ಭೂಪರಿವರ್ತನೆ ಪ್ರಕ್ರಿಯೆ ಸರಳಗೊಳಿಸಲು ರಾಜ್ಯ ಸರ್ಕಾರ ತೀರ್ಮಾನ
ಬೆಂಗಳೂರು, ಸೆಪ್ಟೆಂಬರ್ 17 : ಭೂಪರಿವರ್ತನೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಭೂಮಾಲೀಕರಿಂದ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭೂಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ, ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪರಿವರ್ತನೆ ಪ್ರಕ್ರಿಯೆಯು ಸುಗಮವಾಗಿ ಮತ್ತು ತ್ವರಿತವಾಗಿ ನಡೆಯಲು ಅನುಕೂಲವಾಗುವಂತೆ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 95ಕ್ಕೆ ಸೂಕ್ತ ತಿದ್ದುಪಡಿಯನ್ನು ಈಗಾಗಲೇ ತರಲಾಗಿದ್ದು, ಈ ಬಗ್ಗೆ ಅಗತ್ಯ ತಂತ್ರಾಂಶವನ್ನು (ಸಾಫ್ಟ್ವೇರ್) ಕೂಡ ಅಭಿವೃದ್ಧಿ ಪಡಿಸಲಾಗಿದೆ ಹಾಗೂ ಈ ನಿಟ್ಟಿನಲ್ಲಿ ಪರಿಭಾವಿತ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಎಂಬ ಸರಳವಾದ ಪ್ರಕ್ರಿಯೆಯನ್ನು ಇತ್ತೀಚೆಗೆ ಜಾರಿಗೊಳಿಸಲಾಗಿದೆ, ಎಂದು ವಿವರಿಸಿದರು.
ಹೊಸ ನಿಯಮದ ಪ್ರಕಾರ, ಸರಳೀಕೃತ ಭೂಪರಿವರ್ತನೆ ಪ್ರಕ್ರಿಯೆಯು ಕೆಳಕಂಡ ಹಂತಗಳನ್ನು ಒಳಗೊಂಡಿರುತ್ತದೆ :
* ಅರ್ಜಿದಾರನು ಮೊದಲಿಗೆ ಸಂಬಂಧಪಟ್ಟ ಜಮೀನಿನ ಸರ್ವೆ ನಂ. ಮತ್ತು ಅಗತ್ಯ ವಿವರಗಳನ್ನೊಳಗೊಂಡ ಮನವಿ ಸಲ್ಲಿಸಬೇಕು.
* ನಂತರ, ಅರ್ಜಿದಾರನು ಪ್ರಮಾಣಪತ್ರದೊಂದಿಗೆ ಮನವಿ ಪತ್ರವನ್ನು ಸಲ್ಲಿಸಬೇಕು.
* ಅರ್ಜಿದಾರನು ಮನವಿಯೊಂದಿಗೆ ಈ ಕೆಳಕಂಡ ಪ್ರಕರಣಗಳಲ್ಲಿ 11ಇ ನಕ್ಷೆಯನ್ನು ಸಲ್ಲಿಸಬೇಕು.

1. ಮನವಿಯು ಭಾಗಶ: ಭೂಪರಿವರ್ತನೆಗೆ ಸಂಬಂಧಿಸಿದ್ದಲ್ಲಿ
2. ಪಹಣಿಯಲ್ಲಿ ಒಬ್ಬರಿಗಿಂತ ಹೆಚ್ಚು ಖಾತೆದಾರರ ಹೆಸರು ನಮೂದಾಗಿದ್ದಲ್ಲಿ
3. ಮನವಿಯು ಪೈಕಿ ಪಹಣಿಗಳನ್ನು ಒಳಗೊಂಡಿದ್ದಲ್ಲಿ
* ಬಳಿಕ, ಈ ಮನವಿಯನ್ನು ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಕಳುಹಿಸಲಾಗುವುದು. ಅಲ್ಲಿನ ಅಧಿಕಾರಿಗಳು, ಈ ಮನವಿಯನ್ನು ಪರಿಶೀಲಿಸಿ ಮಹಾಯೋಜನೆಯಂತೆ (ಮಾಸ್ಟರ್ ಪ್ಲಾನ್) ತಮ್ಮ ಅಭಿಪ್ರಾಯವನ್ನು ಸಲ್ಲಿಸುತ್ತಾರೆ.
* ಮುಂದುವರೆದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಸ್ವೀಕೃತವಾಗುವ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಭೂಪರಿವರ್ತನೆಗೆ ಸಂಬಂಧಿಸಿದ ಶುಲ್ಕ ಮತ್ತು ದಂಡವನ್ನು ನಿಗದಿಪಡಿಸಲಾಗುವುದು.
* ಬಳಿಕ, ಅರ್ಜಿದಾರನು ಆನ್ಲೈನ್ ಮೂಲಕ ನಿಗದಿತ ಶುಲ್ಕ ಮತ್ತು ದಂಡವನ್ನು ಪಾವತಿಸಿ, ಈ ಸಂಬಂಧ ಗಣಕೀಕೃತ ತಾತ್ಕಾಲಿಕ ಶುಲ್ಕ ಸ್ವೀಕೃತಿಯ ವಿವರದ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
* ಜಿಲ್ಲಾಧಿಕಾರಿಗಳು ಡಿಜಿಟಲ್ ಅಂಕಿತದ ಮೂಲಕ ಭೂಪರಿವರ್ತನಾ ಆದೇಶವನ್ನು ಹೊರಡಿಸುವರು.
* ಅಂತಿಮವಾಗಿ ಅರ್ಜಿದಾರನು ಈ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದರಂತೆ, ಭೂಪರಿವರ್ತನೆಯು 1961ರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದಡಿ ಸರ್ಕಾರವು ಪ್ರಕಟಿಸಿರುವ ಮಾಸ್ಟರ್ ಪ್ಲ್ಯಾನ್ಗೆ ಅನುಗುಣವಾಗಿ ಇದ್ದಲ್ಲಿ ಇಂತಹ ಪ್ರಕರಣಗಳನ್ನು ಪರಿಭಾವಿತ ಭೂ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಎಂದು ಪರಿಗಣಿಸಲಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದರು.
ಜೊತೆಗೆ, ಪರಿವರ್ತನೆಗೆ ಒಳಪಡುವ ಜಮೀನು ಸ್ಥಳೀಯ ಯೋಜನಾ ಪ್ರದೇಶದ ಒಳಗಿದ್ದು, ಪ್ರಸ್ತಾಪಿತ ಭೂ ಪರಿವರ್ತನೆಯ ಉದ್ದೇಶವು ಮೇಲ್ಕಂಡ ಅಧಿನಿಯಮದ ಉಪಬಂಧದಡಿ ಪ್ರಕಟಪಡಿಸಿದ ಮಾಸ್ಟರ್ ಪ್ಲ್ಯಾನ್ (ಮಹಾಯೋಜನೆ ನಕ್ಷೆ)ನಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕೆ ಅನುಗುಣವಾಗಿಯೂ ಇರಬೇಕು ಎಂದು ದೇಶಪಾಂಡೆ ವಿವರಿಸಿದರು.
ಈ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಲು ಸುತ್ತೋಲೆ ಹೊರಡಿಸಲಾಗಿದೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications