವೆಲ್ಲರೂ ಕಾಯಲೇಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+