ಕಾರವಾರ: ಲಂಚ ಪಡೆಯುಲು ಹೋಗಿ ಎಸಿಬಿಗೆ ಬಲೆಗೆ ಬಿದ್ದ ಅಗ್ನಿಶಾಮಕ ಅಧಿಕಾರಿ
ಕಾರವಾರ, ಆಗಸ್ಟ್ 4: ಲಂಚ ಪಡೆಯುತ್ತಿದ್ದ ವೇಳೆ ಉತ್ತರ ಕನ್ನಡ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶ್ರೀನಿವಾಸ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಶಿರಸಿ ಮೂಲದ ರಘುಪತಿ ಸುಬ್ರಾಯ ಹೆಗಡೆ ಎನ್ನುವವರು ಪಟಾಕಿ ಅಂಗಡಿಗೆ ಪರವಾನಿಗೆಗಾಗಿ ಎನ್ಒಸಿ ನವೀಕರಣ ಮಾಡಿಕೊಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಶ್ರೀನಿವಾಸ್ ಅದನ್ನು ನೀಡಲು ಕಳೆದ ಕೆಲವು ದಿನಗಳಿಂದ ಮೀನಾಮೇಷ ಎಣಿಸುತ್ತಿದ್ದರು. 10 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯನ್ನು ಕೂಡ ಇಟ್ಟಿದ್ದರು.

ರಘುಪತಿ ಅವರು ಶ್ರೀನಿವಾಸರ ಕಚೇರಿಗೆ ಸಾಕಷ್ಟು ಬಾರಿ ಅಲೆದಾಡಿದರೂ ಎನ್ಒಸಿ ನೀಡಿರಲಿಲ್ಲ. ಬಳಿಕ ಲಂಚ ನೀಡಲು ಒಪ್ಪಿ, ಇನ್ನೊಂದೆಡೆ ಎಸಿಬಿಗೆ ಮಾಹಿತಿ ನೀಡಿದ್ದರು. ರಘುಪತಿ ಅವರಿಂದ ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸ 5750 ರೂ. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಧಿಕಾರಿಯನ್ನು ಎಸಿಬಿಯವರು ವಶಕ್ಕೆ ಪಡೆದುಕೊಂಡಿದ್ದು, ಲಂಚದ ಹಣ, ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿ, ಜಪ್ತಿ ಮಾಡಿಕೊಂಡಿದ್ದಾರೆ. ಎಸಿಬಿ ಇನ್ಸ್ ಪೆಕ್ಟರ್ ರಮೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶ್ರೀನಿವಾಸ್ ಅವರನ್ನು ನ್ಯಾಯಾಲಯದ ವಶಕ್ಕೆ ನೀಡುವುದಾಗಿ ರಮೇಶ್ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.












Click it and Unblock the Notifications