ಕುಮಟೆಯಲ್ಲಿ 'ಮಳೆ ಮಾರುವ ಹುಡುಗ' ಅನಾವರಣ
ಕುಮಟಾ, ಆ.26: ಸ್ವಸ್ತಿ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಥಾಸಂಕಲನ ಸ್ಪರ್ಧೆ 2014 ರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಹುಮಾನಿತ ಕೃತಿ ಕರ್ಕಿ ಕೃಷ್ಣಮೂರ್ತಿ ಯವರ "ಮಳೆ ಮಾರುವ ಹುಡುಗ" ಪುಸ್ತಕ ಅನಾವರಣ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ.
'ಮಳೆ ಮಾರುವ ಹುಡುಗ' ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 31 ಅಗಸ್ಟ್ 2014 ರಂದು ಕುಮಟಾದ ನಾದಶ್ರೀ ಸಭಾಂಗಣದಲ್ಲಿ ಬೆಳಗ್ಗೆ 10.30ರ ವೇಳೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಾದಂಬರಿಕಾರರಾದ ಕರಣಂ ಪವನ್ ಪ್ರಸಾದ್ ಹಾಗೂ ಮಂಗಳೂರು ಆಕಾಶವಾಣಿ ಉಪನಿರ್ದೇಶಕರಾದ ಡಾ. ವಸಂತಕುಮಾರ್ ಪೆರ್ಲ, ಖ್ಯಾತ ಕಥೆಗಾರರಾದ ಡಾ, ಶ್ರೀಧರ್ ಬಳಗಾರ್ ಅವರು ಆಗಮಿಸಲಿದ್ದಾರೆ. ಸಾಹಿತ್ಯಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸ್ವಸ್ತಿ ಪ್ರಕಾಶನ, ಕುಮಟಾ ಕೋರಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ "ಸ್ವಸ್ತಿ ಪ್ರಕಾಶನ 2014 ನೇ ಸಾಲಿನ "ಕಥಾಸಂಕಲನ" ಪ್ರಶಸ್ತಿಗಾಗಿ ಅರ್ಹರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಿತ್ತು. ರಾಜ್ಯಾದ್ಯಂತ ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು, ಅವುಗಳಲ್ಲಿ 6 ಕಥಾಸಂಕಲನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.
ಖ್ಯಾತ ಕಥೆಗಾರ, ಸಂವೇದನಾಶೀಲ ಬರಹಗಾರರೂ ಆದ ಡಾ. ಶ್ರೀಧರ್ ಬಳಗಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. 2014ನೇ ಸಾಲಿಗೆ ಪ್ರಶಸ್ತಿಗಾಗಿ ಕರ್ಕಿ ಕೃಷ್ಣಮೂರ್ತಿಯವರ 'ಮಳೆ ಮಾರುವ ಹುಡುಗ ಕಥಾಸಂಕಲವನ್ನು ಆಯ್ಕೆ ಮಾಡಿದ್ದರು.
ಪ್ರಶಸ್ತಿ ವಿಜೇತ ಕರ್ಕಿ ಕೃಷ್ಣಮೂರ್ತಿ ಅವರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುತ್ತದೆ ಮತ್ತು ಕಥಾ ಸಂಕಲನವನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆ 25 ಪುಸ್ತಕಗಳನ್ನು ಅವರು ಪಡೆಯಲಿದ್ದಾರೆ.