ಸಿದ್ದರಾಮಯ್ಯ ಸರ್ಕಾರ ಐಸಿಯು ಸೇರುವ ಕಾಲ ಹತ್ತಿರದಲ್ಲೇ ಇದೆ: ಎಚ್ಡಿಕೆ ಸ್ಫೋಟಕ ಹೇಳಿಕೆ!
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ 2.O ಅಧಿಕಾರಕ್ಕೆ ಬಂದು ಮೊದಲನೇ ಅಧಿವೇಶನ ಕೂಡ ಇಂದಿನಿಂದ ಶುರುವಾಗಿದೆ. ಆದ್ರೆ ಮೊದಲ ದಿನವೇ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರ ಐಸಿಯು ಸೇರುವ ಕಾಲ ಹತ್ತಿರದಲ್ಲಿದೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ ಸಿದ್ದು ಸರ್ಕಾರದ ಬಗ್ಗೆ ಎಚ್ಡಿಕೆ ಹೀಗೆ ಹೇಳಿದ್ದು ಏಕೆ? ಈ ಮಾತಿನ ಮರ್ಮವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಸಿದ್ದರಾಮಯ್ಯ & ಎಚ್ಡಿಕೆ ಮಧ್ಯೆ ರಾಜಕೀಯ ಕಿತ್ತಾಟ ಇಂದು ಅಥವಾ ನಿನ್ನೆಯದ್ದಲ್ಲ. ಈ ಹೋರಾಟಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರ್ಪಡೆಯಾದ ನಂತರ ಇಬ್ಬರೂ ನಾಯಕರ ನಡುವೆ ತಿಕ್ಕಾಟ ಜೋರಾಗಿದೆ. ಆದ್ರೆ 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಕಿತ್ತಾಟ ಆಗಲಾದ್ರೂ ತಣ್ಣಗಾಗುತ್ತೆ ಎಂಬ ಭರವಸೆ ಸಿಕ್ಕಿತ್ತು. ಆದರೆ ಈಗ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ಡಿಕೆ ನಡುವೆ ಪಾಲಿಟಿಕ್ಸ್ ಫೈಟ್ ಇದ್ದೇ ಇದೆ. ಹೀಗೆ ನೂತನ ಸರ್ಕಾರದ ಮೊದಲ ಅಧಿವೇಶನದ, ಮೊದಲ ದಿನವೇ ಮಾಜಿ ಸಿಎಂ ಎಚ್ಡಿಕೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ವೆಂಟಿಲೇಟರ್ ಮೇಲೆ ಸರ್ಕಾರ!
ಹೌದು, ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಗಮನಿಸಿದರೆ ಈ ಸರ್ಕಾರ ಆದಷ್ಟು ಬೇಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನ ವೆಂಟಿಲೇಟರ್ಗೆ ಕೊಂಡೊಯ್ಯಲಿದೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ. ಶಕ್ತಿಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ್ರು. ರಾಜ್ಯಪಾಲರ ಭಾಷಣವು ರಾಜ್ಯದ ಮುಂದಿನ ಆತಂಕಕಾರಿ ದಿನಗಳತ್ತ ಬೊಟ್ಟು ಮಾಡುತ್ತಿದೆ. ಈ ಸರ್ಕಾರ ಐಸಿಯುಗೆ ಹೋಗುವ ಕಾಲವೂ ಶೀಘ್ರವೇ ಬರುತ್ತೆ ಎಂದು ಅನಿಸುತ್ತಿದೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯುವ ಸನ್ನಿವೇಶ ನಿರ್ಮಾಣ ಆಗಬಹುದು ಎಂದು ಎಚ್ಡಿಕೆ ತೀವ್ರ ವಾಗ್ದಾಳಿ ನಡೆಸಿದರು.
ಇದು ಸಮ್ಮಿಶ್ರ ಸರ್ಕಾರದ ಮಾದರಿ!
