ಕರ್ನಾಟಕ; ನವೆಂಬರ್ನಲ್ಲಿ ಮಳೆ ಕಡಿಮೆಯಾಗಲಿದೆ
ಬೆಂಗಳೂರು, ನವೆಂಬರ್ 03 : ಸತತ ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಿಹಿ ಸುದ್ದಿ. ಕರ್ನಾಟಕದಲ್ಲಿ ನವೆಂಬರ್ 3ರಿಂದ ಮಳೆ ಕಡಿಮೆಯಾಗಲಿದೆ. ಚಂಡಮಾರುತದ ಪ್ರಭಾವದಿಂದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿತ್ತು.
ನವೆಂಬರ್ 3 ರಿಂದ 7ರ ತನಕ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಇಲ್ಲದಿದ್ದರೂ ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಇರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
ಉತ್ತರ ಕನ್ನಡ, ಬೀದರ್ ಸೇರಿದಂತೆ ವಿವಿಧ ಕಡೆ ಶನಿವಾರ ಸಾಧಾರಣ ಮಳೆಯಾಗಿದೆ. ಕಿರವತ್ತಿ, ಔರಾದ್ನಲ್ಲಿ 4 ಸೆಂ. ಮೀ., ಕಮಲಾಪುರ, ಚಿಂಚೋಳಿ, ಬೀದರ್ನಲ್ಲಿ 1 ಸೆಂ. ಮೀ. ಮಳೆಯಾಗಿದೆ.

2019ರ ಜೂನ್ನಲ್ಲಿ ಮುಂಗಾರು ಆರಂಭವಾದಾಗ ಕರ್ನಾಟಕಲ್ಲಿ ಮಳೆ ಕಡಿಮೆ ಇತ್ತು. ಆಗಸ್ಟ್ 10ರ ಬಳಿಕ 15 ದಿನಗಳ ಕಾಲ ಭಾರಿ ಮಳೆಯಾಗಿತ್ತು. 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು.
ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ದೇಶದಲ್ಲಿ ಮುಂಗಾರು ಋತು ಜಾರಿಯಲ್ಲಿ ಇರುತ್ತದೆ. ಈ ವರ್ಷದ ಮುಂಗಾರಿನಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 23ರಷ್ಟು ಹೆಚ್ಚು ಮಳೆಯಾಗಿತ್ತು. ಅಕ್ಟೋಬರ್ ತಿಂಗಳು ಬಂದರೂ ಮಳೆ ಕಡಿಮೆಯಾಗಿರಲಿಲ್ಲ.
ಅಕ್ಟೋಬರ್ನಲ್ಲಿ ಎರಡು ಚಂಡಮಾರುತದ ಪ್ರಭಾವದಿಂದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿತ್ತು. ಮತ್ತೆ ಪ್ರವಾಹ ಉಂಟಾಗಿತ್ತು. ಮಳೆ ಬಿಟ್ಟರೆ ಸಾಕು ಎಂದು ಜನರು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.
ಹವಾಮಾನ ಇಲಾಖೆ ಈಗ ಜನರಿಗೆ ನೆಮ್ಮದಿ ನೀಡುವ ಸುದ್ದಿಯನ್ನು ಕೊಟ್ಟಿದ್ದು, ನವೆಂಬರ್ನಲ್ಲಿ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹೇಳಿದೆ.












Click it and Unblock the Notifications