ಮಾಗಡಿಯ ಹೊಸಪಾಳ್ಯದಲ್ಲಿ ಜನರನ್ನು ಬೆಚ್ಚಿ ಬೀಳಿಸಿದ ಚಿರತೆ
ಮಾಗಡಿ, ಆಗಸ್ಟ್ 24: ಚಿರತೆ ಹಾವಳಿಯಿಂದ ಮರಿ ಆಡು ಬಲಿಯಾಗಿದ್ದರೆ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಘಟನೆ ಸಮೀಪದ ಹೊಸಪಾಳ್ಯ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಕೆಲ ಸಮಯಗಳಿಂದ ಗ್ರಾಮದಲ್ಲಿ ಓಡಾಡುತ್ತಿರುವ ಚಿರತೆಯಿಂದ ರೈತರು ಸೇರಿದಂತೆ ಗ್ರಾಮಸ್ಥರು ಭಯಗೊಂಡಿದ್ದು, ಚಿರತೆ ಯಾವಾಗ, ಯಾರ ಮೇಲೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿ ದಿನ ಕಳೆಯುವಂತಾಗಿದೆ.

ಈ ಮಧ್ಯೆ ಗ್ರಾಮದ ನಿವಾಸಿ ವಿಜಯಕುಮಾರ್ ಮನೆಯ ಹಿತ್ತಲಲ್ಲಿ ಕಟ್ಟಿ ಹಾಕಿದ್ದ ಮರಿ ಆಡಿನ ಮೇಲೆ ದಾಳಿ ಮಾಡಿ ಕೊಂದಿದೆ. ಆ ನಂತರ ಅಡ್ಡಾದಿಡ್ಡಿ ಓಡಿದ ಚಿರತೆ ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಈ ವೇಳೆ ಭಯದಿಂದ ನೆಲಕ್ಕೆ ಬಿದ್ದ ಪರಿಣಾಮ ಸವಾರ ವೆಂಕಟೇಶ್ ಮತ್ತು ಇನ್ನಿಬ್ಬರು ಗಾಯಗೊಂಡು, ಮಾಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವಿಷಯ ಗ್ರಾಮದಲ್ಲಿ ಹರಡಿದ್ದರಿಂದ ಜನ ಭಯಗೊಂಡಿದ್ದಾರೆ. ಅಲ್ಲದೆ ಜಮೀನಿಗೆ ತೆರಳಲು ಭಯಗೊಳ್ಳುವಂತಾಗಿದೆ. ಈ ಬಗ್ಗೆ ಮಾತನಾಡಿರುವ ತಾಲೂಕು ರೈತಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಅರಣ್ಯ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಸಾಕು ಮತ್ತು ಬೀದಿನಾಯಿಗಳು ಕಣ್ಮರೆಯಾಗುತ್ತಿದ್ದವಾದರೂ ಇದು ಚಿರತೆಯ ಕೆಲಸ ಎಂಬುದು ಜನಕ್ಕೆ ಗೊತ್ತಾಗಿರಲಿಲ್ಲ.












Click it and Unblock the Notifications