KSRTC Strike: ಸಾರಿಗೆ ನೌಕರರ ₹2800 ಕೋಟಿ PF ಬಾಕಿ: ಸರ್ಕಾರದಿಂದಲೇ ನೌಕರರ 'ಭವಿಷ್ಯ' ದಿವಾಳಿ, ಮುಷ್ಕರ ನಿಲ್ಲಿಸಿ..
ಬೆಂಗಳೂರು, ನವೆಂಬರ್ 26: ಕರ್ನಾಟಕದಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನಾಲ್ಕು ನಿಗಮದ ನೌಕರರು ಆರ್ಥಿಕವಾಗಿ ಜರ್ಜರಿತವಾಗಿದ್ದಾರೆ. ನೌಕರರಿಗೆ ಸಿಗಬೇಕಾದ ಕೋಟ್ಯಂತರ ರೂಪಾಯಿ 'ಭವಿಷ್ಯ ನಿಧಿ' ಹಣವನ್ನು ಸರ್ಕಾರ ನೀಡದೇ ಸತಾಯಿಸುತ್ತಿದೆ. ಸಾರಿಗೆ ನೌಕರರ ಭವಿಷ್ಯವನ್ನು ಅಧೋಗತಿಗೆ ತಳ್ಳಿದೆ. ಈ ಸಾರಿಗೆ ನಿಗಮಗಳು ಪ್ರತಿಯೊಂದಕ್ಕೂ ಸರ್ಕಾರದ ಮುಂದೆ ಹಣಕ್ಕಾಗಿ ಕೈಕಟ್ಟಿಕೊಂಡು ನಿಲ್ಲಬೇಕಿದೆ.
ರಾಜ್ಯ ಸಾರಿಗೆ ನೌಕರರ ಈ ದಯನೀಯ ಸ್ಥಿತಿಗೆ ಕಾರಣವಾಗ ಸರ್ಕಾರದ ವಿರುದ್ಧ ಬಿಜೆಪಿ ವಿಪಕ್ಷ ಆರ್. ಅಶೋಕ್ ಅವರು ಕಿಡಿ ಕಾರಿದ್ದಾರೆ. ನೌಕರರು ಯೋಜಿಸಿರುವ 'ಸಾರಿಗೆ ಮುಷ್ಕರ' (Transport Employees Strick) ನಿಲ್ಲಿಸುವಂತೆ ಆಗ್ರಹಿಸಿ ಮಂಗಳವಾರ ಅವರು ಟ್ವೀಟ್ ಮೂಲಕ ಸರ್ಕಾರದ ಮೇಲೆ ಚಾಟಿ ಬೀಸಿದ್ದಾರೆ.

ರಾಜ್ಯ ಸರ್ಕಾರದಿಂದಲೇ ಸಾರಿಗೆ ನಿಗಮಗಳು ದಿವಾಳಿ ಆಗಿದೆ. ಸಾರಿಗೆ ನೌಕರರ ಹೆಸರಿನಲ್ಲಿ ಜಮೆ ಮಾಡಬೇಕಾದ ಸುಮಾರು 2800 ಕೋಟಿ ರೂಪಾಯಿ ಭವಿಷ್ಯ ನಿಧಿ ಹಣ ಪಾವತಿಸದೇ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯ ಸಾರಿಗೆ ನೌಕರರ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ, ಸಾರಿಗೆ ನೌಕರರ ಭವಿಷ್ಯ ನಿಧಿ (PF) ಹಣ ಯಾಕೆ ಬಾಕಿ ಉಳಿಸಿಕೊಂಡಿದ್ದೀರಿ? ನಿವೃತ್ತ ನೌಕರರ ಹಿಂಬಾಕಿ ಪಾವತಿಸದೆ ಯಾಕೆ ವಿಳಂಬ ಮಾಡುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದರು.
ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಈ ಕೊಡಲೇ ಶ್ವೇತ ಪತ್ರ ಹೊರಡಿಸಿ ಸತ್ಯಾಂಶವನ್ನು ಜನರ ಮುಂದೆ ಇಡಬೇಕು. ಅಲ್ಲದೇ ಆರ್ಥಿಕ ಕಾರಣಗಳಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲು ಹೊರಟಿರುವ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸಿ ಸಂಭವನೀಯ ಮುಷ್ಕರ ನಡೆಯದಂತೆ ಮನವೊಲಿಸಬೇಕು. ಮುಷ್ಕರಿಂದ ಆಗಲಿರುವ ನಷ್ಟ, ಸಾರ್ವಜನಿಕರಿಗೆ ಆಗುವ ತೊಂದರೆ ತಡೆಯುವಂತೆ ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಭವಿಷ್ಯ ನಿಧಿ ಕಾಯ್ದೆಯ ಪ್ರಕಾರ, ಕರ್ನಾಟಕದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ವೇತನ ಜೊತೆಗೆ ಇರುವ ಭವಿಷ್ಯ ನೀಧಿ ಸೌಲಭ್ಯಕ್ಕೆ ಸರ್ಕಾರ ತನ್ನ ಪಾಲನ್ನು ನೀಡಬೇಕು. ಆದರೆ ಇದುವರೆಗೂ ವೇತನವಷ್ಟೇ ನೀಡುವ ನಾಲ್ಕು ನಿಗಮಗಳು ತಮ್ಮ ಪಾಲಿನ ಭವಿಷ್ಯ ನಿಧಿ ಹಣ ಪಾವತಿಸಿಲ್ಲ. ಇದು ನೌಕರರಿಗೆ ಆರ್ಥಿಕ ತಲೆನೋವಾಗಿ ಪರಿಣಮಿಸಿದೆ.
ಇನ್ನೂ ನೌಕರರಿಗೆ ಕಳೆದ 38 ತಿಂಗಳ ಹಿಂದೇ ವೇತನ ವೆಚ್ಚಳ ಮಾಡಲಾಯಿತು. ಆದರೆ ಆ ಹೆಚ್ಚಳವನ್ನು ನೀಡದೇ ಸುಮಾರು ಮೂರು ವರ್ಷಗಳಿಂದ ಬಾಕಿ ಉಳಸಿಕೊಂಡು ಬರಲಾಗಿದೆ. ಈ ಹಿಂಬಾಕಿ ನೀಡುವಂತೆ, ಪಿಎಫ್ಗೆ ಪಾಲು ಪಾವತಿಸುವಂತೆ ಅದೇಷ್ಟೇ ಬಾಕಿ ಕೇಳಿದರೂ ಸಹಿತ ಸಾರಿಗೆ ಇಲಾಖೆ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಸಾರಿಗೆ ನೌಕರರ ಸಂಘವು ಡಿಸೆಂಬರ್ 31ರಿಂದ ಮುಷ್ಕರ ನಡೆಸಲು ತಿರ್ಮಾನಿಸಿದೆ.
ಹೊಸ ವರ್ಷದಿಂದ ರಾಜ್ಯದಲ್ಲಿ ಬಸ್ ಸಂಚಾರ ಸ್ಥಗಿತಗೊಳ್ಳಲಿವೆ. ಜನ ಸಂಚಾರ, ಜನರ ಓಡಾಟಕ್ಕೆ ತೊಂದರೆ ಆಗಲಿದೆ. ಇದರಿಂದ ಆರ್ಥಿಕವಾಗಿಯು ರಾಜ್ಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗದಂತೆ ಆರ್.ಅಶೋಕ್ ಅವರು ತಡೆಯುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ನೌಕರರ ಜೊತೆಗೆ ಕೂತು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications