Karnataka weather: ಸೆಪ್ಟೆಂಬರ್ 3ರಿಂದ ರಾಜ್ಯದ ಈ ಭಾಗಗಳಲ್ಲಿ ಮಳೆ
ಕರ್ನಾಟಕ, ಆಗಸ್ಟ್, 29: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಸುಮಾರು ಎರಡ್ಮೂರು ವಾರಗಳಿಂದ ಬಿಸಿಲಿನ ಧಗೆ ದಾಖಲೆ ಮಟ್ಟದಲ್ಲು ಹೆಚ್ಚಾಗುತ್ತಲೇ ಇದೆ. ಇನ್ನು ಮುಂಗಾರು ನಂಬಿಕೊಂಡು ಬಿತ್ತನೆ ಮಾಡಿದ ಬೆಳೆಗಳೆಲ್ಲವೂ ಸೂರ್ಯನ ಶಾಖಕ್ಕೆ ಸುಟ್ಟುಹೋಗುತ್ತಿವೆ. ಹಾಗೆಯೇ ನೀರಿನ ಮೂಲಗಳು ಕೂಡ ಬತ್ತಿಹೋಗುವ ಹಂತವನ್ನು ತಲುಪಿವೆ. ಇದಕ್ಕೆಲ್ಲ ಪರಿಹಾರ ಅಂದರೆ ಮಳೆ ಬರಬೇಕಿದ್ದು, ಸೆಪ್ಟೆಂಬರ್ 3ರಿಂದ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ಸೆಪ್ಟೆಂಬರ್ 3ರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಮೈಸೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ.

ಜುಲೈ ತಿಂಗಳ ಮಧ್ಯಭಾಗದಲ್ಲಿ ಅಬ್ಬರದ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅನಾಹುತಗಳೇ ಸೃಷ್ಟಿಯಾಗಿದ್ದವು. ಅದರಲ್ಲೂ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕಾರವಾರದ ಹಲವೆಡೆ ಅಪಾರ ಹಾನಿ ಸಂಭವಿಸಿದ್ದವು. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗತ್ತು. ಆದರೆ ಆಗಸ್ಟ್ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ಈ ಭಾಗದಲ್ಲಿ ಆಗಾಗ ಜಿನುಗು ಮಳೆ ಮಾತ್ರ ಆಗುತ್ತಿದೆ.
ಮಂಗಳೂರು, ಉಡುಪಿ, ಕಾಫಿನಾಡು ಚಿಕ್ಕಮಗಳೂರು, ಹಾಸನ ಭಾಗಗಳಲ್ಲಿ ಮಾತ್ರ ಕೆಲ ದಿನಗಳ ಹಂದೆಯಷ್ಟೇ ಅಬ್ಬರದ ಮಳೆಯಾಗಿತ್ತು. ಆದರೆ ಇದೀಗ ಈ ಭಾಗಗಳಲ್ಲಿ ಆಗಾಗ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ಇನ್ನುಳಿದಂತೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿದೆ.
ಒಂದು ವೇಳೆ ಸೆಪ್ಟೆಂಬರ್ ಆರಂಭದಿಂದ ಮಳೆ ಬಾರದಿದ್ದರೆ ಬಹತೇಕ ಜಿಲ್ಲೆಗಳಲ್ಲಿ ಕೆರೆ, ಹಳ್ಳ, ಕೊಳ್ಳಗು ಬತ್ತಿಹೋಗಿ ಭರದ ಛಾಯೆ ಆವರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications