ಅಬ್ಬಾ! ಕೊನೆಗೂ ಕೋಲಾರ -ಸಿಬಿ ಪುರ ರೈಲು ಬಿಡ್ತಾರಂತೆ
ಶಿಡ್ಲಘಟ್ಟ, ನ.5: ಕೋಲಾರದ ಸಂಸದ ಕೆಎಚ್ ಮುನಿಯಪ್ಪ ಅವರು ರೈಲ್ವೆ ಸಚಿವರಾಗಿದ್ದ ಕಾಲದಲ್ಲೂ ಜಾರಿಯಾಗದ ಕೋಲಾರ -ಚಿಕ್ಕಬಳ್ಳಾಪುರ ರೈಲು ಯಾನಕ್ಕೆ ಹಾಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಶುಕ್ರವಾರ ಹಸಿರು ಬಾವುಟ ತೋರಲಿದ್ದಾರೆ. ತನ್ಮೂಲಕ ಅಖಂಡ ಕೋಲಾರದ ಜನತೆ ಮೂರ್ನಾಲ್ಕು ದಶಕಗಳಿಂದ ಕಾಣುತ್ತಿದ್ದ ಕನಸು ನನಸಾಗುತ್ತಿದೆ. ಬಹುಶಃ ಈ ಎರಡೂ ವಾಕ್ಯಗಳೇ ಸಾಕಾದೀತು ಕೋಲಾರ -ಸಿಬಿ ಪುರ ರೈಲು ಕಥೆಯನ್ನು ಹೇಳಲು.

ನವೀಕೃತ ಬ್ರಾಡ್ ಗೇಜ್ ರೈಲು ಮಾರ್ಗ ಕಾಮಗಾರಿ ಮುಗಿದಿದ್ದು ಪ್ರಯೋಗಾರ್ಥ ಸಂಚಾರ ಇದೇ ನವೆಂಬರ್ 8ರಂದು ನಡೆಯಲಿದೆ. ಕೋಲಾರ- ಶ್ರೀನಿವಾಸಪುರ- ಚಿಂತಾಮಣಿ- ಶಿಡ್ಲಘಟ್ಟ ಮಾರ್ಗವಾಗಿ ಚಿಕ್ಕಬಳ್ಳಾಪುರವನ್ನು ಸಂಪರ್ಕಿಸುವ ರೈಲು ಮಾರ್ಗ ಇದಾಗಿದೆ. South-Western Railway ಈ ಬ್ರಾಡ್ ಗೇಜ್ ರೈಲು ಮಾರ್ಗವನ್ನು ಪೂರ್ಣಗೊಳಿಸಿದೆ.
ರಾಜ್ಯೋತ್ಸವದ ಕೊಡುಗೆಯಾಗಿ ನ. 8ರಂದು ಕೇಂದ್ರ ರೈಲ್ವೆ ಸಚಿವ ಖರ್ಗೆ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಿ, ಅದೇ ರೈಲಿನಲ್ಲಿ ಕೋಲಾರಕ್ಕೆ ಪ್ರಯಾಣ ಮಾಡಿ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಕೋಲಾರ -ಸಿಬಿ ಪುರ ನಡುವಣ 87 ಕಿಮೀ ದೂರದ ನ್ಯಾರೋಗೇಜ್ ರೈಲು ಮಾರ್ಗವನ್ನು 99 ಕೋಟಿ ರೂ ವೆಚ್ಚದಲ್ಲಿ ಬ್ರಾಡ್ ಗೇಜ್ ಗೆ ಪರಿವರ್ತಿಸಲು 2006-07ರಲ್ಲಿ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿತ್ತು. 2 ಬಾರಿ ಯೋಜನಾ ವೆಚ್ಚ ಪರಿಷ್ಕೃತಗೊಂಡು ಈಗ 440 ಕೋಟಿ ರೂ. ಗೆ ವೆಚ್ಚವಾಗಿದೆ. ಮಾರ್ಗಮಧ್ಯೆ ಇನ್ನೂ ಕೆಲವೆಡೆ ಸ್ಟೇಷನ್ ನಿರ್ಮಾಣ, ಸೌಲಭ್ಯಗಳ ಬೇಡಿಕೆ ಈಡೇರಿಕೆಗೆ ಇನ್ನೂ 50 ಕೋಟಿ ರೂ. ವೆಚ್ಚ ಮಾಡಬೇಕಾದ ಅಗತ್ಯವಿದೆ.












Click it and Unblock the Notifications