KH Muniyappa: ಎಚ್ಡಿಕೆ 'ದಾರಿ ತಪ್ಪಿದ ಮಾತು' ಕಾಂಗ್ರೆಸ್ಗೆ ಅಸ್ತ್ರ: ಬಿಜೆಪಿ ಗ್ಯಾರಂಟಿ ವಿರುದ್ಧ ಕೆಹೆಚ್ ಮುನಿಯಪ್ಪ ಕಿಡಿ
ದೇವನಹಳ್ಳಿ ಏಪ್ರಿಲ್ 14: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕುರಿತು ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿದೆ. ಈ ಗ್ಯಾರಂಟಿ ಬಗ್ಗೆ ವಿಪಕ್ಷಗಳು ವಾಗ್ದಾಳಿ ಶುರು ಮಾಡಿವೆ.
ದೇವನಹಳ್ಳಿ ತಾಲೂಕಿನ ಭಟ್ರೆನಹಳ್ಳಿಯಲ್ಲಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ.ಎಚ್. ಮುನಿಯಪ್ಪ ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿ ಪ್ರಣಾಳಿಕೆ ಬಗ್ಗೆ ಮಾತನಾಡಿದ ಅವರು, 'ಮುದ್ರಾ ಯೋಜನೆ ಮಾಡಿ ರೈತರು ಸೇರಿದಂತೆ ಯಾರಿಗೂ ಏನು ಪ್ರಯೋಜನವಾಗಿಲ್ಲ. ಜನರಿಂದ ಬ್ಯಾಂಕ್ ಅಕೌಂಟ್ ಒಪನ್ ಮಾಡಿಸಿದ್ರು. ಸಾಲ ಕೊಡುವುದು ಹೋಗಲಿ ಅಕೌಂಟ್ ಒಪನ್ ಮಾಡಿದ ಹಣವು ವಾಪಸ್ ಬರಲಿಲ್ಲ. ಇಂತಹ ಕಾರ್ಯಕ್ರಮಗಳನ್ನ ಬಿಜೆಪಿಯವರು ಮಾಡಿದ್ದಾರೆ' ಎಂದು ಟೀಕಿಸಿದ್ದಾರೆ.

'ದೇಶದ ಜನರಿಗೆ ಗೊತ್ತಾಗಿದೆ ಬಹಳ ದಿನ ಜನರಿಗೆ ವಂಚನೆ ಮಾಡಲು ಆಗಲ್ಲ. ಧರ್ಮ ಒಂದು ಕಡೆ ಇರುತ್ತೆ ಧರ್ಮಕ್ಕೆ ಜಯ ಇರುತ್ತೆ' ಎಂದು ವಾಗ್ದಾಳಿ ಮಾಡಿದರು. ಇನ್ನೂ ಇದೇ ವೇಳೆ ಕುಮಾರಸ್ವಾಮಿ ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಅನ್ನೂ ಹೇಳಿಕೆ ವಿಚಾರವಾಗಿ ಮಾತನಾಡಿದ ಕೆ.ಹೆಚ್. ಮುನಿಯಪ್ಪ, 'ಮಹಿಳೆಯರು ಏನ್ ದಾರಿ ತಪ್ತಿದ್ದಾರೆ ಅಂತ ಕುಮಾರಸ್ವಾಮಿಯನ್ನೆ ಕೇಳಬೇಕು' ಎಂದು ತಿರುಗೇಟು ಕೊಟ್ಟಿದ್ದಾರೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕೊಟ್ಟ ಹೇಳಿಕೆಯನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಎಚ್ಡಿ ಕುಮಾರಸ್ವಾಮಿ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇನ್ನೂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಯನ್ನು ವಿರೋಧಿಸಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರು, ಸಂಸದರು, ಎಮ್ಎಲ್ಸಿ ಗಳ ಸಭೆ ಕರೆದಿದ್ದಾರೆ. ಶಾಸಕರ ಅಭಿಪ್ರಾಯ ಪಡೆದು ಹೋರಾಟ ರೂಪಿಸಲು ಸಭೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.
'ಹಳ್ಳಿಯ ತಾಯಂದಿರು ದಾರಿತಪ್ಪಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿರುವುದು ಮಹಿಳೆಯರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಹೀಗಾಗಿ ನಾಳೆ ಮತ್ತು ನಾಡಿದ್ದು ಉಗ್ರ ಹೋರಾಟ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುವ ಮಹಿಳೆಯರ ಮನಸ್ಸಿಗೆ ಎಚ್ಡಿಕೆ ಘಾಸಿ ಮಾಡಿದ್ದು, ನಾಡಿಗೆ ಅವಮಾನವಾಗಿದೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಿಂದ ಮಹಿಳೆಯರು ತೀರ್ಥ ಯಾತ್ರೆಗೆ ಹೋಗುತ್ತಿದ್ದಾರೆ, ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ, ತಂದೆ- ಅಣ್ಣನ ಮನೆಗೆ ಹೋಗುತ್ತಿದ್ದಾರೆ. ಮಾತ್ರವಲ್ಲ ಫ್ರಿಡ್ಜ್, ಟಿವಿ, ಮಕ್ಕಳ ಫೀಸ್ ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಇದರಲ್ಲಿ ದಾರಿ ತಪ್ಪುವುದು ಏನಿದೆ? ಎಚ್ಡಿ ಕುಮಾರಸ್ವಾಮಿ ಹೇಳಿಕೆಯ ಅರ್ಥವೇನು? ಹಳ್ಳಿ ಭಾಷೆಯಲ್ಲಿ 'ದಾರಿ ತಪ್ಪಿದ್ದಾರೆ' ಅಂದರೆ ಕೆಟ್ಟ ಶಬ್ದವಾಗುತ್ತದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.












Click it and Unblock the Notifications