ಕರ್ನಾಟಕ ಪೊಲೀಸರಿಂದ ಪತ್ರ ಚಳವಳಿ: ಕಾರಣವೇನು?
ಬೆಂಗಳೂರು, ಜನವರಿ 27: ಕರ್ನಾಟಕ ಪೊಲೀಸರು ಇದೀಗ ಪತ್ರ ಚಳವಳಿ ಆರಂಭಿಸಿದ್ದಾರೆ.
ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿಗೊಳಿಸುವ ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿಯಲು ನಿರ್ಧರಿಸಿದ್ದ ಪೊಲೀಸರು ಇದೀಗ ತಮ್ಮ ನಿಲುವನ್ನು ಬದಲಿಸಿದ್ದು, ಅನ್ಯಾಯ ಸರಿಪಡಿಸಿ ವೇತನ ತಾರತಮ್ಯ ನಿವಾರಿಸುವಂತೆ ಪತ್ರ ಚಳವಳಿ ಆರಂಭಿಸಿದ್ದಾರೆ.
ರಾಜ್ಯ ಸರ್ಕಾರ ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೊಳಿಸಿ ಪೊಲೀಸರ ಬೇಡಿಕೆಗಳನ್ನು ಈಡೇರಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಪೊಲೀಸರು ತಮ್ಮ ಬೇಡಿಕೆ ಸಾಕಾರಗೊಳಿಸುವಂತೆ ಸರ್ಕಾರದ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ.
ತಮ್ಮ ಪ್ರಮುಖ 25 ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಪೊಲೀಸ್ ಸಿಬ್ಬಂದಿ ರವಾನಿಸಿದೆ. ಸುಮಾರು 95 ಸಾವಿರ ಪೊಲೀಸರ ಸಹಿ ಇದೆ ಎಂದು ಹೇಳಲಾದ ನೊಂದ ಪೊಲೀಸರ ಹೆಸರಿನ' ಪತ್ರವನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ಪೊಲೀಸ್ ಸಿಬ್ಬಂದಿಯ ಕೆಲಸಕ್ಕೆ ತಕ್ಕಂತೆ ವೇತನ.ಭತ್ಯೆ, ರಜೆ ದೊರೆಯುತ್ತಿಲ್ಲ ಎಂದು 2016 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಪೊಲೀಸರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು.
ಆಗ ಪೊಲೀಸರಿಗೆ ಪ್ರತಿಭಟನೆಯ ಹಕ್ಕಿಲ್ಲ ಎಂದು ಅವರ ಪ್ರತಿಭಟನೆ ನಡೆಸದಂತೆ ತಡೆ ಹಿಡಿಯಲಾಯಿತು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಪೊಲೀಸರ ಬೇಡಿಕೆ ಈಡೇರಿಸುವ ಕುರಿತು ವರದಿ ಸಲ್ಲಿಸಲು ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ 2016 ಜೂನ್ನಲ್ಲಿ ಸಮಿತಿ ರಚನೆ ಮಾಡಿತ್ತು.
ಔರಾದ್ಕರ್ ಸಮಿತಿ ಒಂದು ವರ್ಷ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್ ಸರ್ಕಾರ, ನಂತರ ಬಂದ ಮೈತ್ರಿ ಸರ್ಕಾರ ಪ್ರಯತ್ನ ನಡೆಸಿತ್ತು. ಮೈತ್ರಿ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ 2019 ರ ಅಕ್ಟೋಬರ್ 19 ರಂದು ಔರಾದ್ಕರ್ ವರದಿ ಅನ್ವಯ ಪೊಲೀಸರ ವೇತನ ಹೆಚ್ಚಳ ಮಾಡುವ ಆದೇಶ ಜಾರಿ ಮಾಡಿತ್ತು.
ಆದರೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಈ ಆದೇಶ ಅನ್ವಯವಾಗದ ಕಾರಣ ಪೊಲೀಸರಲ್ಲಿ ಅಸಮಾಧಾನದ ವ್ಯಕ್ತವಾಗಿತ್ತು. ತಮಗಾದ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಅವಕಾಶವಿಲ್ಲದ ಕಾರಣ ಪೊಲೀಸರು ಮುಖ್ಯಮಂತ್ರಿಗೆ ಪತ್ರದ ಮೂಲಕ ಬೇಡಿಕೆ ಸಲ್ಲಿಸಿದ್ದಾರೆ. ಜತೆಗೆ ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಪೊಲೀಸರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಮ್ಮ ಬೇಡಿಕೆಗಳ ಪಟ್ಟಿ ಜೊತೆಗೆ ಮೊದಲು ತಾವು ಬರೆದಿರುವ ಪತ್ರವನ್ನು ಪೂರ್ಣವಾಗಿ ಸುಮಾರು 40-45 ನಿಮಿಷಗಳ ಕಾಲ ಸಮಾಧಾನದಿಂದ ತಾವೇ ಖುದ್ದಾಗಿ ಓದಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿಯನ್ನು ಪೂರ್ಣ ಜಾರಿಗೊಳಿಸಲು ಕನಿಷ್ಠ 5 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡುವಂತೆ ಕೋರಿದ್ದಾರೆ.
2006 ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮುಂದು ವರೆಸಬೇಕು. ಅಲ್ಲದೆ 2006 ಏಪ್ರಿಲ್ 1 ರಿಂದ ಪೂರ್ವಾನ್ವಯ ಪಿಂಚಣಿ ಯೋಜನೆಯನ್ನು ಬಜೆಟ್ನಲ್ಲಿ ಜಾರಿಗೊಳಿಸಬೇಕು. ಪೊಲೀಸರಿಗೆ ಪ್ರತಿ ತಿಂಗಳು ಪಡಿತರ ಬದಲು ನೀಡುತ್ತಿರುವ ಆಹಾರ ಧಾನ್ಯ ಭತ್ಯೆಯನ್ನು 400 ರೂ.ಗಳಿಂದ 2000 ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications