KSRTC Bus: ದೀಪಾವಳಿಗೆ KSRTCಯಿಂದ 2000 ಹೆಚ್ಚುವರಿ ವಿಶೇಷ ಬಸ್, ಎಲ್ಲಿಂದ ಎಲ್ಲಿಗೆ...
ಬೆಂಗಳೂರು, ಅಕ್ಟೋಬರ್ 27: ಬೆಳಕಿನ ಹಬ್ಬ ದೀಪಾವಳಿ ಹಬ್ಬದಾಚರಣೆಗೆ ರಾಜ್ಯಾದ್ಯಂತ ಭರ್ಜರಿ ತಯಾರಿ ನಡೆದಿದೆ. ಹಬ್ಬಕ್ಕೆ ಉದ್ಯೋಗ ಸ್ಥಳದಿಂದ ತಮ್ಮೂರಿಗೆ ತೆರಳುವವರಿಗೆ ಅನುಕೂಲವಾಗಲೆಂದು ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ ವಿಶೇಷ ಬಸ್ಗಳನ್ನು ಓಡಿಸಲು ತೀರ್ಮಾನಿಸಿದೆ. ಹಾಗಾದರೆ ಯಾವ ದಿನಾಂಕದಂದು ಬಸ್ಗಳ ಲಭ್ಯತೆ, ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಇದೇ ಅಕ್ಟೊಬರ್ 31 ರಂದು ನರಕ ಚತುರ್ದಶಿ ಇದೆ. ಮರದುನ ನವೆಂಬರ್ 01ಕ್ಕೆ ಕನ್ನಡ ರಾಜ್ಯೋತ್ಸವದಂದು ಬಲಿಪಾಡ್ಯಮಿ ಹಬ್ಬ ಇದೆ. ಹೀಗಾಗಿ ನವೆಂಬರ್ 02ವರೆಗೆ ಸಾರ್ವಜನಿಕ ಓಡಾಟ ಇರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೊಬರ್ 30ರಿಂದ ನವೆಂಬರ್ 1ರವರೆಗೆ ಹಾಗೂ ನಂತರ ನೆವೆಂಬರ್ 2ರಿಂದ ನವೆಂಬರ್ 4ರವರೆಗೆ ಕೆಎಸ್ಆರ್ಟಿಸಿಯ 2000 ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ.

ಈ ವಿಶೇಷ ಸಾರಿಗೆ ಬಸ್ಗಳು ನವೆಂಬರ್ 03.11.2024 ಮತ್ತು 04.11.2024 ರಂದು ರಾಜ್ಯ ಮತ್ತು ಹೊರ ರಾಜ್ಯಗಳಿಂದ ರಾಜಧಾನಿ ಬೆಂಗಳೂರಿಗೆ ಬರಲಿವೆ ಎಂದು ನಿಗಮದ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಎಲ್ಲಿಂದ ಎಲ್ಲೆಲ್ಲಿಗೆ ಕಾರ್ಯಾಚರಣೆ?
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರಿ, ಬೀದರ್ ಹಾಸನ, ಮಂಗಳೂರು, ಕುಂದಾಪುರ, ಗೋಕರ್ಣ, ಶಿರಸಿ, ಕಾರವಾರ, ತಿರುಪತಿ, ವಿಜಯವಾಡ, ಹೈದರಾಬಾದ್ ಇನ್ನಿತರ ಸ್ಥಳಗಳಿಗೆ ಪ್ರಯಾಣಿಕರನ್ನು ಈ ಬಸ್ ಹೊತ್ತು ಹೋಗಲಿವೆ. ಅಲ್ಲಿಂದ ಪುನಃ ಮರಳಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ಮಾಡಲಾಗುತ್ತದೆ.
ಕರ್ನಾಟಕ ಮಾತ್ರವಲ್ಲದೇ, ನೆರೆಯ ಕೇರಳ, ತಮಿಳುನಾಡು ಕಡೆಗೆ ಬಸ್ ಸಂಚರಿಸಲಿವೆ. ಈ ರಾಜ್ಯಗಳಲ್ಲಿ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ಪಾಲಕ್ಕಾಡ್, ತ್ರಿಶೂರ್, ತಿರುಚಿ, ಎರ್ನಾಕುಲಂ ಮೊದಲಾದ ದೂರದ ಸ್ಥಳಗಳಿಗೆ ಕರ್ನಾಟಕದಿಂದ ತೆರಳಲಿವೆ, ಅಲ್ಲಿಂದ ರಾಜ್ಯಕ್ಕೆ ಮರಳಲಿವೆ.
ಆನ್ಲೈನ್ ಟಿಕೆಟ್ ಬುಕ್ಕಿಂಗ್ ಶುರು
ನೆರೆಯ ರಾಜ್ಯಗಳಿಗೆ ನಗರದ ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಸೇವೆ ಆರಂಭಿಸಲಿವೆ. ಸಾರ್ವಜನಿಕರು ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭಿಸಲಾಗಿದೆ.
ಪ್ರಯಾಣಿಕರು ಆನ್ಲೈನ್ ಮೂಲಕ ಈ ಅಧಿಕೃತ ವೆಬ್ಸೈಟ್ ನಲ್ಲಿ https://ksrtc.in/ ಬಸ್ ಟಿಕೆಟ್ ಕಾಯ್ದಿರಿಸಬೇಕು. ತಾವು ನಿಲ್ದಾಣಗಳಿಗೆ ತೆರಳುವ ಮುನ್ನ ಹತ್ತಬೇಕಾದ ಬಸ್ ನಿಲ್ದಾಣ/ಪಿಕ್ಅಪ್ ಪಾಯಿಂಟ್ನ ಹೆಸರನ್ನು ನಮೂದಿಸಬೇಕು ಎಂದು ನಿಗಮ ತಿಳಿಸಿದೆ.

ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ ಅವರಿಗೆ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಅದೇ ಪ್ರಯಾಣಿಕರು ಎರಡು ಕಡೆಗೆ ದ್ವಿಮುಖ ಪ್ರಯಾಣದ ಟಿಕೆಟ್ ಕಾಯ್ದಿರಿಸಿದರೆ ಅವರಿಗೆ ಟಿಕೆಟ್ ದರದಲ್ಲಿ ಶೇಕಡಾ 10ರಷ್ಟು ಡಿಸ್ಕೌಂಟ್ ಸಿಗಲಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೇ, ರಾಜ್ಯಗಳಾದ ತಮಿಳುನಾಡು, ಗೋವಾ, ಮಹಾರಾಷ್ಟ್ರ, ಪುದುಚೇರಿ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳದ ಪ್ರಮುಖ ನಗರಗಳಲ್ಲಿ KSRTC ಮುಂಗಾಡ ಟಿಕೆಟ್ ಬುಕ್ಕಿಂಗ್ಗೆ ಕೌಂಟರ್ಗಳು ಇವೆ. ಅಲ್ಲಿಂದ ನೀವು ಆಸನ ಕಾಯ್ದಿರಿಸಬಹುದು.
ಹಬ್ಬದ ಪ್ರಯುಕ್ತ ಸಂಚರಿಸಲಿರುವ ಈ ಹೆಚ್ಚುವರಿ ವಿಶೇಷ ಬಸ್ಗಳು, ಹೊರಡುವ ಸ್ಥಳ ಹಾಗೂ ವೇಳಾಪಟ್ಟಿ ವಿವರಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದೆ. ಸಾರ್ವಜನಿಕರು ಇದರ ಮಾಹಿತಿ ಪಡೆದು ಆಸನ ಕಾಯ್ದಿರಿಸಬಹುದು. ಇನ್ನೂ ರಾಜ್ಯದ ತಾಲೂಕು, ಜಿಲ್ಲಾ ವ್ಯಾಪ್ತಿಯಲ್ಲಿ ಹಬ್ಬದ ವೇಳೆ ಆಯಾ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕೆ ಅನುಗುಣವಾಗಿ ವಿಶೇಷ ಬಸ್ ಕಾರ್ಯಾಚರಣೆ ನಡೆಸಲಿವೆ ಎಂದು KSRTC ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications