ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ!
ಐಎಎಸ್ ಅಧಿಕಾರಿಗಳ ಮೇಲೆ ಕಿರುಕುಳ ಆರೋಪಿಸಿ ಕೆಎಎಸ್ ಅಧಿಕಾರಿ ಕೆ. ಮಥಾಯಿ ಅವರು ಬುಧವಾರ (ಮೇ 24)ದಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು, ಮೇ 24: ಐಎಎಸ್ ಅಧಿಕಾರಿಗಳ ಮೇಲೆ ಕಿರುಕುಳ ಆರೋಪಿಸಿ ಕೆಎಎಸ್ ಅಧಿಕಾರಿಯೊಬ್ಬರು ಬುಧವಾರ(ಮೇ 24)ದಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ನಾಲ್ವರು ಐಎಎಸ್ ಅಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸಿದ್ದೇನೆ ಎಂದು ಸಕಾಲ ನಿರ್ದೇಶಕ ಕೆಎಎಸ್ ಅಧಿಕಾರಿ ಕೆ. ಮಥಾಯಿ ಅವರು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ನೀಡಿದರು.
ಐಎಎಸ್ ಅಧಿಕಾರಿಗಳಾದ ಟಿ.ಕೆ.ಅನಿಲ್ ಕುಮಾರ್, ಡಾ. ಕಲ್ಪನಾ, ರಮಣರೆಡ್ಡಿ ಮತ್ತು ಲಕ್ಷ್ಮೀ ನಾರಾಯಣ್ ವಿರುದ್ಧ ಆರೋಪ ಹೊರೆಸಲಾಗಿದೆ.

ಮಥಾಯ್ ಅವರು ಕಳೆದ 9 ವರ್ಷದ ಅವಧಿಯಲ್ಲಿ 29ಕ್ಕೂ ಹೆಚ್ಚು ಬಾರಿ ವರ್ಗಾವಣೆಯಾಗಿದ್ದಾರೆ. ಬಿಬಿಎಂಪಿ ಮತ್ತು ಮಂಡ್ಯದ ಮೂಡಾದಲ್ಲಿನ ಬಹುಕೋಟಿ ಹಗರಣಗಳನ್ನು ಬೆಳಕಿಗೆ ತಂದಿದ್ದರು. ಈ ಬಗ್ಗೆ ಸಿಎಂ ಮತ್ತು ಕಾನೂನು ಸಚಿವ ಜಯಚಂದ್ರಗೆ 101 ಪುಟಗಳ ವರದಿಯನ್ನೂ ಸಹ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಲೇ ಇಲ್ಲ.
ದೂರಿನಲ್ಲಿ ಏನಿದೆ? : ಹಿರಿಯ ಅಧಿಕಾರಿಗಳು ವಿನಾ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ, ಓಡಾಡಲು ಸರ್ಕಾರಿ ವಾಹನ ನೀಡಿಲ್ಲ. ಬಾಡಿಗೆ ವಾಹನದಲ್ಲಿ ಓಡಾಡಿದರೂ ಅದಕ್ಕೆ ಹಣ ಪಾವತಿ ಮಾಡಿಲ್ಲ. ಕಚೇರಿಗೆ 5 -10 ನಿಮಿಷ ತಡವಾಗಿ ಬಂದಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಕಳೆದ 4 ತಿಂಗಳಲ್ಲಿ 6 ಕಡೆ ವರ್ಗಾವಣೆ ಮಾಡಲಾಗಿದೆ, ಸರಿಯಾಗಿ ವೇತನ ನೀಡುತ್ತಿಲ್ಲ. ಅಧಿಕಾರಿಗಳು ನನ್ನನ್ನು ಕೆಲಸದಿಂದ ಅಮಾನತ್ತು ಮಾಡಲು ಹುನ್ನಾರ ನಡೆಸುತ್ತಿದ್ದಾರೆ.
ಸೂಕ್ತ ದಾಖಲಾತಿಗಳೊಂದಿಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದೇನೆ ಎಂದು ಮಥಾಯ್ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿಯ ವಿರುದ್ದ ಕೆಎಎಸ್ ಅಧಿಕಾರಿಯೊಬ್ಬರು ದೂರು ದಾಖಲಿಸಿದ ಮೊದಲ ಪ್ರಕರಣ ಇದಾಗಿದೆ.












Click it and Unblock the Notifications