ಬಿಜೆಪಿಯಿಂದ 10 ಕೋಟಿ ಆಮಿಷಕ್ಕೊಳಗಾದ ಜೆಡಿಎಸ್ ಶಾಸಕ ಯಾರು?
Recommended Video
ಬೆಂಗಳೂರು, ಜೂನ್ 20: ಮೈತ್ರಿಪಕ್ಷದ ಶಾಸಕರಿಗೆ ಆಮಿಷವೊಡ್ಡಿದ ನಮ್ಮ ಪಕ್ಷದ ಮುಖಂಡರು ಯಾರು? ಆಮಿಷಕ್ಕೊಳಗಾದ ನಿಮ್ಮ ಪಕ್ಷದ ಶಾಸಕರು ಯಾರು ಎನ್ನುವುದನ್ನು ಬಹಿರಂಗ ಪಡಿಸಿ, ಪುಣ್ಯಕಟ್ಟಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಗೆ ಸವಾಲೆಸೆದಿದ್ದಾರೆ.
ನಿಮ್ಮ ಮೈತ್ರಿಯಲ್ಲೇ ಅಸಮಾಧಾನ ತಾಂಡವಾಡುತ್ತಿದೆ, ಅದನ್ನು ಮುಚ್ಚಿಕೊಳ್ಳಲು ನಮ್ಮ ಪಕ್ಷದ ಮೇಲೆ ವೃಥಾ ಗೂಬೆ ಕೂರಿಸುತ್ತೀರಾ. ನಾವು ಸರಕಾರ ಅಲುಗಾಡಿಸುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟನೆಯನ್ನು ನೀಡಿದ್ದಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಿಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದನ್ನು ಬಿಡಿ, ಮುಖ್ಯಮಂತ್ರಿ ಹುದ್ದೆಗೆ ತಕ್ಕಂತೆ ಆಡಳಿತ ನಡೆಸಿ, ಆಮೇಲೆ ಬಿಜೆಪಿ ಮೇಲೆ ಆರೋಪ ಮಾಡಿ ಎಂದು ಯಡಿಯೂರಪ್ಪ, ಕುಮಾರಸ್ವಾಮಿಗೆ ಸಲಹೆಯನ್ನು ನೀಡಿದ್ದಾರೆ.

ನೀವು ಹೇಳಿದ ಪ್ರಕಾರ ಆಮಿಷವೊಡ್ಡಿದವರಾರು ಎಂದು ಹೇಳಿದರೆ, ನಿಮಗೂ ಒಂದು ಗೌರವ ಬರುತ್ತದೆ, ಅದು ಬಿಟ್ಟು ಸುಮ್ಮನೇ ಆರೋಪ ಮಾಡುವುದು ತರವಲ್ಲ ಎಂದು ಯಡಿಯೂರಪ್ಪ ಸಲಹೆಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ ಎಂದು ಜಿಂದಾಲ್ ವಿಚಾರದಲ್ಲಿ ಮತ್ತೆ ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ.
ಬಿಜೆಪಿಯವರು ನಮ್ಮ ಜೆಡಿಎಸ್ ಶಾಸಕರಿಗೆ ಕರೆ ಮಾಡಿ, 'ನಮ್ಮ ಪಕ್ಷಕ್ಕೆ ಬನ್ನಿ ನಿಮಗೆ 10 ಕೋಟಿ ಕೊಡುತ್ತೇನೆ' ಎಂದು ಹೇಳಿದ್ದಾರೆಂದು ಸಿಎಂ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗಂಭೀರ ಆರೋಪ ಮಾಡಿದ್ದರು.
ನಿನ್ನೆ ರಾತ್ರಿ (ಜೂ 17) ಜೆಡಿಎಸ್ನ ಶಾಸಕರಿಗೆ ಬಿಜೆಪಿ ಮುಖಂಡರು ಕರೆ ಮಾಡಿ, ಈಗಾಗಲೇ ಕಾಂಗ್ರೆಸ್-ಜೆಡಿಎಸ್ನ ಹತ್ತು ಶಾಸಕರು ನಮ್ಮ ಕಡೆ ಬಂದಿದ್ದಾರೆ, ನೀವು ಬರುವುದಾದರೆ 10 ಕೋಟಿ ಹಣವನ್ನು ನೀವು ಕೇಳಿದ ಕಡೆಗೆ ತಂದು ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications