'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್ಡಿಕೆ
ಬೆಂಗಳೂರು, ಮೇ 23: ಬಹುಮತ ಬರದಿದ್ದರೆ ವಿರೋಧಪಕ್ಷದಲ್ಲಿ ಕೂರುತ್ತೇನೆ ಎಂದಿದ್ದೆ ಆದರೆ ರಾಜಕೀಯದ ಸಾಂಧರ್ಭಿಕ ಶಿಶುವಾಗಿ ನಾನಿಂದು ಅಧಿಕಾರ ಹಿಡಿಯುವ ಅನಿರ್ವಾರ್ಯತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಹಿಂದಿರುವ ಕಾರಣ ಹೇಳಿದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಹಿತ ದೃಷ್ಠಿಯಿಂದ ನಾನು ಮೈತ್ರಿಯ ನಿರ್ಣಯ ಕೈಗೊಳ್ಳಬೇಕಾಯಿತು, ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಹಲವು ರಾಷ್ಟ್ರ ನಾಯಕರು ಕರೆ ಮಾಡಿ ದೇಶದ ಹಿತದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು ನಾನು ಅದನ್ನು ಪಾಲಿಸಿದೆ ಎಂದು ಮೈತ್ರಿ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟರು.
ಸರ್ಕಾರದ ಕಾರ್ಯಕ್ರಮಗಳು, ನೀತಿ ನಿರೂಪಣೆ, ಪ್ರಣಾಳಿಕೆ, ಸ್ಥರ ಸರ್ಕಾರ ನೀಡಲು ತೆಗೆದುಕೊಳ್ಳುವ ನಿರ್ಣಯಗಳು, ಜಲ ವಿವಾದಗಳು, ಬಿಜೆಪಿಯ ಆರೋಪಗಳು ಎಲ್ಲ ವಿಷಯಗಳ ಬಗ್ಗೆ ಕುಮಾರಸ್ವಾಮಿ ಮಾತನಾಡಿದರು. ನೂತನ ಮುಖ್ಯಮಂತ್ರಿಗಳ ಮಾತಿನ ವಿವರ ತಿಳಿಲು ಮುಂದೆ ಓದಿ....

ಮೋದಿ ಅಶ್ವಮೇಧ ಕಟ್ಟಿಹಾಕಿದ್ದೇವೆ
ಸತತ ಗೆಲುವು ಸಾಧಿಸಿದ್ದ ಮೋದಿ ಅವರ ಅಶ್ವಮೇಧವನ್ನು ಕರ್ನಾಟಕದಲ್ಲಿ ಕಟ್ಟಿಹಾಕಿದ್ದೇವೆ, ಇಲ್ಲಿನಿಂದ ಅವರ ಪಥನ ಶುರುವಾಗುತ್ತದೆ ಎಂದ ಕುಮಾರಸ್ವಾಮಿ, ಅಮಿತ್ ಶಾ ಈಗ ಜೀವವಿಲ್ಲದ ಅಶ್ವಮೇಧದ ಕುದುರೆ ಇಟ್ಟುಕೊಂಡಿದ್ದಾರಷ್ಟೆ ಎಂದರು.

ಸಾಲಮನ್ನಾದ ಬ್ಲೂಪ್ರಿಂಟ್
ನಾನು ಸಾಲಮನ್ನಾ ಮಾಡುವ ವಚನ ನೀಡಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಾನೊಬ್ಬನೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ, ಹಾಗೆಂದು ಸಾಲಮನ್ನಾ ಮಾಡಲಾರೆ ಎಂದು ಹೇಳಲಾರೆ, ಆರ್ಥಿಕ ತಜ್ಞರ ಜೊತೆ ಮಾತನಾಡುತ್ತಿದ್ದೇನೆ, ಸಾಲಮನ್ನಾದ ಬ್ಲೂಪ್ರಿಂಟ್ ತಯಾರಿದ್ದು ಅನುಷ್ಠಾನ ಮಾಡುತ್ತೇವೆ ಸಮಯದ ಅವಶ್ಯಕತೆ ಇದೆ ಎಂದರು.

ದೇಶಕ್ಕೆ ಸಂದೇಶ ನೀಡಲು ಬಂದಿದ್ದ ನಾಯಕರು
ಇಂದಿನ ಪ್ರಮಾಣ ವಚನಕ್ಕೆ ಪ್ರಾದೇಶಿಕ ಪಕ್ಷಗಳ ಮುಖಂಡರುಗಳು ಆಗಮಿಸಿದ್ದರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಅವರು ಕೇವಲ ನಮಗೆ ಶುಭ ಹಾರೈಸಲು ಬಂದಿರಲಿಲ್ಲ, ಕರ್ನಾಟಕದ ಮೂಲಕ ದೇಶಕ್ಕೆ ಒಂದು ಸಂದೇಶ ನೀಡಬೇಕಿತ್ತು ಹಾಗಾಗಿ ಬಂದಿದ್ದರು, ಅವರು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದರು.

ಸಾಂಧರ್ಭಿಕ ಶಿಶು ನಾನು
ಪ್ರಚಾರ ಸಮಯದಲ್ಲಿ ಬಹುಮತ ಬರದಿದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇನೆ ಎಂದು ಹೇಳಿದ್ದೆ ಆದರೆ ನಾನು ಇಲ್ಲಿ 'ಸಾಂದರ್ಭಿಕ ಶಿಶು' ಆಗಿದ್ದೇನೆ ಎಂದರು. ರಾಷ್ಟ್ರ ಮಟ್ಟದ ಸಮಾನ ಮನಸ್ಕ ನಾಯಕರು ಫಲಿತಾಂಶ ಕೂಡಲೇ ಮೈತ್ರಿ ಸಲಹೆ ನೀಡಿದರು, ದೇಶವನ್ನು ಕಾಪಾಡುವ ದೃಷ್ಠಿಯಿಂದ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಹೋಗಿದ್ದೇನೆ ಎಂದು ಅವರು ಹೇಳಿದರು.

ನನ್ನಿಂದಲೇ ಬಿಜೆಪಿಗೆ ಅಧಿಕಾರ ದೊರೆಯಿತು
12 ವರ್ಷಗಳ ಹಿಂದೆ ನಾನೇ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಒಡೆದಿದ್ದೆ, ಈಗ ಕಾಂಗ್ರೆಸ್-ಜೆಡಿಎಸ್ ನಡುವೆ ವಿಶ್ವಾಸ ಮೂಡುತ್ತದೆಯಾ? ಎಂಬ ಅನುಮಾನ ಜನರಲ್ಲಿದೆ. ಅತ್ಯಂತ ಸುಭದ್ರವಾದ ಸರ್ಕಾರವಾಗಿ ನಡೆಯುತ್ತದೆ, ಭಿನ್ನಾಬಿಪ್ರಾಯಗಳಿಗೆ ಅವಕಾಶ ಕೊಡದೆ, ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಲಿದೆ. ಆಗ ನಾನು ಮಾಡಿದ ಕಾರ್ಯದಿಂದಲೇ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು, ಬಿಜೆಪಿ ತಾನು ಬೆಳೆಯಲು ನನ್ನನ್ನು ಬಳಸಿಕೊಂಡಿತು ಎಂದರು ಕುಮಾರಸ್ವಾಮಿ.

ಇಬ್ಬರು ಪ್ರಣಾಳಿಕೆಯೂ ಜಾರಿಗೆ
ಕಾಂಗ್ರೆಸ್-ಜೆಡಿಎಸ್ ಇಬ್ಬರ ಪ್ರಣಾಳಿಕೆಯನ್ನೂ ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಈಗಾಗಲೇ ತಂದಿರುವ ಜನಪ್ರಿಯ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದರು. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮುಂದುವರೆಯುವ ಪೂರ್ಣ ಲಕ್ಷಣ ಇದೆ.

ಮುಖ್ಯಮಂತ್ರಿ ಕಚೇರಿ ತೆರೆದ ಬಾಗಿಲು
ಗ್ರಾಮ ವಾಸ್ಥವ್ಯ, ಜನತಾ ದರ್ಶನ ಮುಂದುವರೆಸುತ್ತೇನೆ ಎಂದು ನೂತನ ಮುಖ್ಯಮಂತ್ರಿಗಳು. ಮುಖ್ಯಮಂತ್ರಿ ಕಚೇರಿ ಬಾಗಿಲೂ ಸದಾ ತೆರೆದಿರುತ್ತದೆ, ಮಾಧ್ಯಮದವರಲ್ಲಿ ವಿಶೇಷ ಮನವಿ ಮಾಡಿದ ಕುಮಾರಸ್ವಾಮಿ ಅವರು ತಪ್ಪಿದ್ದರೆ ನೇರವಾಗಿ ಕಚೇರಿಗೆ ಬಂದು ಪ್ರಶ್ನಿಸಬಹುದು ಸಲಹೆ ನೀಡಬಹುದು ಎಂದರು.

