KSRTC: ಬಸ್ ನಿಲ್ಲಿಸಿ ಮುಷ್ಕರ ಮಾಡಲಿದ್ದಾರೆ ಸಾರಿಗೆ ನೌಕರರು
ಬೆಂಗಳೂರು, ನವೆಂಬರ್ 25: ಕರ್ನಾಟಕದ ನಾಲ್ಕು ಸಾರಿಗೆ ನಿಗಮದ ನೌಕರರ ಮುಷ್ಕರ ನಡೆಸಲು ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಮುಷ್ಕರ ನಡೆಯಲಿದೆ. ಬೆಳಗಾವಿಯಲ್ಲಿ ಡಿಸೆಂಬರ್ 9ರಂದು ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸಾರಿಗೆ ಸಚಿವರಿಗೆ ನೋಟಿಸ್ ನೀಡಲಾಗುತ್ತದೆ. ಸರ್ಕಾರ ಬೇಡಿಕೆಗೆ ಒಪ್ಪಿಗೆ ನೀಡದಿದ್ದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಮಾಡಲಾಗುತ್ತದೆ.
ನಾಲ್ಕು ಸಾರಿಗೆ ನಿಗಮಗಳ ನೌಕರರು ಡಿಸೆಂಬರ್ 31ರಿಂದ ಮುಷ್ಕರ ನಡೆಸಬೇಕು ಎಂದು ಈಗಾಗಲೇ ಸಾರಿಗೆ ನೌಕರರ ಒಕ್ಕೂಟದ ಅನಂತ ಸುಬ್ಬರಾವ್ ಕರೆ ಕೊಟ್ಟಿದ್ದಾರೆ. ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಆದ್ದರಿಂದ ಅಧಿವೇಶನದ ಸಂದರ್ಭ ' ಬೆಳಗಾವಿ ಚಲೋ' ನಡೆಸಿ ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ.

ಸರ್ಕಾರ ಮುಷ್ಕರದ ಬಗ್ಗೆ ಉಡಾಫೆ ತೋರಿಸಿದರೆ ಬಸ್ ಸಂಚಾರವನ್ನು ಸಂಪೂರ್ಣ ನಿಲ್ಲಿಸಿ ಮುಷ್ಕರವನ್ನು ಮಾಡಲಾಗುತ್ತದೆ. ಈ ಹಿಂದೆ ಮೂರು ದಿನ ಮುಷ್ಕರ ನಡೆಸಿದಾಗ ಸಿದ್ದರಾಮಯ್ಯ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದ್ದರಿಂದ ಈ ಬಾರಿಯೂ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಸಾರಿಗೆ ನೌಕರರು ಹೇಳಿದ್ದಾರೆ.
21 ದಿನ ಮುಂಚೆ ನೋಟಿಸ್: ಸಾರಿಗೆ ನೌಕರರು ಮುಷ್ಕರ ನಡೆಸುವ 21 ದಿನಗಳ ಮೊದಲು ಸರ್ಕಾರಕ್ಕೆ ನೋಟಿಸ್ ನೀಡಬೇಕು. ಆದ್ದರಿಂದ ಡಿಸೆಂಬರ್ 9ರಂದು ಸರ್ಕಾರಕ್ಕೆ ಮುಷ್ಕರದ ನೋಟಿಸ್ ಅನ್ನು ನೀಡಿ, ಡಿಸೆಂಬರ್ 31ರಿಂದ ಮುಷ್ಕರ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ.
