ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ : ಯಾರು, ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 15 : ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಮೂವರು ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗರಾಜ್ ಛಬ್ಬಿ ಮನವೊಲಿಸಿ, ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ.
ಸೋಮವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು, 'ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷ 18 ರಿಂದ 20 ಸ್ಥಾನಗಳಲ್ಲಿ ಜಯಗಳಿಸಲಿದೆ' ಎಂದು ಹೇಳಿದರು. ['ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ, ಗೆಲ್ಲುವ ವಿಶ್ವಾಸವಿದೆ']
'ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ದಯಾನಂದ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಬಂಟ್ವಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ' ಎಂದು ಪರಮೇಶ್ವರ ಅವರು ಹೇಳಿದರು. [ಪರಿಷತ್ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ]
ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ 2ನೇ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದ ಹಾಲಿ ಸದಸ್ಯ ನಾಗರಾಜ್ ಛಬ್ಬಿ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಒಬ್ಬರೇ ಅಭ್ಯರ್ಥಿ ಇರಬೇಕು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ನಾಗರಾಜ್ ಅವರ ಮನವೊಲಿಸಿದ್ದು, ಅವರು ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ. ಉಚ್ಚಾಟನೆ ಬಗ್ಗೆ ಯಾರು ಏನು ಹೇಳಿದರು?....

ಉತ್ತರಿಸಲು ಅವಕಾಶ ನೀಡಬೇಕಿತ್ತು
'ಪಕ್ಷದ ನಿರ್ಧಾರದಿಂದ ನನ್ನ ಮನಸ್ಸಿಗೆ ನೋವಾಗಿದೆ. ಪಕ್ಷದಲ್ಲಿ ನಿಷ್ಕ್ರಿಯರಾದವರಿಗೆ ಅವಕಾಶ ಕೊಟ್ಟು, ನನ್ನಂತಹವರ ಮೇಲೆ ಶಿಸ್ತು ಕ್ರಮ ಕೈಗೊಂಡಿರುವುದು ಬೇಸರದ ಸಂಗತಿ. ನಾವು ಭ್ರಷ್ಟಾಚಾರ, ಅನ್ಯಾಯವೆಸಗಿಲ್ಲ. ನಮಗೂ ಉತ್ತರಿಸಲು ಅವಕಾಶ ನೀಡಬೇಕಿತ್ತು' ಎಂದು ಕೆ.ಜಯಪ್ರಕಾಶ್ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

'ನಾವು ಅಂತಹ ತಪ್ಪೇನೂ ಮಾಡಿಲ್ಲ'
'ಕಾಂಗ್ರೆಸ್ ಪಕ್ಷದ ಬೈಲಾ ಪ್ರಕಾರ, ಉಚ್ಚಾಟನೆ ಮಾಡಬೇಕಾದರೆ ಕಾರಣ ಕೇಳಿ ನೋಟಿಸ್ ಕೊಟ್ಟು ಸ್ಪಷ್ಟನೆ ಪಡೆದು ಎಐಸಿಸಿಗೆ ಶಿಫಾರಸು ಮಾಡಬೇಕಾಗುತ್ತದೆ. ಆದರೆ, ಯಾವುದೇ ಪ್ರಕ್ರಿಯೆ ನಡೆಸದೇ ಉಚ್ಚಾಟನೆ ಮಾಡಲಾಗಿದೆ. ಉಚ್ಚಾಟನೆಗೊಳ್ಳುವಂತಹ ಚಟುವಟಿಕೆಯನ್ನು ನಡೆಸಿಲ್ಲ' ಎಂದು ದಯಾನಂದ ರೆಡ್ಡಿ ಅವರು ಹೇಳಿದ್ದಾರೆ.

'ನಾನೀಗ ಸ್ವತಂತ್ರ ಹಕ್ಕಿ'
'ನಾನೀಗ ಸ್ವತಂತ್ರ ಹಕ್ಕಿ. 4 ದಶಕಗಳಿಂದ ಕಾಂಗ್ರೆಸ್ ನನಗೇನೂ ಕೊಟ್ಟಿಲ್ಲ. ಹಾಗಾಗಿ ಉಚ್ಚಾಟನೆಯಿಂದ ಕಳೆದುಕೊಳ್ಳುವಂಥದ್ದೇನಿಲ್ಲ. ಪಕ್ಷದಲ್ಲಿ ಸಕ್ರಿಯರನ್ನು ಕಡೆಗಣಿಸಿ ಮಲಗಿದ್ದವರಿಗೆ ಟಿಕೆಟ್ ಕೊಡುವ ನಾಯಕರಿಗೆ ನಾನು ಗೆದ್ದು ತೋರಿಸುತ್ತೇನೆ' ಎಂದು ಹರಿಕೃಷ್ಣ ಬಂಟ್ವಾಳ ಪ್ರತಿಕ್ರಿಯೆ ನೀಡಿದ್ದಾರೆ.

ಬಂಡಾಯ ಅಭ್ಯರ್ಥಿಗಳು ಪಕ್ಷದಿಂದ ಉಚ್ಛಾಟನೆ
'ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಮೂವರು ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಯಾರು ಎಲ್ಲಿಂದ ಸ್ಪರ್ಧೆ?
ಕೆ.ಜಯಪ್ರಕಾಶ್ ಹೆಗ್ಡೆ - ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರ
ಹರಿಕೃಷ್ಣ ಬಂಟ್ವಾಳ್ - ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರ
ದಯಾನಂದ ರೆಡ್ಡಿ - ಬೆಂಗಳೂರು ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.












Click it and Unblock the Notifications