ಕೊಲ್ಲೂರು: ಪ್ರಾಮಾಣಿಕತೆ ಮೆರೆದ ಪತ್ನಿಯ ಗಂಡ ಪೊಲೀಸರ ಅತಿಥಿ
ಉಡುಪಿ,ಫೆಬ್ರವರಿ,24: ಕೊಲ್ಲೂರು ಮೂಕಾಂಬಿಕಾ ದೇವಿಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮಂಗಳವಾರ ಆತನನ್ನು ದೇಗುಲಕ್ಕೆ ಕರೆತಂದು ಕಪಾಟಿನಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ಸ್ವತ್ತುಗಳ ಮಹಜರು ನಡೆಸಿದ್ದಾರೆ.
ಕೊಲ್ಲೂರು ದೇವಾಲಯದ ಸೇವಾ ಕೌಂಟರಿನಲ್ಲಿ ಕೆಲಸಮಾಡುತ್ತಿದ್ದ ಶಿವರಾಮ್ ಮಡಿವಾಳ ಕೊಲ್ಲೂರು ಮೂಕಾಂಬಿಕೆ ದೇವಿಯ ಆಭರಣ ಕದ್ದು ಪರಾರಿಯಾಗಿದ್ದನು. ಈ ವಿಷಯ ತಿಳಿದ ಆತನ ಪತ್ನಿ ಒಡವೆಗಳನ್ನು ಹಿಂದಿರುಗಿಸಿರುವ ಘಟನೆ ಫೆಬ್ರವರಿ 22ರಂದು ವರದಿಯಾಗಿತ್ತು.[ಕಳ್ಳನ ಹೆಂಡತಿಯ ಪ್ರಾಮಾಣಿಕತೆ. ಅಪರಾಧ ವರದಿಯಲ್ಲಿ ಒಂದು ನೀತಿ ಕತೆ]
ಶಿವರಾಮ್ ಕದ್ದ ಒಡವೆ ಎಲ್ಲಿ ಇಟ್ಟಿದ್ದ?
20 ಲಕ್ಷ ರೂ.ಗಳಿಗೂ ಹೆಚ್ಚು ಆಭರಣಗಳನ್ನು ಕಳವುಗೈದು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಶಿವಕುಮಾರ್ ಅಡವಿಟ್ಟಿರುವ ಮಾಹಿತಿ ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಲಭ್ಯವಾಗಿದೆ. ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಪ್ರಬಂಧಕರನ್ನು ಸಂಪರ್ಕಿಸಿರುವ ಪೊಲೀಸರು ಶಿವರಾಮ ಅಡವಿಟ್ಟಿರುವ ಚಿನ್ನಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದರು.
ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ, ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅರ್ಚಕರಾದ ಡಾ| ಕೆ.ಎನ್. ನರಸಿಂಹ ಅಡಿಗ, ಮಂಜುನಾಥ ಅಡಿಗ, ಅಧೀಕ್ಷಕ ರಾಮಕೃಷ್ಣ ಅಡಿಗ, ಸಬ್ ಇನ್ಸ್ ಪೆಕ್ಟರ್ ಶೇಖರ, ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ ಹಾಗೂ ದೇವಸ್ಥಾನದ ಸಿಬ್ಬಂದಿಯ ಸಮ್ಮುಖದಲ್ಲಿ ಮಹಜರು ನಡೆಯಿತು.[ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮೈಸೂರಿನ ಆಟೋ ಚಾಲಕ!]
2012ರ ಜುಲೈ 22ರಿಂದ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಸಮರ್ಪಿತವಾದ ಒಟ್ಟು 48 ವಿವಿಧ ಮಾದರಿಯ ಚಿನ್ನಾಭರಣಗಳನ್ನು ಆ ಕಪಾಟಿನಲ್ಲಿ ಇರಿಸಲಾಗಿತ್ತು. ಆದರೆ ಮಹಜರು ವೇಳೆ ಕೇವಲ 11 ಆಭರಣಗಳು ಮಾತ್ರ ಲಭಿಸಿವೆ. ಸುಮಾರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ ಉಳಿದ ಚಿನ್ನಾಭರಣಗಳನ್ನು ಶಿವರಾಮ ಬ್ಯಾಂಕ್ಗಳಲ್ಲಿ ಅಡವಿಟ್ಟಿದ್ದಾನೆ.
ಶಿವರಾಮ್ ಒಡವೆ ಕದ್ದದ್ದು ಏಕೆ?
ಸಾಲದ ಹಣದ ಬಡ್ಡಿ ಪಾವತಿ ಮಾಡಲು ಮತ್ತೆ ಮತ್ತೆ ಆಭರಣ ಕಳವುಗೈಯುತ್ತಿದ್ದ ಎನ್ನಲಾಗಿದೆ. ದೇಗುಲದಲ್ಲಿ ಉಳಿದಿರುವ ಆಭರಣಗಳ ಲೆಕ್ಕಾಚಾರ ಮಾಡಿದಾಗ ಆತ ಬ್ಯಾಂಕ್ಗಳಲ್ಲಿ ಅಡವಿಟ್ಟಿರುವ ಆಭರಣಗಳ ಮೌಲ್ಯವು ಹೆಚ್ಚಿರುವುದಾಗಿ ಪೊಲೀಸ್ ವರದಿ ತಿಳಿಸಿದೆ.
ಶಿವರಾಮ್ ಮಾಧ್ಯಮದವರಿಗೆ ಹೇಳಿದ್ದೇನು?
ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಮ, 'ಒತ್ತಡದ ಕಾರಣ ಕೃತ್ಯ ಎಸಗಿದ್ದೇನೆ. ನನ್ನೊಂದಿಗೆ ಹಲವು ಮಂದಿ ಕೈಜೋಡಿಸಿದ್ದಾರೆ. ಸಮಸ್ಯೆ ಎದುರಾದರೆ ಅವರು ನೆರವಿಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ನನ್ನನ್ನು ಸಿಲುಕಿಸಿದ್ದಾರೆ.ದೇವಿಯ ಸನ್ನಿಧಿಯಲ್ಲೇ ಇಂತಹ ಕೃತ್ಯ ಎಸಗಲು ನನಗೆ ಪ್ರೇರಣೆ ನೀಡಿದವರ ಹೆಸರನ್ನು ಬಯಲು ಮಾಡುತ್ತೇನೆ' ಎಂದು ತಿಳಿಸಿದ್ದಾನೆ.[ಚಿನ್ನದ ಹೂಡಿಕೆಗೆ ಇದು ಸಕಾಲವೇ?]
ಅಡಗಿಸಿ ಇಟ್ಟಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 2ನೇ ಸ್ಥಾನದಲ್ಲಿರುವ ಕೊಲ್ಲೂರು ದೇಗುಲದ ವ್ಯವಹಾರ ಹಾಗೂ ಭದ್ರತೆಯ ಜವಾಬ್ದಾರಿ ಹೊಂದಿರುವ ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯು ಎಡವಿರುವುದು ಸ್ಪಷ್ಟವಾಗುತ್ತದೆ.