'ಗಿಫ್ಟ್' ಕೊಟ್ಟು ವಿವಾದಕ್ಕೆ ಸಿಲುಕಿದ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ, ಫೆಬ್ರವರಿ 06: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಮತದಾರರಿಗೆ ಗಿಫ್ಟ್ ಬಾಕ್ಸ್ ನೀಡಿ ಆಮಿಷವೊಡ್ಡಿರುವ ಆರೋಪ ಎದುರಿಸುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಮತದಾರರನ್ನು ಸೆಳೆಯಲು ಈ ರೀತಿ ಮಾರ್ಗ ಅನುಸರಿಸಿದ್ದಾರೆ ಎಂದು ವಿಪಕ್ಷದವರು ಆರೋಪಿಸಿದ್ದಾರೆ.

ಗಿಫ್ಟ್ ಬಾಕ್ಸ್ ಮೇಲೆ ಲಕ್ಷ್ಮೀ ಹೆಬ್ಬಾಳಕರ್ ಭಾವಚಿತ್ರವಿದ್ದು, ಖುದ್ದು ಲಕ್ಷ್ಮೀ ಹೆಬ್ಬಾಳಕರ್ ಪುತ್ರನ ಸಮ್ಮುಖದಲ್ಲಿ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಎರಡು ದಿನಗಳಲ್ಲಿ ರಾತ್ರಿ ಹೊತ್ತು ಈ ಗಿಫ್ಟ್ ಹಂಚಿರುವ ಸಾಧ್ಯತೆಯಿದೆ.
'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ' ಎಂಬ ವಿವಾದಿತ ಹೇಳಿಕೆ ನೀಡಿ, ಕ್ಷಮೆಯಾಚಿಸಿದ್ದ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಲಕ್ಷ್ಮಿ ಅವರ ಮರಾಠಿ ಪ್ರೀತಿ ಕಂಡು ಕನ್ನಡಿಗರು ಗರಂ ಆಗಿದ್ದರು.
ಕಾಂಗ್ರೆಸ್ ಸರ್ಕಾರದ 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮದ ಬಗ್ಗೆ ಮರಾಠಿ ಭಾಷೆಯಲ್ಲಿ ಪುಸ್ತಕ ಮುದ್ರಣ ಮಾಡಿರುವ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ಮರಾಠಿ ಮತದಾರರನ್ನು ಓಲೈಸಲು ಎಲ್ಲಾ ರೀತಿಯಿಂದಲೂ ಸಜ್ಜಾಗಿರುವಂತೆ ತೋರುತ್ತಿದೆ.
ಈ ಹಿಂದೆ ಹೆಬ್ಬಾಳಕರ ಸುಪ್ರೀ ಕೋರ್ಟ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿದ್ರೆ ನಾನೇ ಮೊದಲು ಜೈ ಮಹಾರಾಷ್ಟ್ರ ಎನ್ನುವೆ. ನಾನೇ ಮೊದಲು ಭಗ್ವಾಧ್ವಜ ಹಿಡಿಯುವೆ ಎಂದು ಹೇಳಿದ್ದರು.












Click it and Unblock the Notifications