ಲಾಕ್ಡೌನ್; ಲಾಠಿ ಹಿಡಿದ ಪೊಲೀಸರ ವಿರುದ್ಧ ಆಕ್ರೋಶ
ಬೆಂಗಳೂರು, ಮೇ 10; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್ಡೌನ್ ಜಾರಿಗೆ ಬಂದಿದೆ. ಸೋಮವಾರದಿಂದ ಮೇ 24ರ ತನಕ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಕಠಿಣ ನಿಯಮಗಳನ್ನು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದೆ. ಪೊಲೀಸರು ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಲಾಠಿ ಹಿಡಿದು ನಿಂತಿದ್ದಾರೆ. ವಾಹನ ಸವಾರರ ಮೇಲೆ ಲಾಠಿ ಬೀಸುತ್ತಿದ್ದಾರೆ.
ಅನಗತ್ಯವಾಗಿ ಸಂಚಾರ ನಡೆಸುವ ಜನರ ಮೇಲೆ ನಿರ್ದಯವಾಗಿ ಲಾಠಿ ಬೀಸುತ್ತಿದ್ದಾರೆ. ಕರ್ನಾಟಕ ಪೊಲೀಸರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮನುಷ್ಯತ್ವವನ್ನು ಮರೆತು ಜನರ ಮೇಲೆ ದಬ್ಬಾಳಿಕೆ ನಡೆಸುವ ಪೊಲೀಸರ ವಿರುದ್ಧ ಅಸಮಾಧಾನವನ್ನು ಜನರು ಹೊರಹಾಕಿದ್ದಾರೆ.
ಜನರು ಮನೆಯಲ್ಲೇ ಇದ್ದು ಲಾಕ್ಡೌನ್ ನಿಯಮಗಳನ್ನು ಪಾಲನೆ ಮಾಡಬೇಕು. ಆದರೆ, ತುರ್ತು ಕೆಲಸದ ಮೇಲೆ ಹೊರಗೆ ಬಂದ ಜನರ ಮೇಲೆಯೂ ಲಾಠಿ ಬೀಸಲಾಗುತ್ತಿದೆ. ಇದರಿಂದಾಗಿ ಪೊಲೀಸರ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಹಲವಾರು ರಾಜಕೀಯ ನಾಯಕರು ಲಾಠಿ ಬಿಡಿ ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.
|
ನಾವು ಸೂಚಿಸಿದ ಲಾಕ್ಡೌನ್ ಇದಾಗಿರಲಿಲ್ಲ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು ಎಂದು ಹೇಳಿದ್ದಾರೆ.
|
ಕ್ರಮ ತೆಗೆದುಕೊಳ್ಳಬೇಕು
"ಹಾದಿ ಬೀದಿಯಲ್ಲಿ ಕಂಡ ಕಂಡವರ ಮೇಲೆ ಪೊಲೀಸರು ಮಾತಿಗೂ ಆಸ್ಪದ ನೀಡದೆ ಏಕಾಏಕಿ ಲಾಠಿ ಬೀಸಿ ಹಲ್ಲೆ ಮಾಡುತ್ತಿರುವುದು ಹಾಗೂ ವ್ಯಾಪಾರಿಗಳ ಸರಕುಗಳನ್ನು ನಾಶ ಮಾಡುತ್ತಿರುವುದು ನಿಜಕ್ಕೂ ಅಮಾನವೀಯ" ಎಂದು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
|
ಗೃಹ ಸಚಿವರಿಗೆ ಪ್ರಶ್ನೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು, "ಯಾವ ಕಾನೂನಿನಲ್ಲಿ ಮುಗ್ಧ ಸಾರ್ವಜನಿಕರಿಗೆ ಮನಸೋಇಚ್ಛೆ ಲಾಠಿಯಿಂದ ಹೊಡೆಯಲು ಪೊಲೀಸರಿಗೆ ಅಧಿಕಾರ ಇದೆ ಎಂಬುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೊದಲು ಸ್ಪಷ್ಟಪಡಿಸಲಿ" ಎಂದು ಟ್ವೀಟ್ ಮಾಡಿದ್ದಾರೆ.
|
ಪೊಲೀಸರು, ಜನರ ಸಂಘರ್ಷ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, "ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯ ಆಗಿರುವುದು ನಿಜ. ಜಿಲ್ಲಾಧಿಕಾರಿಗಳಿಂದ ವಾಸ್ತವ ಸ್ಥಿತಿಯ ವರದಿ ಪಡೆಯಬೇಕಾಗಿತ್ತು. ಇದರಿಂದ ಪೊಲೀಸರು ಮತ್ತು ಜನತೆಯ ನಡುವಿನ ಸಂಘರ್ಷವನ್ನು ತಪ್ಪಿಸಿದಂತಾಗುತ್ತಿತ್ತು" ಎಂದು ಟ್ವೀಟ್ ಮಾಡಿದ್ದಾರೆ.
Recommended Video
|
ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ
"ರಸ್ತೆಗಳಲ್ಲಿ ಜನರ ಮೇಲೆ ನಿರ್ದಾಕ್ಷಣ್ಯವಾಗಿ ಮಾತನ್ನು ಸಂಪೂರ್ಣವಾಗಿ ಕೇಳದೆ ಏಕಾಏಕಿ ಲಾಠಿ ಬೀಸುತ್ತಿರುವುದು ನಿಜಕ್ಕೂ ಅಮಾನವೀಯ, ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ" ಎಂದು ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.












Click it and Unblock the Notifications