ಸೆ.2ರಂದು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಮುಷ್ಕರ
ಬೆಂಗಳೂರು, ಆ.26 : ವೇತನ ಪರಿಷ್ಕರಣೆಯಲ್ಲಿ ವಿಳಂಬ, ಅನಗತ್ಯ ವರ್ಗಾವಣೆ ಮುಂತಾದ ವಿಚಾರಗಳನ್ನು ಖಂಡಿಸಿ ಸಾರಿಗೆ ಸಂಸ್ಥೆಗಳು ಸೆ.2ರಂದು ಸಾರಿಗೆ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿವೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮದ 1 ಲಕ್ಷ ನೌಕರರು ಈ ಬಂದ್ಗೆ ಬೆಂಬಲ ನೀಡಲಿದ್ದಾರೆ.
12 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 2ರ ಬುಧವಾರ ಬಸ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ (ಸಿಐಟಿಯು) ಗೌರವಾಧ್ಯಕ್ಷ ಎಸ್. ಪ್ರಸನ್ನ ಕುಮಾರ್ ಹೇಳಿದ್ದಾರೆ. [ಓಣಂ ಪ್ರಯುಕ್ತ ವಿಶೇಷ ಬಸ್ ಸೇವೆ]

ಸಾರಿಗೆ ಸಂಸ್ಥೆಗಳು ಹಮ್ಮಿಕೊಂಡಿರುವ ಮುಷ್ಕರಕ್ಕೆ 12 ಸಂಘಟನೆಗಳು ಬೆಂಬಲ ನೀಡಿವೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಇಕೆಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ನಿಗಮಗಳ 1.20 ಲಕ್ಷ ನೌಕರರು ಈ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಪ್ರಸನ್ನ ಕುಮಾರ್ ತಿಳಿಸಿದರು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
ವಿವಿಧ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಮತ್ತು ಅಗತ್ಯ ವಸ್ತುಗಳ ದರ ಏರಿಕೆಗೆ ಅನುಗುಣವಾಗಿ ಸಿಬ್ಬಂದಿ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಸಿಬ್ಬಂದಿಗೆ ನೀಡಲಾಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಬಂದ್ಗೆ ಕರೆ ನೀಡಲಾಗಿದೆ.
ಸಾರಿಗೆ ನಿಗಮಗಳ ನೌಕರರಿಗೆ ಮುಂದಿನ ವರ್ಷದ ಜ. 1ರಿಂದ ವೇತನ ಪರಿಷ್ಕರಣೆ ಆಗಬೇಕು. ಆದರೆ, ಸೇವಾ ಸೌಲಭ್ಯ ಹಾಗೂ ಸೇವಾ ನಿಯಮಾವಳಿಗಳಿಗೆ ರಾಜ್ಯ ಸರ್ಕಾರ ಹಾಗೂ ಕೆಎಸ್ಆರ್ಟಿಸಿ ಆಡಳಿತ ಬೆಲೆ ನೀಡುತ್ತಿಲ್ಲ, ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಅದಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ಬಂದ್ಗೆ ಕರೆ ನೀಡಲಾಗಿದೆ.












Click it and Unblock the Notifications