135 ಸ್ಥಾನ ಗೆದ್ದು, ಭರ್ಜರಿ ಬಹುಮತ ಪಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರವನ್ನ ಎಚ್ಡಿಕೆ ಸಮ್ಮಿಶ್ರ ಸರ್ಕಾರಕ್ಕೆ ಹೋಲಿಸಿದ್ದು ಗಂಭೀರ ಆರೋಪ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಂತೆ ಆಗಿರುವ ಈ ಸರ್ಕಾರವು ಐಸಿಯು ಪಾಲಾಗುವ ಕಾಲ ಹತ್ತಿರದಲ್ಲೇ ಇದೆ. ವಿಪಕ್ಷ ನಾಯಕನಾಗಿ ಟೀಕಿಸಲು ನಾನು ಈ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ? ಎನ್ನುವುದರ ಬಗ್ಗೆ ಸರ್ಕಾರ ಸತ್ಯ ಮರೆಮಾಚಿದೆ. ಚುನಾವಣೆ ವೇಳೆ ಕಾಂಗ್ರೆಸ್ ಜನರಿಗೆ ಕೊಟ್ಟ ಆಶ್ವಾಸನೆ ಏನು? ಈಗ ಹೇಳುತ್ತಿರುವುದೇನು? ಭವಿಷ್ಯದ ಕರ್ನಾಟಕದ ಬಗ್ಗೆ ಯಾವ ಒಳನೋಟ ಇಲ್ಲದ ಭಾಷಣ ಇದಾಗಿದೆ ಎಂದು ಅವರು ಟೀಕಿಸಿದರು.
135 ಸೀಟು ಗೆದ್ದವರಿಗೆ ಗಾಂಭೀರ್ಯ ಬೇಡವೇ?
ಈ ಸರ್ಕಾರಕ್ಕೆ ಮುಂದಿನ 5 ವರ್ಷಕ್ಕೆ ಏನು ಕೊಡಬೇಕೆಂಬ ದೂರದೃಷ್ಟಿ ಹಾಗೂ ಆತ್ಮವಿಶ್ವಾಸ ಇಲ್ಲ. ರಾಜ್ಯಪಾಲರ ಭಾಷಣವಿರಲಿ ಅಥವಾ ಬಜೆಟ್ ಭಾಷಣ ಇರಲಿ, ಸರ್ಕಾರದ ಮುಂದಿನ ಆಶಯದ ಬಗ್ಗೆ ಬೆಳಕು ಚೆಲ್ಲಬೇಕು. ಈ ಭಾಷಣದಲ್ಲಿ ಬೆಳಕಿನ ಮಾತು ಹಾಗಿರಲಿ ಬರೀ ಕತ್ತಲೇ ತುಂಬಿದೆ ಎಂದು ಲೇವಡಿ ಮಾಡಿದರು. ರಾಜ್ಯಪಾಲರ ಭಾಷಣ ಅಂದ್ರೆ ಹೇಗಿರಬೇಕು? ಅದೂ 135 ಸೀಟನ್ನು ಗೆದ್ದ ಪೂರ್ಣ ಬಹುಮತದ ಸರ್ಕಾರದ ರಾಜ್ಯಪಾಲರ ಭಾಷಣ ಅಂದರೆ ಅದಕ್ಕೆ ಗಾಂಭೀರ್ಯ ಬೇಡವೇ? ಎಂದು ಎಚ್ಡಿಕೆ ಪ್ರಶ್ನಿಸಿದರು. ಆಡಳಿತ ಪಕ್ಷದ ಯಾವ ಶಾಸಕರು ಕೂಡ ರಾಜ್ಯಪಾಲರ ಭಾಷಣ ಕೇಳಿ ಮೇಜು ಕುಟ್ಟಿದ್ದು ನೋಡಲಿಲ್ಲ ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್ ಶಾಸಕರ ಶಿಸ್ತಿನ ಬಗ್ಗೆ ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯದ ಅನೇಕ ಸಾಧಕರ ಹೆಸರುಗಳನ್ನ ನೆನಪಿಸಿ, ಅವರ ಮಾತು ಸ್ಮರಿಸಿದ್ದಾರೆ. 5 ಗ್ಯಾರಂಟಿಗಳನ್ನು ಜಾರಿಗೆ ತಂದ ಸರ್ಕಾರ ಎಂದು ಹೇಳಿಕೊಂಡಿದ್ದಾರೆ. ನಾಡಿನ ಸಾಮಾಜಿಕ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಸಂದೇಶವನ್ನು ನೀಡಿದ್ದಾರೆ. ವಸತಿ ರಹಿತರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ಹಾಗೆಯೇ ಗ್ರಾಮೀಣ & ನಗರಪ್ರದೇಶದ ಅಭಿವೃದ್ಧಿ ಮಾಡೋದಾಗಿ ಹೇಳಿದ್ದಾರೆ. ಪಶು ಸಂಗೋಪನೆಯಿಂದ ಗ್ರಾಮೀಣ ಭಾಗದ ಜನಕ್ಕೆ ಅನೂಕೂಲ ಆಗಲಿದೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನೇ ಕಡಿತ ಮಾಡಿದೆ. ಹಾಗಾದರೆ ಇದೆಂತಹ ವಿಪರ್ಯಾಸ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications