ಬೆಳಗಾವಿ ಗಡಿ ಪ್ರಕರಣದ ವಕೀಲರಿಗೆ ದಿನಕ್ಕೆ 60 ಲಕ್ಷ ರೂ. ವೆಚ್ಚ, ಯಾಕೆ?
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದಲ್ಲಿ ರಾಜ್ಯದ ಪರ ವಾದಿಸುವ ವಕೀಲರಿಗೆ ವೃತ್ತಿಪರ ಶುಲ್ಕವಾಗಿ ಸರ್ಕಾರವು ದಿನಕ್ಕೆ 60 ಲಕ್ಷ ರೂಪಾಯಿಗಳಷ್ಟು ಹಣ ವ್ಯಯಿಸುತ್ತಿದೆ.
ಬೆಂಗಳೂರು, ಜನವರಿ 25: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟವು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ರಂಧ್ರವನ್ನೇ ಮಾಡಿಬಿಟ್ಟಿದೆ. ಪ್ರಕರಣದ ಹೋರಾಟದಲ್ಲಿ ತೊಡಗಿರುವ ವಕೀಲರಿಗೆ ವೃತ್ತಿಪರ ಶುಲ್ಕವಾಗಿ ರಾಜ್ಯವು ದಿನಕ್ಕೆ 60 ಲಕ್ಷ ರೂಪಾಯಿಗಳಷ್ಟು ಹಣ ವ್ಯಯಿಸುತ್ತಿದೆ.
ಜ.18ರಂದು ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಹಿರಿಯ ವಕೀಲ ಮುಕುಲ್ ರೋಹಟಗಿ ನೇತೃತ್ವದ ಕಾನೂನು ತಂಡವು ಶುಲ್ಕ ಮತ್ತು ಇತರ ವೆಚ್ಚಗಳಲ್ಲಿ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಲು ತಲಾ 60 ಲಕ್ಷ ರೂಪಾಯಿಗಳನ್ನು ಪಡೆದಿದೆ ಎಂದು ತಿಳಿದು ಬಂದಿದೆ. ಈ ತಂಡದಲ್ಲಿ ವಕೀಲರಾದ ಶ್ಯಾಮ್ ದಿವಾನ್, ಉದಯ್ ಹೊಳ್ಳ, ಮಾರುತಿ ಬಿ ಝಿರಲಿ, ವಿಎನ್ ರಘುಪತಿ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಇದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಣಹೇಡಿಯಂತೆ ಬಾಲ ಮುದುರಿಕೊಂಡಿರುವ ರಾಜ್ಯ ಸರ್ಕಾರ: ದೇವೇಗೌಡ
ಈ ಶುಲ್ಕಗಳು ಸ್ಟಾರ್ ಹೋಟೆಲ್ಗಳಲ್ಲಿ ವಕೀಲರ ವಸತಿ ಮತ್ತು ಎಕಾನಮಿ ಮತ್ತು ಎಕ್ಸುಕ್ಯೂಟಿ ಕ್ಲಾಸ್ಗಳಲ್ಲಿ ವಿಮಾನದ ಪ್ರಯಾಣದ ವೆಚ್ಚಗಳನ್ನು ಹೊರತುಪಡಿಸುತ್ತವೆ. ಹೋಟೆಲ್ ಮತ್ತು ವಿಮಾನ ಪ್ರಯಾಣದ ವ್ಯವಸ್ಥೆಗಳನ್ನು ಸರ್ಕಾರವು ಮಾಡುತ್ತದೆ. ಇಲ್ಲವೆ ನಿಜವಾದ ಆಧಾರದ ಮೇಲೆ ಮರುಪಾವತಿ ಮಾಡುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಿದ್ಧತೆಗಾಗಿ ದಿನಕ್ಕೆ 5.5 ಲಕ್ಷ ರೂಪಾಯಿ
ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಮುಕುಲ್ ರೋಹಟಗಿ ಅವರಿಗೆ ದಿನಕ್ಕೆ 22 ಲಕ್ಷ ರೂಪಾಯಿ ಹಾಗೂ ಸಮಾವೇಶ, ಇತರೆ ಕೆಲಸ ಸೇರಿದಂತೆ ಪ್ರಕರಣದ ಸಿದ್ಧತೆಗಾಗಿ ದಿನಕ್ಕೆ 5.5 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಶ್ಯಾಮ್ ದಿವಾನ್ ಅವರಿಗೆ ದಿನಕ್ಕೆ 6 ಲಕ್ಷ ರೂ.ಗಳನ್ನು ಶುಲ್ಕವಾಗಿ ಪಡೆದಿದ್ದಾರೆ. ಇದಲ್ಲದೆ ಕೇಸಿನ ತಯಾರಿ ಮತ್ತು ಇತರ ಕೆಲಸಗಳಿಗಾಗಿ ದಿನಕ್ಕೆ 1.5 ಲಕ್ಷ ರೂ. ಪ್ರಯಾಣ ವೆಚ್ಚವನ್ನು ಒಳಗೊಂಡಂತೆ ಹೊರ ರಾಜ್ಯಗಳ ಭೇಟಿಗಾಗಿ ದಿನಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.
ಪ್ರಕರಣದ ತಯಾರಿಗಾಗಿ 1.25 ಲಕ್ಷ
ಸುಪ್ರೀಂ ಕೋರ್ಟ್ಗೆ ಹಾಜರಾಗಲು ಅಡ್ವೊಕೇಟ್ ಜನರಲ್ಗೆ ದಿನಕ್ಕೆ 3 ಲಕ್ಷ ರೂಪಾಯಿ ಅದು ಬಿಟ್ಟರೆ ಪ್ರಕರಣದ ತಯಾರಿಗಾಗಿ 1.25 ಲಕ್ಷ ರೂಪಾಯಿ, ಹೊರ ರಾಜ್ಯ ಭೇಟಿಗೆ 2 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಉದಯ ಹೊಳ್ಳ ಅವರಿಗೆ ಸರ್ಕಾರ ದಿನಕ್ಕೆ 2 ಲಕ್ಷ ರೂಪಾಯಿ ನೀಡಿದೆ. ಇದು ಪ್ರಕರಣದ ಸಿದ್ಧತೆಗಾಗಿ 75,000 ರೂಪಾಯಿ, ಅರ್ಜಿಗಳ ಇತ್ಯರ್ಥಕ್ಕೆ 1.5 ಲಕ್ಷ ರೂಪಾಯಿ ಮತ್ತು ಹೊರ ರಾಜ್ಯಗಳ ಭೇಟಿಗಾಗಿ 1.5 ಲಕ್ಷ ರೂಪಾಯಿಗಳನ್ನು ಹೊರತುಪಡಿಸುತ್ತದೆ.
ಪ್ರಕರಣದ ಸಿದ್ಧತೆಗಾಗಿ ದಿನಕ್ಕೆ 60,000
ಇನ್ನೂ ಮತ್ತೋರ್ವ ವಕೀಲ ಮಾರುತಿ ಝಿರಲಿ ಅವರಿಗೆ ಪ್ರತಿ ಹಾಜರಾತಿಗೆ 1 ಲಕ್ಷ ರೂಪಾಯಿ, ಪ್ರಕರಣದ ಸಿದ್ಧತೆಗಾಗಿ ದಿನಕ್ಕೆ 60,000 ರೂಪಾಯಿ ಮತ್ತು ಹೊರ ರಾಜ್ಯಗಳ ಭೇಟಿಗೆ ದಿನಕ್ಕೆ 50,000 ರೂಪಾಯಿ ಅಡ್ವೊಕೇಟ್-ಆನ್-ರೆಕಾರ್ಡ್ ರಘುಪತಿ ಪ್ರತಿ ಪ್ರದರ್ಶನಕ್ಕೆ 35,000 ರೂಪಾಯಿ, ಪ್ರಕರಣದ ತಯಾರಿಗಾಗಿ 15,000 ರೂಪಾಯಿ ಮತ್ತು ಹೊರ ರಾಜ್ಯಗಳ ಭೇಟಿಗಾಗಿ ದಿನಕ್ಕೆ 30,000 ರೂಪಾಯಿ ಪಡೆಯುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಹಾರಾಷ್ಟ್ರದಿಂದ 2004ರಲ್ಲಿ ಅರ್ಜಿ
ಬೆಳಗಾವಿ ಮತ್ತು ಕರ್ನಾಟಕದ ಸುಮಾರು 865 ಹಳ್ಳಿಗಳ ಮೇಲೆ ಹಕ್ಕು ಕೋರಿ ಮಹಾರಾಷ್ಟ್ರ 2004ರಲ್ಲಿ ಸಲ್ಲಿಸಿದ ಅರ್ಜಿಯ ವಿಲೇವಾರಿಯನ್ನು ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸಿಲ್ಲ. ಕಳೆದ ವರ್ಷ ನವೆಂಬರ್ 30ರಂದು ಸುಪ್ರೀಂ ಕೋರ್ಟ್ ವಾದ ಆಲಿಸಲು ನಿಗದಿಯಾಗಿತ್ತು. ಮುಂದಿನ ತಿಂಗಳು ವಿಚಾರಣೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.