ಡಿ.ಕೆ.ಶಿವಕುಮಾರ್ಗೆ ಅಸಮಾಧಾನ ಇಲ್ಲ
ಡಿ.ಕೆ.ಶಿವಕುಮಾರ್ ವಿಷಯದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಅವರಿಗೆ ಅಸಮಾಧಾನ ಎಂಬ ಸುದ್ದಿ ಸುಳ್ಳು ಅವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲೇ ಇದ್ದರು ಎಂದರು. ಉಪಮುಖ್ಯಮಂತ್ರಿ ಪರಮೇಶ್ವರ್ ಬಗ್ಗೆ ಮಾತನಾಡಿದ ಅವರು, ಪರಮೇಶ್ವರ್ ನನ್ನ 10 ವರ್ಷದ ಗೆಳೆಯ. ಅವರಷ್ಟು 'ಅಡ್ಜೆಸ್ಟೆಬಲ್' ವ್ಯಕ್ತಿ ಯಾರೂ ಇಲ್ಲ, ಈಗಾಗಲೇ ನಾವು ಹಲವು ದಿನದಿಂದ ಚರ್ಚೆ ನಡೆಸಿದ್ದೇವೆ, ನಮ್ಮ ನಡುವೆ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ ಎಂದರು.

ಟೀಕೆ ಮಾಡುವ ಖಾವಿಧಾರಿಗಳು ರಾಜಕೀಯಕ್ಕೆ ಬರಲಿ
ರಾಜಕೀಯ ಟೀಕೆಗಳನ್ನು ಮಾಡುವ ಸ್ವಾಮೀಜಿಗಳ ಬಗ್ಗೆ ತೀವ್ರ ಆಕ್ರೋಶ ಪ್ರಕಟಿಸಿದ ಮುಖ್ಯಮಂತ್ರಿಗಳು, ರಾಜಕೀಯವಾಗಿ ಟೀಕೆ ಮಾಡುವ ಖಾವಿಧಾರಿಗಳು ಮಠ ಬಿಟ್ಟು ಚುನಾವಣೆಗೆ ಬರಲಿ ಎಂದರು. ಸ್ವಾಮೀಜಿಗಳ ಕಾರ್ಯ ಟೀಕೆ ಮಾಡುವುದಲ್ಲ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವುದು ಎಂದು ಅವರು ಹೇಳಿದರು.

ಮೋದಿ ಸುಳ್ಳು ಹೇಳಿ ಹೋಗಿದ್ದಾರೆ
ಮೋದಿ ಅವರು ಚುನಾವಣೆ ನಂತರ ಮಹದಾಯಿ ವಿವಾದ ಬಗೆಹರಿಸುತ್ತೇನೆ ಎಂದಿದ್ದರು. ಇಲ್ಲಿಗೆ ಬಂದಿದ್ದಾಗ ಮಹದಾಯಿ ಬಗ್ಗೆ ಸುಳ್ಳು ಹೇಳಿದ್ದರು ಅವರ ಕೈಲಿ ಅಧಿಕಾರ ಇದ್ದಾಗ ಮಹದಾಯಿ ಬಗ್ಗೆ ಏನೂ ಮಾಡಲಿಲ್ಲ ಈಗ ಟ್ರಿಬ್ಯುನಲ್ ತೀರ್ಪು ಬರುವವರೆಗೆ ಕಾಯಲೇ ಬೇಕಾಗಿದೆ. ತೀರ್ಪು ಬಂದ ನಂತರ ಸರ್ಕಾರ ಏನು ಮಾಡಬೇಕಾಗುತ್ತದೆಯೋ ಅದನ್ನು ಮಾಡುತ್ತೇವೆ ಸರ್ಕಾರದ ನಿರ್ಣಯ ರೈತರ ಪರ ಇರುತ್ತದೆ ಎಂದನು.

ವೀರಶೈವ-ಲಿಂಗಾಯತದ ಬಗ್ಗೆ ಮಾತನಾಡಲಿಲ್ಲ
ಲಿಂಗಾಯತ-ವೀರಶೈವ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನೂತನ ಮುಖ್ಯಮಂತ್ರಿ, ವೀ-ಲಿಂಗಾಯತ ವಿವಾದಕ್ಕಿಂತಲೂ ದೊಡ್ಡ ಸಮಸ್ಯೆ ನನ್ನ ಮುಂದಿದೆ, ಜನರ ಸಮಸ್ಯೆಯೇ ನನಗೆ ದೊಡ್ಡದು ಎಂದು ಜಾಣ್ಮೆಯ ಉತ್ತರ ನೀಡಿದರು. ಎರಡೂ ಕಡೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ ಎಂದರು.

ರಾಹುಲ್, ಸೋನಿಯಾಗೆ ಧನ್ಯವಾದ
ತಮಗೆ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಗುಲಾಂ ಸಬಿ ಆಜಾದ್ ಅವರಿಗೆ ಧನ್ಯವಾದ ಅರ್ಪಿಸಿದ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರಾದ ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದ ಹೇಳಿದರು.












Click it and Unblock the Notifications