ಲಾಕ್ ಡೌನ್; ಮದ್ಯ ಪ್ರಿಯರಿಗಾಗಿಯೇ ಈ ಸುದ್ದಿ !
ಬೆಂಗಳೂರು, ಏಪ್ರಿಲ್ 03 : ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಲಭ್ಯವಿಲ್ಲ. ಲಾಕ್ ಡೌನ್ ಜಾರಿಗೆ ಬಂದು 9 ದಿನಗಳು ಕಳೆದಿವೆ. ಏಪ್ರಿಲ್ 14ರ ತನಕ ಜಾರಿಯಲ್ಲಿ ಇರುತ್ತದೆ.
ಲಾಕ್ ಡೌನ್ ಜಾರಿಗೊಂಡ ಬಳಿಕ ಮದ್ಯ ಪ್ರಿಯರು ನಿರಾಶರಾಗಿದ್ದಾರೆ. ಯಾವ ಬಾರ್, ವೈನ್ ಸ್ಟೋರ್ ಬಾಗಿಲಿ ತೆರೆದಿಲ್ಲ. ಆದರೆ, ಮದ್ಯ ಪ್ರಿಯರಿಗೆ ಕಿಕ್ ಏರಿಸುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಏಪ್ರಿಲ್ ತಿಂಗಳು ಬೇರೆ ಮೂರ್ಖರನ್ನು ಮಾಡುವ ಮೆಸೇಜ್ಗಳಿಗೆ ಕೊರತೆ ಇಲ್ಲ.
ಏಪ್ರಿಲ್ 1ರಂದು ಎಂಎಸ್ಐಎಲ್ ಮದ್ಯದ ಮಳಿಗೆ ತೆರೆದಿರುತ್ತದೆ ಎಂಬ ಸುದ್ದಿ ವೈರಲ್ ಆಗಿತ್ತು. ಜನರು ಮಳಿಗೆ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಿನಿಂದ ನಿಂತಿದ್ದ ವರದಿಗಳು ಹಲವಾರು ಜಿಲ್ಲೆಗಳಿಂದ ಬಂದಿತ್ತು. ಆದರೆ, ಬಿಸಿಲಿನಲ್ಲಿ ನಿಂತು ಗಂಟಲು ಒಣಗಿತೇ ವಿನಃ ಬಾರ್ ಬಾಗಿಲು ತೆರೆಯಲಿಲ್ಲ.

ಏಪ್ರಿಲ್ 4ರ ಶನಿವಾರ ಮೂರು ಗಂಟೆಗಳ ಕಾಲ ಬಾರ್ ಬಾಗಿಲು ತೆರೆದಿರಲಿದೆ ಎಂಬುದು ಶುಕ್ರವಾರ ಹರಿದಾಡುತ್ತಿರುವ ಸುದ್ದಿ. ವೀಕೆಂಡ್ನಲ್ಲಿ ಬಂದ ಸಂದೇಶಗಳನ್ನು ನೋಡಿ ಜನರಿಗೆ ಈಗಲೇ ಕಿಕ್ ಏರಿದೆ. ಅದನ್ನು ತಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ ಅವರಿಗೂ ನಶೆ ಏರಿಸಿದ್ದಾರೆ.
ಆದರೆ, ಈ ಸುದ್ದಿಯನ್ನು ಯಾರೂ ಖಚಿತಪಡಿಸಿಲ್ಲ. ಬೇಕೆಂದೇ ಇಂತಹ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ವೈನ್ ಸ್ಟೋರ್, ಬಾರ್ ಶನಿವಾರ ಬಾಗಿಲು ತೆಗೆಯುವುದಿಲ್ಲ. ಮದ್ಯ ಪ್ರಿಯರು ಧಾವಂತದಿಂದ ಬಾರ್ ಬಾಗಿಲ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದಂತೆ ಏಪ್ರಿಲ್ 14ರ ತನಕ ಎಲ್ಲರೂ ಮನೆಯಲ್ಲಿಯೇ ಇರಬೇಕು. ಕೊರೊನಾ ಹರಡದಂತೆ ತಡೆಯಲು ಸಹಕಾರ ನೀಡಬೇಕು. ಬಾರ್ ಬಾಗಿಲಿ ತೆರೆಯಲಿದೆ ಎಂದು ಬೈಕ್ ತೆಗೆದುಕೊಂಡು ಹೊರಟರೆ ಪೊಲೀಸರು ಹಿಡಿದು ಪ್ರಕರಣ ದಾಖಲು ಮಾಡುತ್ತಾರೆ ಎಂಬುದು ನೆನಪಿರಲಿ.
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ, "ಎಣ್ಣೆ ಬೇಕಾದವರು ಏಪ್ರಿಲ್ 14ರ ತನಕ ಕಾಯಬೇಕು" ಎಂದು ಸ್ಪಷ್ಟಪಡಿಸಿದ್ದಾರೆ. ವಾಟ್ಸಪ್ನಲ್ಲಿ ಹರಿದಾಡುವ ಸುದ್ದಿಗಳನ್ನು ನಂಬಬೇಡಿ, ಮನೆಯಲ್ಲಿಯೇ ಇರಿ.












Click it and Unblock the Notifications