ಸಾರಿಗೆ ನೌಕರರು ನಾಲ್ಕು ನಿಗದಮ ನೌಕರರ 38 ತಿಂಗಳ ಬಾಕಿ ಬಿಡುಗಡೆ, ಸಮಾನ ವೇತನ, ರಜೆ ನಗದೀಕರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ನಿವೃತ್ತ ನೌಕರರಿಗೆ ನೀಡಬೇಕಿರುವ 2020ರ ಜನವರಿ 1 ರಿಂದ 2023ರ ಫೆಬ್ರವರಿರ ತನಕ ಕೊಡಬೇಕಿರುವ ಗ್ರಾಚ್ಯುಟಿಯನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಸಾರಿಗೆ ನಿಗಮನದ ನೌಕರರಿಗೆ 2024ರ ಜನವರಿಯಲ್ಲಿಯೇ ವೇತನ ಹೆಚ್ಚಳ ಮಾಡಬೇಕಿತ್ತು. ಆದರೆ ನವೆಂಬರ್ ತಿಂಗಳು ಅಂತ್ಯವಾಗುತ್ತಾ ಬಂದರೂ ಇನ್ನೂ ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಬಾಕಿ ಬರಬೇಕಿರುವುದೇ 1750 ಕೋಟಿ ರೂ. ಇದೆ. ಗ್ರಾಚ್ಯುಟಿ ಹಣ ಸುಮಾರು 399 ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಸಾರಿಗೆ ನೌಕರರು ಬಸ್ ಸಂಚಾರ ನಿಲ್ಲಿಸಿ ಮುಷ್ಕರ ಆರಂಭಿಸಿದರೆ ಕರ್ನಾಟಕ ಸರ್ಕಾರದ ಮಹತ್ವದ 'ಶಕ್ತಿ' ಯೋಜನೆಯಡಿ ಸಂಚಾರ ನಡೆಸುವ ಮಹಿಳೆಯರಿಗೆ ತೊಂದರೆ ಉಂಟಾಗಲಿದೆ. ಅಲ್ಲದೇ ಬಿಎಂಟಿಸಿ ನೌಕರರು ಮುಷ್ಕರ ನಡೆಸಿದರೆ ಬೆಂಗಳೂರು ನಗರದಲ್ಲಿ ಸಾರಿಗೆ ಸಂಪರ್ಕಕ್ಕೆ ತೊಂದರೆ ಆಗಲಿದೆ. ಆದ್ದರಿಂದ ಸರ್ಕಾರ ಮುಷ್ಕರ ನಿಲ್ಲಿಸಲು ಕ್ರಮ ಕೈಗೊಳ್ಳಲಿದೆಯೇ? ಎಂದು ಕಾದು ನೋಡಬೇಕಿದೆ.
ಅಕ್ಟೋಬರ್ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ನೌಕರರ ಸಂಘಟನೆಗಳ ಜೊತೆ ಸಭೆಯನ್ನು ನಡೆಸಿದ್ದರು. ಸರ್ಕಾರ ನೌಕರರಿಗೆ ನ್ಯಾಯಯುತವಾಗಿ ಸಿಗಲಿರುವ ಸೌಲಭ್ಯಗಳನ್ನು ನೀಡಲಿದೆ. ನೌಕರರ ಬೇಡಿಕೆ ನಮ್ಮ ಗಮನದಲ್ಲಿಯೂ ಇದೆ. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದ್ದರು.
ಸಾರಿಗೆ ನಿಗಮದ ನೌಕರರು 2024ರಲ್ಲಿ ವೇತನ ಪರಿಷ್ಕರಣೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ನವೆಂಬರ್ ತಿಂಗಳು ಬಂದರೂ ಅದಕ್ಕೆ ಸ್ಪಂದಿಸಿಲ್ಲ. ವೇತನ ಪರಿಷ್ಕರಣೆ ವಿಚಾರದಲ್ಲಿಯೂ ನೌಕರರ ನಡುವೆ ಭಿನ್ನಾಭಿಪ್ರಾಯವಿದೆ. ಸರಿ ಸಮಾನ ವೇತನ ಮತ್ತು 7ನೇ ವೇತನ ಆಯೋಗದ ಮಾದರಿಯಲ್ಲಿಯೇ ನಮಗೂ ವೇತನ ಎಂದು ಎರಡು ಚರ್ಚೆಗಳು ಸಾಗಿವೆ.












Click it and Unblock the Notifications